ತಿಮ್ಮಪ್ಪನ ಸನ್ನಿಧಿಯಿಂದ ಧೂಮಪಾನಿ ನೌಕರರ ಎತ್ತಂಗಡಿ
ತಿರುಪತಿ : ತಿಮ್ಮಪ್ಪ ದೇವರ ಸನ್ನಿಧಿಯಲ್ಲಿ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುವವರು ಸಿಗರೇಟು ಸೇದುವರೋ, ಹೆಂಡ ಕುಡಿಯುವರೋ ಎಂದು ಪರೀಕ್ಷೆ ನಡೆಯುತ್ತಿದೆ. ಪತ್ತೆಯಾಗುವ ಅಂಥಾ ಸಿಬ್ಬಂದಿಯನ್ನು ತಿರುಮಲ ತಿರುಪತಿ ದೇವಸ್ಥಾನಮ್ಸ್ನ ಇತರೆ ಸಂಸ್ಥೆಗಳಿಗೆ ವರ್ಗಾಯಿಸಲಾಗುವುದು.
ಹಿರಿಯ ಅಧಿಕಾರಿಗಳು ಒಂದು ತಂಡವಾಗಿ ಧೂಮಪಾನಿ ಹಾಗೂ ಕುಡುಕರನ್ನು ಹೆಕ್ಕುವ ಕೆಲಸಕ್ಕೆ ಶುರುವಿಟ್ಟುಕೊಂಡಿದ್ದಾರೆ. ತಿಮ್ಮಪ್ಪ ದೇವರ ಸನ್ನಿಧಿಯ ಪಾವಿತ್ರ್ಯವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಈ ಹೆಜ್ಜೆ ಇಟ್ಟಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಕುಡುಕರು, ಧೂಮಪೀನಿಗಳಷ್ಟೇ ಅಲ್ಲದೆ ಸಾಂಕ್ರಾಮಿಕ ರೋಗಗಳಿರುವವರನ್ನೂ ದೇವಸ್ಥಾನದಿಂದ ಎತ್ತಂಗಡಿ ಮಾಡಲಾಗುತ್ತಿದೆ. ಹಲವು ವರ್ಷಗಳ ಕಾಲ ದೇವಳದ ಸಂಕೀರ್ಣದಲ್ಲೇ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವವರನ್ನೂ ಬೇರೆ ಜಾಗಕ್ಕೆ ವರ್ಗಾಯಿಸಲು ತೀರ್ಮಾನಿಸಲಾಗಿದೆ. ಬಹು ಕಾಲ ಒಂದೇ ಕಡೆ ಬೇರು ಬಿಟ್ಟರೆ, ಕಾಸುಬುರುಕರು ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ತರುವ ಸಾಧ್ಯತೆ ಇರುವ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿರುವುದಾಗಿ ಅಧಿಕಾರಿಗಳು ಸಮರ್ಥನೆ ಕೊಟ್ಟರು.
ಇಷ್ಟು ದಿನ ಇಲ್ಲದ ತೀರ್ಮಾನ ಈಗ ಯಾಕೆ ಬಂತು ? ದೇವಳದಲ್ಲಿ ಸಿಗರೇಟು ಸೇದದೆ, ಹೊರಗಡೆ ಹೋಗಿ ಸೇದುವವರನ್ನೂ ಅಸ್ಪೃಶ್ಯರಂತೆ ಕಂಡರೆ ಹೇಗೆ? ವರ್ಷಗಳ ಕಾಲ ದೇವಸ್ಥಾನದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿ, ಶುದ್ಧ ಹಸ್ತರಾದವರಿಗೂ ಎತ್ತಂಗಡಿಯ ಏಟು ಕೊಡುವುದು ತರವೇ?- ಹೀಗೆ ದೇವಳದ ನೌಕರರು ಹತ್ತು ಹಲವು ಪ್ರಶ್ನೆಗಳನ್ನು ಎಸೆದಿದ್ದಾರೆ. ದೇವಳದ ಮಂಡಳಿ ಈ ಪ್ರಶ್ನೆಗಳಿಗೆ ಉತ್ತರ ಕೊಡುವ ಗೊಡವೆಗೇ ಹೋಗಿಲ್ಲ.
(ಪಿಟಿಐ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...