ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲೆನಾಡ ಕೂಸು ಕುವೆಂಪು ವಿವಿ ಮಹತ್ವಾಕಾಂಕ್ಷೆಯ ಯೋಜನೆಗಳು

By Staff
|
Google Oneindia Kannada News

ಮಲೆನಾಡ ಕೂಸು ಕುವೆಂಪು ವಿವಿ ಮಹತ್ವಾಕಾಂಕ್ಷೆಯ ಯೋಜನೆಗಳು
ಕಾರ್ಪೊರೇಟ್‌ ಇಂಗ್ಲಿಷ್‌, ರೈನ್‌ ಹಾರ್ವೆಸ್ಟಿಂಗ್‌ನಂಥ ಗಮನಾರ್ಹ ವಿಷಯಗಳ ಕೋರ್ಸುಗಳು ಶುರುವಾಗಲಿವೆ

ಬೆಂಗಳೂರು : ರಾಜ್ಯದ ಏಕೈಕ ಹಾಗೂ ಭಾರತದ ಕೆಲವೇ ಕೆಲವು ಗ್ರಾಮೀಣ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಕುವೆಂಪು ವಿವಿ ಶೈಕ್ಷಣಿಕ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಸಲುವಾಗಿ ಕೆಲವು ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಹಾಕಿಕೊಂಡಿದೆ.

ಡಿಸೆಂಬರ್‌ 29, 2003ರಿಂದ ಡಿಸೆಂಬರ್‌ 29, 2004ರವರೆಗೆ ನಾಡಿನಾದ್ಯಂತ ಕುವೆಂಪು ಶತಮಾನೋತ್ಸವ ಜೋರಾಗಿ ನಡೆಯುವ ಸಂದರ್ಭವನ್ನು ಅವರ ಹೆಸರಿನದೇ ಆದ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ನಡೆಯನ್ನಾಗಿ ಪರಿವರ್ತಿಸುವುದು ಕುಲಸಚಿವ ಪ್ರವೀಣ್‌ ಚಂದ್ರ ಹಾಗೂ ಬಳಗದ ಉಮೇದಿ.

Dr. Chidananda Gowdaಗುರುವಾರ (ಆ.28) ನಗರದ ಪ್ರೆಸ್‌ ಕ್ಲಬ್ಬಿನಲ್ಲಿ ಸುದ್ದಿಗೋಷ್ಠಿ ನಡೆಸಿ ಕುವೆಂಪು ವಿವಿ ತನ್ನ ಯೋಜನೆಗಳನ್ನು ವಿವರಿಸಿತು. ಗೋಷ್ಠಿಯಲ್ಲಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಚಿದಾನಂದ ಗೌಡ, ವಿವಿ ಕುಲಸಚಿವ ಪ್ರವೀಣ್‌ ಚಂದ್ರ, ದೂರ ಶಿಕ್ಷಣ ಸಮಿತಿಯ ನಿರ್ದೇಶಕ ಎಸ್‌.ಎ.ಬಾರಿ, ವಿವಿಯ ಡಾ.ಬಿ.ಆರ್‌.ಅಂಬೇಡ್ಕರ್‌ ಕೇಂದ್ರದ ನಿರ್ದೇಶಕ ಜೆ.ಎಸ್‌.ಸದಾನಂದ, ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಮಾನಸ ಶಿಕ್ಷಣ ಪ್ರತಿಷ್ಠಾನದ ನಿರ್ದೇಶಕ ಪ್ರೊ.ಕೆ.ಎ.ಅಶೋಕ್‌ ಪೈ, ಇಂಗ್ಲಿಷ್‌ ಸ್ನಾತಕೋತ್ತರ ಶಿಕ್ಷಣ ವಿಭಾಗದ ಅಧ್ಯಕ್ಷ ಪ್ರೊ.ರಾಜೇಂದ್ರ ಚೆನ್ನಿ ಹಾಗೂ ಶಿಕಾರಿಪುರ ಹರಿಹರೇಶ್ವರ ಹಾಜರಿದ್ದರು.

ಕಿರಿಯ ವಿಶ್ವವಿದ್ಯಾಲಯವಾದ ಕುವೆಂಪು ವಿವಿ, 10 ದಶಲಕ್ಷ ಡಾಲರ್‌ ವೆಚ್ಚದ ಹಿರಿಯ ಸ್ವರೂಪದ ಯೋಜನೆಗಳನ್ನು ಹಮ್ಮಿಕೊಂಡಿದೆ. ಅವುಗಳೆಂದರೆ-

  • ಅಧ್ಯಯನ ಸಂಶೋಧನೆ ಕೇಂದ್ರಗಳ ಸ್ಥಾಪನೆ, ಹೊಸ ಶೈಕ್ಷಣಿಕ ವಿಷಯಗಳನ್ನು ಪ್ರಾರಂಭಿಸುವುದು, ಹೊಸ ಕಟ್ಟಡಗಳನ್ನು ಕಟ್ಟುವುದು ಮತ್ತು ಮೂಲಭೂತಸೌಕರ್ಯ ಅಭಿವೃದ್ಧಿ ಸೇರಿವೆ.
  • ಪಶ್ಚಿಮ ಘಟ್ಟದ ಮಧ್ಯದಲ್ಲಿ ವಿಶ್ವವಿದ್ಯಾಲಯ ಇರುವುದರಿಂದ ಜೈವಿಕ ವೈವಿಧ್ಯ ಅಧ್ಯಯನಕ್ಕೆ ಹೇಳಿ ಮಾಡಿಸಿದ ತಾಣ. ಜಗತ್ತಿನ ಯಾರೇ ಇಲ್ಲಿಗೆ ಬಂದು ಅಧ್ಯಯನ ನಡೆಸಲು ಅನುಕೂಲವಾಗುವಂಥ ಕೇಂದ್ರ ಸ್ಥಾಪಿಸುವುದು ವಿ.ವಿ.ಯ ಕನಸುಗಳಲ್ಲೊಂದು. ಜೈವಿಕ ವಿಜ್ಞಾನ, ಗಣಕ ವಿಜ್ಞಾನ, ಸ್ಥಳೀಯ ಸಂಸ್ಕೃತಿಗಳ ಅಧ್ಯಯನ, ಭಾರತೀಯ ಸಂಸ್ಕೃತಿ ಹಾಗೂ ತತ್ತ್ವಶಾಸ್ತ್ರ ಅಧ್ಯಯನ, ಸ್ಕೂಲ್‌ ಆಫ್‌ ಮ್ಯಾನೇಜ್‌ಮೆಂಟ್‌, ಅಂಬೇಡ್ಕರ್‌ ಕುರಿತ ಅಧ್ಯಯನ ಹಾಗೂ ತೌಲನಿಕ ಮತ್ತು ಕನ್ನಡ ಅಧ್ಯಯನ ಮಾಡಬಹುದಾದ ಕನ್ನಡ ಭಾರತಿ- ಇವು ವಿಶ್ವವಿದ್ಯಾಲಯ ಸ್ಥಾಪಿಸಬೇಕೆಂದಿರುವ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು.
  • ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ, ಡಿಪ್ಲೊಮ ಮೊದಲಾದ ಹೊಸ ಕೋರ್ಸುಗಳನ್ನು ವಿ.ವಿ. ಪ್ರಾರಂಭಿಸಬೇಕೆಂದಿದೆ. ಈ ಪೈಕಿ ಮೆಡಿಸಿನಲ್‌ ಪ್ಲಾಂಟ್ಸ್‌, ವಾಟರ್‌ ಮ್ಯಾನೇಜ್‌ಮೆಂಟ್‌, ಕಾರ್ಪೊರೇಟ್‌ ಇಂಗ್ಲಿಷ್‌, ರೈನ್‌ ಹಾರ್ವೆಸ್ಟಿಂಗ್‌ ಗಮನಾರ್ಹವಾದ ವಿಷಯಗಳು.
  • ಎರಡೂವರೆ ಕೋಟಿ ರುಪಾಯಿ ವೆಚ್ಚದಲ್ಲಿ ಕುವೆಂಪು ಶತಮಾನೋತ್ಸವ ಭವನ ನಿರ್ಮಿಸುವುದು.
ಕರ್ನಾಟಕದ ಮುಖ್ಯಮಂತ್ರಿ ಎಸ್ಸೆಂ. ಕೃಷ್ಣ ವಿಶ್ವವಿದ್ಯಾಲಯದ ಯೋಜನೆಗಳಲ್ಲಿ ಭಾಗಿಯಾಗುವಂತೆ ಅನೇಕರಿಗೆ ಪತ್ರ ಬರೆದಿದ್ದಾರೆ. ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಚಿದಾನಂದ ಗೌಡ ಆಗಸ್ಟ್‌ 29ರಿಂದ ಒಂದು ತಿಂಗಳು ಇಂಗ್ಲೆಂಡ್‌ ಮತ್ತು ಅಮೆರಿಕ ಪ್ರವಾಸ ಮಾಡಲಿದ್ದಾರೆ. ಅಲ್ಲಿನ ಕನ್ನಡ ಸಂಘಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಆಸಕ್ತ ವ್ಯಕ್ತಿಗಳಿಗೆ ವಿ.ವಿ.ಯ ಯೋಜನೆಗಳನ್ನು ವಿವರಿಸಿ, ಅವುಗಳಲ್ಲಿ ಸಹಭಾಗಿಯಾಗುವಂತೆ ಆಹ್ವಾನ ನೀಡಲಿದ್ದಾರೆ. ಐರ್ಲೆಂಡ್‌ನ ಬೆಲ್‌ಫಾಸ್ಟ್‌ ನಗರದಲ್ಲಿ ನಡೆಯಲಿರುವ ಕಾಮನ್‌ವೆಲ್ತ್‌ ವಿಶ್ವವಿದ್ಯಾಲಯಗಳ ಕುಲಪತಿಗಳ ಸಮಾವೇಶದಲ್ಲೂ ಅವರು ಭಾಗವಹಿಸಲಿದ್ದಾರೆ.

ಕುವೆಂಪು ವಿಶ್ವವಿದ್ಯಾಲಯ ಸಕಲರ ಸಹಭಾಗಿತ್ವಕ್ಕೆ ಆಮಂತ್ರಣ ಕೊಟ್ಟಿದೆ. ಎನ್‌ಆರ್‌ಐಗಳು ಈ ವಿ.ವಿ.ಗೆ ಹೀಗೆ ಸಹಾಯ ಮಾಡಬಹುದು-

  • ದೇಣಿಗೆ ಕೊಡುವುದು
  • ಬ್ಲಾಕ್‌ಗಳನ್ನು ಪ್ರಾಯೋಜನೆ ಮಾಡುವುದು
  • ಚಿನ್ನದ ಪದಕಗಳನ್ನು ಮಾಡಿಸಿ ಕೊಡುವುದು
  • ವಿಶ್ವವಿದ್ಯಾಲಯಕ್ಕೆ ಬಂದು ಪಾಠ ಮಾಡುವುದು.
ವಿಶ್ವವಿದ್ಯಾಲಯದ ಯೋಜನೆಗೆ ನಿಮ್ಮೆಲ್ಲರ ಪಾಲೂ ಅಗತ್ಯ ಎಂದು ಮಹಾಜನತೆಗೆ ಕರೆ ಕೊಟ್ಟಿರುವವರ ಪೈಕಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಯು.ಆರ್‌.ಅನಂತಮೂರ್ತಿ, ಪೂರ್ಣಚಂದ್ರ ತೇಜಸ್ವಿ, ಕೆ.ವಿ.ಸುಬ್ಬಣ್ಣ, ಪ್ರೊ. ಸಿ.ಎನ್‌.ಆರ್‌.ರಾವ್‌, ಡಾ. ಅಶೋಕ್‌ ಪೈ ಹಾಗೂ ಗಿರೀಶ್‌ ಕಾಸರವಳ್ಳಿ ಪ್ರಮುಖರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X