‘ಕಾಂಗ್ರೆಸ್ಗೆ ಕೃಷ್ಣ ನಾಯಕತ್ವ : ವಿಚಿತ್ರವೂ ಇಲ್ಲ , ವಿವಾದವೂ ಇಲ್ಲ’
ಬೆಂಗಳೂರು : ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಅವರೇ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸಾರಥ್ಯ ವಹಿಸುವರು ಎಂದು ಆರೋಗ್ಯ ಸಚಿವ ಕಾಗೋಡು ತಿಮ್ಮಪ್ಪ ಹೇಳುವ ಮೂಲಕ, ನಾಯಕತ್ವ ವಿವಾದವನ್ನು ಮುಂದುವರಿಸಿದ್ದಾರೆ.
'ಕಾಂಗ್ರೆಸ್ಗೆ ಕೃಷ್ಣ ನಾಯಕತ್ವ : ವಿಚಿತ್ರವೂ ಇಲ್ಲ , ವಿವಾದವೂ ಇಲ್ಲ" ಮುಖ್ಯಮಂತ್ರಿ ಕೃಷ್ಣರಿಗೆ ಸಚಿವ ಕಾಗೋಡು ತಿಮ್ಮಪ್ಪ ಬೆಂಬಲ ಮುಖ್ಯಮಂತ್ರಿಗಳು ಚುನಾವಣೆಯಲ್ಲಿ ಪಕ್ಷದ ಸಾರಥ್ಯವನ್ನು ವಹಿಸುವುದು ಸ್ವಾಭಾವಿಕವಾಗಿದ್ದು , ಇದರಂತೆ ಮುಖ್ಯಮಂತ್ರಿ ಕೃಷ್ಣ ಅವರೂ ಪಕ್ಷವನ್ನು ಚುನಾವಣೆಯಲ್ಲಿ ಮುನ್ನಡೆಸುವರು. ಇದರಲ್ಲಿ ವಿಚಿತ್ರವೂ ಇಲ್ಲ , ವಿವಾದವೂ ಇಲ್ಲ ಎಂದು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ಕೃಷ್ಣ ಅವರು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುವರು ಎಂದು ಹಿರಿಯ ಸಚಿವ ಧರ್ಮಸಿಂಗ್ ಅವರು ಬಿಜಾಪುರದಲ್ಲಿನ ಜನ ಸ್ಪಂದನ ಕಾರ್ಯಕ್ರಮದಲ್ಲಿ ಘೋಷಿಸಿದ್ದರು. ಆದರೆ, ಧರ್ಮಸಿಂಗ್ರ ಹೇಳಿಕೆಯನ್ನು ಹಿಗ್ಗಾಮುಗ್ಗ ಟೀಕಿಸಿದ್ದ ಸಂಸದ ಸಿ.ಕೆ.ಜಾಫರ್ ಷರೀಫ್- ನಾಯಕತ್ವದ ವಿಷಯವನ್ನು ಪಕ್ಷದ ವರಿಷ್ಠರು ನಿರ್ಣಯಿಸುತ್ತಾರೆ ಎಂದಿದ್ದರು.
ಷರೀಫ್ ಹಾಗೂ ಇತರ ಸಚಿವರು ಪಕ್ಷದ ನಾಯಕತ್ವದ ವಿಷಯಗಳನ್ನು ಬಹಿರಂಗವಾಗಿ ಚರ್ಚಿಸುವುದರ ಕುರಿತು ಕೆಪಿಸಿಸಿ ಅಧ್ಯಕ್ಷ ಜನಾರ್ದನ ಪೂಜಾರಿ ಅಸಮಾಧಾನ ವ್ಯಕ್ತಪಡಿಸಿದ್ದರು. ಇನ್ನುಮುಂದೆ ಪಕ್ಷದ ನಾಯಕತ್ವದ ವಿಷಯಗಳ ಕುರಿತು ಯಾರೂ ಮಾತನಾಡಬಾರದು ಎಂದು ಪೂಜಾರಿ ತಾಕೀತು ಮಾಡಿದ್ದರು. ಆದರೆ, ಪೂಜಾರಿಯವರ ತಾಕೀತನ್ನು ತಿರಸ್ಕರಿಸಿ ಷರೀಫ್ ತಮ್ಮ ಟೀಕಾ ಪ್ರಹಾರ ಮುಂದುವರಿಸಿದ್ದರು. ಪ್ರಸ್ತುತ ಷರೀಫ್ರ ಹೇಳಿಕೆಗೆ ಕಾಗೋಡು ತಿಮ್ಮಪ್ಪ ವ್ಯತಿರಿಕ್ತ ಪ್ರತಿಕ್ರಿಯೆ ನೀಡುವುದರೊಂದಿಗೆ ಕಾಂಗ್ರೆಸ್ ಪಕ್ಷದ ಬೀದಿ ಜಗಳ ಮುಂದುವರಿದಂತಾಗಿದೆ.(ಪಿಟಿಐ)