‘ಸಾಲ ನೀಡುವಾಗ ಬಡವರನ್ನು ಸತಾಯಿಸಬೇಡಿ’
ಬೆಂಗಳೂರು : ಬ್ಯಾಂಕುಗಳು ಬಡವರಿಗೆ ಸಾಲ ನೀಡುವಲ್ಲಿ ವಿಳಂಬ ನೀತಿ ಅನುಸರಿಸಬಾರದು ಎಂದು ರಾಜ್ಯ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಸೂಚಿಸಿದ್ದಾರೆ.
ಬಡವರ ಬಳಿ ಹಲವಾರು ದಾಖಲೆಗಳನ್ನು ಕೇಳುವ ಬ್ಯಾಂಕು ಸಾಲ ವಿತರಿಸುವುದು ತೀರಾ ತಡವಾಗುತ್ತಿದೆ ಎಂಬ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಸತತ ಎರಡು ವರ್ಷಗಳಿಂದ ರಾಜ್ಯ ಕ್ಷಾಮಕ್ಕೆ ತುತ್ತಾಗಿರುವುದರಿಂದ ಸರಕಾರ ಬರ ಪರಿಹಾರ ಕಾಮಗಾರಿ ಕೈಗೆತ್ತಿಗೊಂಡಿದೆ. 125 ಕೋಟಿ ರೂಪಾಯಿ ಸಹಕಾರಿ ಸಾಲದ ಬಡ್ಡಿಯನ್ನು ಮನ್ನಾ ಮಾಡಿದೆ ಎಂದು ಗುರುವಾರ ನಡೆದ ರಾಜ್ಯ ಮಟ್ಟದ ಬ್ಯಾಂಕರ್ಸ್ ಸಭೆಯಲ್ಲಿ ಖರ್ಗೆ ಹೇಳಿದರು.
ಬಡ್ಡಿ ಮನ್ನಾ ಮಾಡುವುದರಿಂದ ಬ್ಯಾಂಕರ್ಗಳಿಗೆ ತುಸು ತ್ರಾಸಾದರೂ ಈ ಹಿನ್ನೆಲೆಯಲ್ಲಿ ಸರಕಾರದ ಜೊತೆ ಕೈಜೋಡಿಸಬೇಕು. ಇಂತಹ ಕಷ್ಟಕಾಲದಲ್ಲಿ ಬ್ಯಾಂಕರ್ಸ್ಗಳ ಸಹಕಾರ ಅಗತ್ಯ ಎಂದ ಖರ್ಗೆ, ಬ್ಯಾಂಕರ್ಗಳಿಂದ ಯಾವ ರೂಪದ ಸಹಾಯವನ್ನು ಸರಕಾರ ನಿರೀಕ್ಷಿಸುತ್ತದೆ ಎಂಬ ಬಗ್ಗೆ ವಿವರ ಕೊಡಲಿಲ್ಲ.
ಪ್ರಧಾನಮಂತ್ರಿ ರೋಜ್ಗಾರ್ ಯೋಜನೆ, ಗ್ರಾಮೀಣ ಮನೆ ಕಟ್ಟುವ ಯೋಜನೆ, ಕಿಸಾನ್ ಕ್ರೆಡಿಟ್ ಕಾರ್ಡ್ ಹಾಗೂ ಗ್ರಾಮೀಣ ಉದ್ಯೋಗ ನಿರ್ಮಾಣದಲ್ಲಿ ಬ್ಯಾಂಕುಗಳ ಪಾತ್ರವನ್ನು ಖರ್ಗೆ ಶ್ಲಾಘಿಸಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications