ಸರ್ಕಾರದ ಸ್ತ್ರೀ ಶಕ್ತಿ ಯೋಜನೆಯಲ್ಲಿ ಎಂಟಿಆರ್ ಅಳಿಲು ಸೇವೆ
ಸರ್ಕಾರದ
ಸ್ತ್ರೀ
ಶಕ್ತಿ
ಯೋಜನೆಯಲ್ಲಿ
ಎಂಟಿಆರ್
ಅಳಿಲು
ಸೇವೆ
ಇದು
ಎಂಟಿಆರ್ನ
ವ್ಯಾಪಾರಿ
ತಂತ್ರವೇ?
ಒಂದಷ್ಟು ಬಡ ಹೆಂಗಸರನ್ನು ಸೇರಿಸಿ ಒಂದು ಸ್ತ್ರೀ ಶಕ್ತಿ ಗುಂಪು ಅಂತ ಸರ್ಕಾರ ಮಾಡಿ, ಈ ಗುಂಪುಗಳು ಸಂಪಾದನೆ ಮಾಡಲು ದಾರಿ ಹುಡುಕಿಕೊಡುತ್ತಿರುವುದೇ ಸ್ತ್ರೀ ಶಕ್ತಿ ಯೋಜನೆ. ಇಂಥಾ ಗುಂಪುಗಳಿಗೆ ಹದವಾದ ಕುರುಕಲು ತಿಂಡಿ ಮಾಡುವ ತರಪೇತಿಯನ್ನು ಉಡುಪಿ ಜಿಲ್ಲೆಯಲ್ಲಿ ಎಂಟಿಆರ್ ಕೊಡುತ್ತಿದೆ.
ಸದ್ಯಕ್ಕೆ 10- 15 ಸ್ವ ಸಹಾಯ ಗುಂಪುಗಳಿಗೆ ಎಂಟಿಆರ್ ಸಿಬ್ಬಂದಿ ತಿಂಡಿ ಮಾಡುವ ತರಪೇತಿ ಕೊಡುತ್ತಿದ್ದಾರೆ. ಇವರೆಲ್ಲ ಸ್ವಂತ ಕಾಲಿನ ಮೇಲೆ ನಿಲ್ಲುವಂತೆ ಮಾಡುವುದು ಎಂಟಿಆರ್ ಉಮೇದಿ ಎಂದು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕ ಬಿ.ಆರ್.ಜಯರಾಮ ರಾಜ ಅರಸ್ ಹೇಳಿದರು.
ಸ್ವ- ಸಹಾಯ ಗುಂಪುಗಳ ಹೆಂಗಸರಿಗೆ ಮಾರುಕಟ್ಟೆಯ ವಿಷಯದಲ್ಲಿ ಕಿಂಚಿತ್ತೂ ತೊಂದರೆಯಿಲ್ಲ. ಎಂಟಿಆರ್ ತಿಂಡಿಗಳ ಹದಕ್ಕೆ ಬರುವಂತೆ ಅವರು ಕುರುಕಲು ತಯಾರು ಮಾಡುವ ಮಟ್ಟಿಗೆ ಕಲಿತರೆ, ಅವರ ತಿಂಡಿಗಳನ್ನು ಖುದ್ದು ಎಂಟಿಆರ್ ಖರೀದಿಸಲಿದೆ. ಆದರೆ, ಬಹುತೇಕ ಹೆಂಗಸರು ಮನೆ ಮನೆಗೆ ಹೋಗಿ ಮಾರುವುದನ್ನೇ ಇಷ್ಟ ಪಡುತ್ತಿದ್ದಾರೆ. ಇದಕ್ಕೂ ಎಂಟಿಆರ್ ಸಹಾಯ ಮಾಡಲು ಸಿದ್ಧವಿದೆ.
ಜೊತೆಗೆ ಎರಡು ಜಿಲ್ಲೆಗೆ ಒಬ್ಬರಂತೆ ಮಾರ್ಕೆಟಿಂಗ್ ಕನ್ಸಲ್ಟೆಂಟ್ಗಳನ್ನು ನೇಮಿಸಿ, ಸ್ವ- ಸಹಾಯ ಗುಂಪಿನ ಹೆಂಗಸರ ತಿಂಡಿಗೆ ತಕ್ಕ ಬೆಲೆ ದಕ್ಕಿಸುವ ಯೋಚನೆಯನ್ನೂ ಸರ್ಕಾರ ಮಾಡುತ್ತಿದೆ.
ಈವರೆಗೆ ರಾಜ್ಯದಲ್ಲಿ 75 ಸಾವಿರ ಸ್ತ್ರೀ ಸ್ವ- ಸಹಾಯ ಗುಂಪುಗಳು ರಚಿತವಾಗಿವೆ. ಈ ವರ್ಷದೊಳಗೆ ಇಂಥಾ ಇನ್ನೂ 25 ಸಾವಿರ ಗುಂಪುಗಳನ್ನು ರಚಿಸುವುದು ಸರ್ಕಾರದ ಗುರಿ. 75 ಸಾವಿರ ರುಪಾಯಿಯಷ್ಟು ಉಳಿತಾಯ ಮಾಡುವ ಗುಂಪುಗಳಿಗೆ ಸರ್ಕಾರ 15 ಸಾವಿರ ರುಪಾಯಿ ಹಾಗೂ 1 ಲಕ್ಷ ರುಪಾಯಿ ಉಳಿತಾಯ ಮಾಡುವ ಗುಂಪುಗಳಿಗೆ 20 ಸಾವಿರ ರುಪಾಯಿ ಇನ್ಸೆಂಟಿವ್ ಕೊಡುತ್ತದೆ.
ಎಂಟಿಆರ್ನ ಸೇವಾ ಭಾವನೆಯ ಹಿಂದೆ ವ್ಯಾಪಾರದ ವಾಸನೆ ಇದೆಯಾ? ಉಡುಪಿ ಜಿಲ್ಲೆಗೆ ಅದು ಮೊದಲು ಲಗ್ಗೆ ಇಟ್ಟಿರುವುದನ್ನು ನೋಡಿದರೆ ಇಂಥಾ ಅನುಮಾನ ಜೀವಗೊಳ್ಳುತ್ತದೆ. ಹೊಟೇಲ್ ಹಾಗೂ ಬೇಕರಿ ಉದ್ಯಮದಲ್ಲಿ ಉಡುಪಿಯವರು ವಿಶ್ವಾದ್ಯಂತ ಸದ್ದು ಮಾಡಿರುವ ಜನ. ಪಾಕದ ವಿಷಯದಲ್ಲಿ ಉಡುಪಿಯವರು ತೂಕದ ಮನುಷ್ಯರು. ರುಚಿಯಲ್ಲಿ ಗುಲಗಂಜಿಯಷ್ಟೂ ರಾಜಿಗೆ ತಯಾರಿಲ್ಲದ ಎಂಟಿಆರ್ ಸಹಜವಾಗಿಯೇ ಹದವಾದ ಅಡುಗೆ ಮಾಡುವವರ ಊರಿಗೇ ಲಗ್ಗೆಯಿಟ್ಟಿದೆ. ಬಡ ಹೆಂಗಸರಿಗೆ ಈ ರೀತಿಯಲ್ಲಿ ಸಹಾಯ ಮಾಡುವ ಅದರ ಇರಾದೆ ಮೆಚ್ಚತಕ್ಕದ್ದೇ. ಹಾಗೆಯೇ ಅದರ ವ್ಯಾಪಾರಿ ತಂತ್ರಕ್ಕೂ ಒಂದು ಶಹಬ್ಭಾಸ್ಗಿರಿ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು