ಪ್ರತ್ಯೇಕ ರಾಜ್ಯ : ಉಲ್ಟಾ ಹೊಡೆಯುತ್ತಿರುವ ಪಾಪು
ಬೆಂಗಳೂರು: ಇಷ್ಟರವರೆಗೆ ಪಾಪು ಉತ್ತರ ಕರ್ನಾಟಕದ ಏಳಿಗೆಗೋಸ್ಕರ ಪ್ರತ್ಯೇಕ ರಾಜ್ಯ ಕಟ್ಟಬೇಕು ಎಂದು ಹೋರಾಡುತ್ತಿದ್ದರು. ಆದರೆ ಸಾಹಿತ್ಯ ಸಮ್ಮೇಳನದ ಮೂರು ದಿನಗಳ ಅಧ್ಯಕ್ಷ ಪೀಠ ಸಿಕ್ಕ ಕೂಡಲೇ ಅವರು ಉಲ್ಟಾ ಹೊಡೆಯಲು ಶುರುಮಾಡಿದ್ದಾರೆ ಎಂದು ಮಾಜಿ ಸಚಿವ ಪ್ರತ್ಯೇಕ ರಾಜ್ಯ ಚಳವಳಿಯ ಮುಂದಾಳು ವೈಜನಾಥ ಪಾಟೀಲ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಪ್ರತ್ಯೇಕ ರಾಜ್ಯದ ಚಳವಳಿಯನ್ನು ನಮಗಿಂತ ಮೊದಲೇ ಪಾಪು ಆರಂಭಿಸಿದ್ದರು. ಈಗ ಇದ್ದಕ್ಕಿದ್ದಂತೇಯೇ ನಿಲುವು ಬದಲಿಸಿರುವ ಪಾಪು ಏಕೀಕರಣದ ಮಾತಾಡುತ್ತಿದ್ದಾರೆ. ಕರ್ನಾಟಕ ವಿಭಜನೆಯಾದರೆ ಅದು ನನ್ನ ಶವದ ಮೇಲೆ ಎಂಬ ಹೇಳಿಕೆ ನೀಡುತ್ತಿದ್ದಾರೆ. ಪಾಪು ಹೀಗೆ ಬಣ್ಣ ಬದಲಿಸಬಾರದು ಎಂದು ವೈಜನಾಥ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
ಸಂವಿಧಾನದ ಅನುಚ್ಛೇದ 371ಕ್ಕೆ ತಿದ್ದುಪಡಿ ತಂದು ಕರ್ನಾಟಕವನ್ನು ಅದರಲ್ಲಿ ಸೇರಿಸಿ ಉತ್ತರ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡುವ ಪ್ರಸ್ತಾವವನ್ನು ಕೇಂದ್ರ ಸರಕಾರ ತಿರಸ್ಕರಿಸಿರುವುದು ಸರಿಯಲ್ಲ ಎಂದೂ ಈ ಸಂದರ್ಭದಲ್ಲಿ ವೈಜನಾಥರು ತಮ್ಮ ಬೇಸರ ವ್ಯಕ್ತಪಡಿಸಿದರು.
ಸಾಹಿತ್ಯ ಸಮ್ಮೇಳನ ಮುಂದಕ್ಕೆ :
ಫೆಬ್ರವರಿ 14ರಿಂದ ನಡೆಯಬೇಕಿದ್ದ 70ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಾರ್ಚ್ 7, 8 ಮತ್ತು 9ಕ್ಕೆ ಮುಂದೂಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ನ ಪ್ರಕಟಣೆ ತಿಳಿಸಿದೆ. (ಇನ್ಫೋ ವಾರ್ತೆ)