ದತ್ತಜಯಂತಿ ನಿಷೇಧಕ್ಕೆ ಕಾರ್ನಾಡ್ ಮತ್ತಿತರ ಸಾಹಿತಿಗಳ ಆಗ್ರಹ
ದತ್ತಜಯಂತಿ ನಿಷೇಧಕ್ಕೆ ಕಾರ್ನಾಡ್ ಮತ್ತಿತರ ಸಾಹಿತಿಗಳ ಆಗ್ರಹ
ನಮ್ಮ ಸಾಂಸ್ಕೃತಿಕ ಬೇರುಗಳಲ್ಲಿ ಇಂಥಾ ಉತ್ಸವ ಇಲ್ಲ, ಇದು ಧರ್ಮ ರಾಜಕೀಯ- ಕಾರ್ನಾಡ್
ಜಿಲ್ಲೆಯ ದತ್ತಪೀಠಕ್ಕೆ ಸಾಹಿತಿಗಳು ಮತ್ತು ಹಲವು ಸಂಘಟನೆಗಳ ಮುಖಂಡರು ಶುಕ್ರವಾರ (ನ. 21) ಭೇಟಿ ನೀಡಿ ಮಾಹಿತಿ ಕಲೆಹಾಕಿದ ನಂತರ ಸುದ್ದಿಗಾರರ ಜೊತೆ ಕಾರ್ನಾಡ್ ಮಾತಾಡಿದರು. ಪ್ರೊ. ಜಿ.ಕೆ.ಗೋವಿಂದರಾವ್, ಶೂದ್ರ ಶ್ರೀನಿವಾಸ್, ಡಾ.ಮರುಳಸಿದ್ಧಪ್ಪ, ಬಾನು ಮುಷ್ತಾಕ್, ಗೌರಿ ಲಂಕೇಶ್, ಪ್ರೊ.ವಿ.ಕೆ.ಶ್ರೀಧರ್, ಅಶೋಕ್, ಅಹೋಬಳಪತಿ ಮೊದಲಾದವರು ದತ್ತಪೀಠಕ್ಕೆ ಭೇಟಿ ಕೊಟ್ಟವರ ಪೈಕಿ ಇದ್ದರು.
ದತ್ತ ಜಯಂತಿ, ದತ್ತ ಮಾಲೆ, ಶೋಭಾ ಯಾತ್ರೆ- ಇವಾವುವೂ ಕರ್ನಾಟಕ ಸಂಸ್ಕೃತಿ ಸಂಪ್ರದಾಯಗಳಲ್ಲಿ ಎಂದೂ ಇದ್ದವಲ್ಲ. ಹೊಸದಾಗಿ ಸೃಷ್ಟಿಸಲಾಗಿರುವ ಈ ಆಚರಣೆಗಳಿಗೆ ಯಾವುದೇ ಧಾರ್ಮಿಕ ಹಿನ್ನೆಲೆ ಇಲ್ಲ. ಧರ್ಮದ ಹೆಸರಿನಲ್ಲಿ ಮಾಡುತ್ತಿರುವ ರಾಜಕಾರಣ ಇದು ಎಂದು ಕಾರ್ನಾಡ್ ದೂರಿದರು.
ದತ್ತ ಜಯಂತಿ ಮತ್ತು ಶೋಭಾ ಯಾತ್ರೆ ನಿಷೇಧಿಸುವಂತೆ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ಸದ್ಯದಲ್ಲೇ ಮನವಿ ಸಲ್ಲಿಸಲಾಗುವುದು ಎಂದರು.
ಸಾಹಿತಿ ಮರುಳಸಿದ್ಧಪ್ಪ ಮಾತನಾಡಿ, ದತ್ತಗಿರಿಯಲ್ಲಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ವಿವಾದ ಕರ್ನಾಟಕಕ್ಕೆ ಸಂಬಂಧಿಸಿದ್ದು. ಇದರಲ್ಲಿ ಮೂಗು ತೂರಿಸಲು ನರೇಂದ್ರ ಮೋದಿ, ತೊಗಾಡಿಯಾ ಯಾರು ಎಂದು ಪ್ರಶ್ನಿಸಿದರು.
ಕಾನೂನು ಮತ್ತು ಸುವ್ಯವಸ್ಥೆಗೆ ತೊಡಕಾಗುವುದಾದರೆ ದತ್ತಪೀಠದ ಆಚರಣೆಗಳನ್ನು ರದ್ದು ಪಡಿಸಲು ಸರ್ಕಾರ ಹಿಂಜರೆಯುವುದಿಲ್ಲ ಎಂದು ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಇತ್ತೀಚೆಗೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
(ಇನ್ಫೋ ವಾರ್ತೆ)
ಪೂರಕ ಓದಿಗೆ-
ದತ್ತಪೀಠ ಚರ್ಚೆಗೆ ಬನ್ನಿ -ಕಾರ್ನಾಡ್ಗೆ ಭಜರಂಗದಳದ ಆಹ್ವಾನ
ಮುಖಪುಟ / ವಾರ್ತೆಗಳು












Click it and Unblock the Notifications