ಹಳಿ ತಪ್ಪಿದ ಮೈಸೂರು-ಬೆಂಗಳೂರು ರೈಲು, 4 ಸಾವು
ಹಳಿ ತಪ್ಪಿದ ಮೈಸೂರು-ಬೆಂಗಳೂರು ರೈಲು, 4 ಸಾವು
ಗಾಯಗೊಂಡ 54 ಪ್ರಯಾಣಿಕರ ಪೈಕಿ 13 ಮಂದಿ ಕೆ.ಆರ್. ಆಸ್ಪತ್ರೆಗೆ
ಮಂಡ್ಯ ಜಿಲ್ಲೆಯ ಪೊಲೀಸ್ ಸೂಪರಿಂಟೆಂಡೆಂಟ್ ಆರ್.ಹಿತೇಂದ್ರ ಸುದ್ದಿಗಾರರ ಜೊತೆ ಮಾತಾಡುತ್ತಾ- ಈವರೆಗೆ ನಾಲ್ಕು ಮಂದಿ ಸತ್ತಿದ್ದು, ಅಷ್ಟೂ ಶವಗಳು ಸಿಕ್ಕಿವೆ. ತೀವ್ರವಾಗಿ ಗಾಯಗೊಂಡ 13 ಪ್ರಯಾಣಿಕರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಸೇರಿಸಲಾಗಿದೆ. ಇಬ್ಬರು ಕಾಣೆಯಾಗಿದ್ದು, ಒಟ್ಟು 54 ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಸಯ್ಯದ್ ತಹ್ಸೀನಾ, ಅಶೀನಾ, ಪ್ರಭಾಮಣಿ ಮತ್ತು ಮಂಜುಳ ಅಪಘಾತಕ್ಕೆ ತುತ್ತಾದ ನತದೃಷ್ಟರು ಎಂದು ಹೇಳಿದರು.
ಒಂದು ಬೋಗಿಯ ಚಕ್ರದ ‘ಡಿಸ್ಕ್’ ಮುರಿದ ಕಾರಣ ರೈಲಿನ ಕೊನೆ ನಾಲ್ಕು ಬೋಗಿಗಳು ಹಳಿ ತಪ್ಪಿದವು. ಈ ಅಪಘಾತದ ಕಾರಣ ಮೈಸೂರು ಮಾರ್ಗದ 7 ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಇಡೀ ಘಟನೆಯ ಬಗ್ಗೆ ದಕ್ಷಿಣ ರೈಲ್ವೆ ಸುರಕ್ಷತಾ ವಿಭಾಗದ ಆಯುಕ್ತರು ಸಮಗ್ರ ತನಿಖೆ ನಡೆಸಲಿದ್ದಾರೆ. ಕೇಂದ್ರ ರೈಲ್ವೆ ಸಚಿವ ನಿತೀಶ್ ಕುಮಾರ್ ಸ್ಥಳಕ್ಕೆ ಭೇಟಿ ಕೊಟ್ಟು, ಘಟನೆಯ ವಿವರಗಳನ್ನು ಪಡೆದರು ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.
ಪರಿಹಾರ : ದುರಂತದಲ್ಲಿ ಮೃತಪಟ್ಟಿರುವವರ ಕುಟುಂಬಕ್ಕೆ ತಲಾ 1 ಲಕ್ಷ ರುಪಾಯಿ, ತೀವ್ರವಾಗಿ ಗಾಯಗೊಂಡವರಿಗೆ 25 ಸಾವಿರ ರುಪಾಯಿ ಹಾಗೂ ಸಣ್ಣ ಪುಟ್ಟ ಗಾಯಗಳಾದವರಿಗೆ 5 ಸಾವಿರ ರುಪಾಯಿ ಪರಿಹಾರವನ್ನು ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ಬಸವನಗೌಡ ಪಾಟೀಲ್ ಪ್ರಕಟಿಸಿದ್ದಾರೆ.
ಎಸ್ಸೆಂ ಕೃಷ್ಣ ಸಂತಾಪ : ರೈಲು ದುರಂತದಿಂದ ದಿಗ್ಭ್ರಮೆಗೊಂಡ ಕರ್ನಾಟಕದ ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಅಪಘಾತ ನಡೆದ ಸ್ಥಳದಲ್ಲಿನ ಕೆಲಸಗಳ ಬಗ್ಗೆ ಗಮನ ಹರಿಸಲು ಸರ್ಕಾರದ ಪ್ರತಿನಿಧಿಯಾಗಿ ಸಚಿವ ಪ್ರೊ. ಬಿ.ಕೆ.ಚಂದ್ರಶೇಖರ್ ಅವರನ್ನು ಕಳಿಸಿದ್ದಾರೆ.
ಅಪಘಾತ ಸಂಭವಿಸಿದ ಸ್ಥಳದಲ್ಲಿ ಬೋಗಿಗಳ ಚಕ್ರಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಅದನ್ನು ನೋಡಲು ನೂರಾರು ಗ್ರಾಮಸ್ಥರು ಜಮಾಯಿಸಿದ್ದಾರೆ. ಮೈಸೂರಿನಿಂದ ಬೆಂಗಳೂರಿಗೆ ನಿತ್ಯ ಕಚೇರಿಗೆ ಬರುವ ಅನೇಕ ಪ್ರಯಾಣಿಕರು ಪುಷ್- ಪುಲ್ ರೈಲಿನಲ್ಲಿದ್ದರು. ಹಳಿ ತಪ್ಪಿರುವ ಬೋಗಿಗಳ ಒಳಗೆ ಹಾಗೂ ಅಡಿಯಲ್ಲಿ ಯಾರಾದರೂ ಸಿಲುಕಿರಬಹುದೆ ಎಂದು ಪೊಲೀಸರು ಹುಡುಕಾಟ ನಡೆಸಿದ್ದಾರೆ. ಪೊಲೀಸ್ ಹಾಗೂ ಸ್ಥಳೀಯ ಅಧಿಕಾರಿಗಳು ಅಪಘಾತದ ಸ್ಥಳಕ್ಕೆ ಧಾವಿಸಿದ್ದು, ಪರಿಹಾರ ಕಾಮಗಾರಿಗಳು ಚುರುಕಾಗುವಂತೆ ನೋಡಿಕೊಳ್ಳುತ್ತಿದ್ದಾರೆ.
ಹೆಚ್ಚಿನ ಮಾಹಿತಿಗೆ ಈ ಸಹಾಯ ವಾಣಿಗಳ ಸಂಪರ್ಕಿಸಿ : (080) 2873103, (080) 2871932, (080) 2876288.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications