ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಸೆಂಬರ್‌ನಿಂದ ರಂಗ ಶಂಕರದಲ್ಲಿ ಬಣ್ಣಬಣ್ಣದ ನಾಟಕಗಳ ರಂಗವಲ್ಲಿ

By Staff
|
Google Oneindia Kannada News

ಡಿಸೆಂಬರ್‌ನಿಂದ ರಂಗ ಶಂಕರದಲ್ಲಿ ಬಣ್ಣಬಣ್ಣದ ನಾಟಕಗಳ ರಂಗವಲ್ಲಿ
ಚಿಕ್ಕ ವಯಸ್ಸಲ್ಲೇ ತೀರಿಹೋದ ಶಂಕರ್‌ನಾಗ್‌ ಕಂಡಿದ್ದ ಕನಸನ್ನು ಅವರ ಹೆಂಡತಿ ಅರುಂಧತಿ ಸ್ನೇಹಿತರ ಬೆಂಬಲದಿಂದ ನನಸಾಗಿಸಿದ್ದಾರೆ. ಬೆಂಗಳೂರಲ್ಲಿ ಹೈಟೆಕ್‌ ರಂಗ ಮಂದಿರ ತಲೆಯೆತ್ತಿ ನಿಂತಿದೆ. ಬನ್ನಿ, ರಂಗದ ಒಂದು ಸುತ್ತು ಸುತ್ತಿ, ಅರುಂಧತಿ ಜೊತೆ ಮಾತಾಡೋಣ.

Rangashankara, the dream of Shankar Nagಡಿಸೆಂಬರ್‌ನಲ್ಲಿ ಬೆಂಗಳೂರಿಗೆ ಬನ್ನಿ. ಇಲ್ಲೊಂದು ರಂಗಮಂದಿರ. ಅಲ್ಲಿ ಕಾಫಿ ಕುಡಿಯುತ್ತಾ, ಚೆಂದದ ಪುಸ್ತಕವನ್ನು ಹುಡುಕಬಹುದು. ಬಯಸಿದರೆ ಅದನ್ನು ಕೊಳ್ಳುವ ಅವಕಾಶವೂ ಉಂಟು. ಅದು ಬೇಜಾರಾದರೆ ಒಂದು ಕಲಾ ಗ್ಯಾಲರಿ ಮನಸ್ಸನ್ನು ಸೆಳೆಯುತ್ತದೆ. ಎಲ್ಲಾ ನೋಡಿ ದೂರ ಕಣ್ಣಿಟ್ಟರೆ ಅಲ್ಲೊಂದು ಸುಸಜ್ಜಿತ ಬೃಹತ್‌ ವೇದಿಕೆ. ಅದಕ್ಕೆ ದಶ ದಿಕ್ಕುಗಳಿಂದಲೂ ಬೆಳಕು ಹರಿದು ಬರುವಂಥಾ ವ್ಯವಸ್ಥೆ. ಇದೇ ರಂಗ ಶಂಕರ. ತಮ್ಮ ಮೆಚ್ಚಿನ ಶಂಕರನ ಹೆಸರಿನಲ್ಲಿ ಅರುಂಧತಿ ಹಾಗೂ ಸ್ನೇಹಿತರು ದುಡ್ಡೆತ್ತಿ ಕಟ್ಟಿಸಿರುವ ಅಪರೂಪದ ‘ಪಾಷ್‌’ ರಂಗಮಂದಿರ.

ಕನ್ನಡದಲ್ಲಿ ಇಂಥದೊಂದು ಥಿಯೇಟರ್‌ ಕಟ್ಟಬೇಕು ಅನ್ನೋದು ಶಂಕರ್‌ ಕನಸಾಗಿತ್ತು. ಅದಕ್ಕೆ ನಾನೂ ಬಣ್ಣ ಹಚ್ಚಿದ್ದೆ. ಅದನ್ನು ನೋಡುವ ಭಾಗ್ಯ ಶಂಕರ್‌ಗಂತೂ ಸಿಗಲಿಲ್ಲ. ಆತನ ಕನಸನ್ನು ನನಸು ಮಾಡಿದ ಸಂತೋಷ ನನ್ನದಾಗಿದೆ. ವರ್ಷಕ್ಕೆ 300 ನಾಟಕಗಳನ್ನು ಪ್ರದರ್ಶನ ಮಾಡುವ ಮೂಲಕ ವಿವಿಧ ಭಾಷೆಗಳ ನಾಟಕಗಳಿಗೆ ರಂಗಕೊಂಡಿ ಹಾಕುವುದು ನನ್ನ ಉಮೇದಿ. ಥಿಯೇಟರ್‌ನಲ್ಲಿ 300 ಸೀಟುಗಳಿವೆ. ಬೇಕಾದ ಸೌಕರ್ಯಗಳಿವೆ. 3.2 ಕೋಟಿ ರುಪಾಯಿ ಖರ್ಚಾಗಿದೆ ಎಂದು ಅರುಂಧತಿ ನಾಗ್‌ ಸಂತೋಷ ಹಂಚಿಕೊಂಡರು.

ಅರುಂಧತಿ ಹೇಳಿದ ರಂಗಶಂಕರದ ಪೂರ್ವಾಪರ

ರಂಗಶಂಕರದಲ್ಲಿ ಕಾಫಿ ಮಾರಲು ಕೆಫೆ ಕಾಫಿ ಡೇ ಮುಂದಾಗಿದೆ. ನಾಟಕ ನೋಡಲು ಮುಂಚೆ ಬರುವ ಸಹೃದಯರು ತಿಂಡಿ ತಿನ್ನುತ್ತಲೋ ಕಾಫಿ ಕುಡಿಯುತ್ತಲೋ ಗೆಳೆಯರ ಜೊತೆ ಹರಟಬಹುದು. ಗೆಳೆಯರಿಲ್ಲದಿದ್ದರೆ ಚೆಂದದ ಪುಸ್ತಕದಂಗಡಿ ಜೊತೆಗಿರುತ್ತದೆ. ಇಲ್ಲಿ ಮಕ್ಕಳಿಗಾಗೇ ಮೀಸಲಾದ ರಂಗವೂ ಇದೆ. ಇಲ್ಲಿ ನಾಟಕಗಳನ್ನು ಆಯೋಜಿಸುವವರು ಮಾತ್ರ ದೊಡ್ಡವರು. ಬೆಂಗಳೂರಿನ 200 ಶಾಲೆಗಳ 40 ಸಾವಿರ ಮಕ್ಕಳಿಗೆ ಅವರಿಗಾಗೇ ಮೀಸಲಾದ ನಾಟಕಗಳನ್ನು ಇಲ್ಲಿ ತೋರಿಸಲಾಗುವುದು.

ತಿರುಗುವೇದಿಕೆ : ಮೊದಲ ಮಹಡಿಯಲ್ಲಿ ಒಂದು ಕಲಾ ಗ್ಯಾಲರಿ ಇದೆ. ಅದರ ತೀರಾ ಮುಂದಗಡೆ ಬೃಹತ್‌ ವೇದಿಕೆ. ಈ ವೇದಿಕೆಯನ್ನು ಜನ ಕೂಡುವ ಜಾಗಕ್ಕೆ ಜಾರುಬಂಡೆಯಂತೆ ಮಾಡಿ ಸೇರಿಸಲಾಗಿದೆ. ಪ್ರೇಕ್ಷಕರ ಜೊತೆ ಮುಖಾಮುಖಿಯಾಗುವಂತಹ ಅವಕಾಶ ಇದರಿಂದ ಸಾಧ್ಯವಾಗುತ್ತದೆ. ಸುತ್ತುವಂತೆ ಸಿದ್ಧಪಡಿಸಿರುವ ವೇದಿಕೆ 22 ಅಡಿ ವ್ಯಾಸದಷ್ಟು ಅಳತೆಯದ್ದು. ಚೆನ್ನಾದ ಬೆಳಕಿನ ವ್ಯವಸ್ಥೆಯಿರುವ ಶೃಂಗಾರ ಹಾಗೂ ತಂಗುಕೋಣೆಗಳು ಕೂಡ ವೇದಿಕೆಗೆ ಹೊಂದಿಕೊಂಡಂತೆ ಇವೆ. ಇಡೀ ಮೊದಲ ಮಹಡಿ ಗಾಲಿ ಕುರ್ಚಿಯಲ್ಲೇ ಓಡಾಡುವಂತಿದೆ. 20 ಗಾಲಿ ಕುರ್ಚಿಗಳು ಇಲ್ಲಿ ಒಮ್ಮೆಲೇ ಓಡಾಡಬಹುದು.

ಲೇಟಾಗಿ ಬರುವವರಿಗೊಂದು ಗ್ಯಾಲರಿ : ಹೆಸರಾಂತ ವಾಸ್ತುಶಿಲ್ಪಿ ಶಾರುಖ್‌ ಮಿಸ್ತ್ರಿ ರಂಗಶಂಕರದ ವಿನ್ಯಾಸಕಾರ. ಬಹುತೇಕ ರಂಗ ಮಂದಿರಗಳಲ್ಲಿ ವೇದಿಕೆ ಹಾಗೂ ಬೆಳಕಿಗೆ ಮಾತ್ರ ಪ್ರಾಮುಖ್ಯತೆ ಕೊಡುತ್ತಾರೆ. ಆದರೆ, ರಂಗಶಂಕರದಲ್ಲಿ ಪ್ರೇಕ್ಷಕ ಪ್ರಭುವಿಗೆ ಕಲಾಕಾರರಿಗೆ ಕೊಟ್ಟಷ್ಟೇ ಆದ್ಯತೆ ಇರುತ್ತದೆ. ಇಡೀ ವಾತಾವರಣವೇ ಹಾಗಿದೆ. ಅಷ್ಟೇ ಅಲ್ಲ, ತಡವಾಗಿ ಬರುವ ಪ್ರೇಕ್ಷಕರಿಗಾಗಿಯೇ ವಿಶೇಷ ಗ್ಯಾಲರಿ ಇದೆ. ಹೀಗಾಗಿ ನಾಟಕ ಪ್ರಾರಂಭಿಸಿದ ನಂತರ ಪ್ರೇಕ್ಷಕರ ತಲೆಗಳ ನೋಡಿ ಕಲಾವಿದರು ವಿಚಲಿತರಾಗುವಂಥ ಪರಿಸ್ಥಿತಿ ಸೃಷ್ಟಿಯಾಗದು.

ನಾಟಕಗಳಷ್ಟೇ ಅಲ್ಲ : ರಂಗಶಂಕರದಲ್ಲಿ ಕೇವಲ ನಾಟಕಗಳಷ್ಟೇ ಅಲ್ಲದೆ ಸಂಗೀತ- ನೃತ್ಯೋತ್ಸವ, ಜಾನಪದ ಹಬ್ಬಗಳನ್ನು ನಡೆಸಲಾಗುವುದು. ಪ್ರತಿ ವರ್ಷ ನಾಟಕಗಳ ಹಬ್ಬ ಮಾಡುವ ಯೋಚನೆಯೂ ಇದೆ. ವಿವಿಧ ಪ್ರಕಾರದ ನಾಟಕಗಳನ್ನು ಒಂದೇ ಕಾಲದಲ್ಲಿ ನೋಡುವ ಅಪರೂಪದ ಅವಕಾಶವನ್ನು ಈ ಹಬ್ಬ ಕಲ್ಪಿಸುತ್ತದೆ.

ನಾಟಕ ಬರೆಯುವ ಕಲೆ ಹಾಗೂ ಪ್ರಯೋಗಗಳ ಬಗ್ಗೆ ಕಮ್ಮಟಗಳನ್ನು ನಡೆಸುವುದರ ಜೊತೆಗೆ ರಂಗ ಸ್ಪರ್ಧೆಗಳನ್ನು ಏರ್ಪಡಿಸುವ ಬಗೆಗೂ ಚಿಂತಿಸುತ್ತಿದ್ದೇವೆ. ರಂಗಶಂಕರ 1992ರಲ್ಲಿ ಹುಟ್ಟಿಕೊಂಡ ಸಂಕೇತ್‌ ಟ್ರಸ್ಟಿನ ಬೌದ್ಧಿಕ ಕೂಸು. ಇದು ನನಸಾಗುವಲ್ಲಿ ಎಂ.ಎಸ್‌.ಸತ್ಯು, ಗಿರೀಶ್‌ ಕಾರ್ನಾಡರಂಥ ಪ್ರತಿಭೆಗಳ ಪಾತ್ರವಿದೆ. ಅನೇಕ ಕಲಾವಿದ ಮಿತ್ರರ ಬೆಂಬಲವಿದೆ. ಅವರಿಗೆ ಧನ್ಯವಾದ.

ಎಂ.ಎಸ್‌.ಸತ್ಯು ಅವರಂತೂ ಆನಂದಭರಿತರಾಗಿದ್ದರು. ಇದು ಶಂಕರನಿಗೆ ಸಲ್ಲಲಿರುವ ಶ್ರದ್ಧಾಂಜಲಿಯಷ್ಟೇ ಅಲ್ಲ. ಹೊಸ ಜನಾಂಗದ ರಂಗಮಿತ್ರರು, ನಾಟಕಕಾರರು, ನಟ- ನಿರ್ದೇಶಕರಿಗೆ ತವರುಮನೆಯೂ ಆಗುವುದರಲ್ಲಿ ಅನುಮಾನವಿಲ್ಲ ಎಂದು ಸತ್ಯು ಹೇಳಿದಾಗ, ಅರುಂಧತಿ ಕಣ್ಣಲ್ಲಿ ಸಾರ್ಥಕ್ಯದ ಮಿಂಚು ಹೊಳೆಯಿತು.

ರಂಗಶಂಕರದ ವೆಬ್‌ಸೈಟ್‌ ನೋಡಿ- http://www.rangashankara.org/.

(ಪಿಟಿಐ)

ಇದನ್ನೂ ಓದಿ-
ಅರುಂಧತಿ ನಾಗ್‌ ಸಂದರ್ಶನ

Post your views

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X