ಜಡ್ಜುಗಳ ಸರಿ ಮಾಡಲೊಂದು ಸಂಸ್ಥೆ ಬೇಕು : ಸೊರಾಬ್ಜಿ
ಬೆಂಗಳೂರು : ಮುಖ್ಯ ನ್ಯಾಯಮೂರ್ತಿಗಳ ವಿಷಯಾಂತರಿ ಬುದ್ಧಿ ಮತ್ತು ಕಾರಣವಿಲ್ಲದೆ ಖಟ್ಲೆಗಳ ವಿಚಾರಣೆ ಮುಂದೂಡುವುದನ್ನು ಸರಿ ಮಾಡಲು ನ್ಯಾಯಾಂಗದ ಚೌಕಟ್ಟಿನಲ್ಲೇ ಒಂದು ಸಂಸ್ಥೆ ರಚಿಸಬೇಕೆಂದು ಅಟಾರ್ನಿ ಜನರಲ್ ಸೋಲಿ ಸೊರಾಬ್ಜಿ ಅಭಿಪ್ರಾಯ ಪಟ್ಟರು.
ಕೆಲವು ಮುಖ್ಯ ನ್ಯಾಯಮೂರ್ತಿಗಳು ವಿನಾ ಕಾರಣ ಖಟ್ಲೆಗಳನ್ನು ಜಲ್ದಿ ಚುಕ್ತಾ ಮಾಡುವುದಿಲ್ಲ. ವಿಚಾರಣೆಯನ್ನು ಪದೇ ಪದೇ ಮುಂದಕ್ಕೆ ಹಾಕುತ್ತಾರೆ. ಸಾಲದ್ದಕ್ಕೆ, ತಮ್ಮ ಮನ ಬಂದಾಗ ಕೋರ್ಟಿಗೆ ಬರುವುದು, ಅವಧಿಗೆ ಮುನ್ನವೇ ಹೊರಡುವುದೂ ಉಂಟು. ಇದರಿಂದ ಹೆಚ್ಚು ಹೆಚ್ಚು ಖಟ್ಲೆಗಳು ಕೊಳೆಯುವಂತಾಗಿವೆ. ನ್ಯಾಯಾಂಗದ ಚೌಕಟ್ಟಿನಲ್ಲೇ ಹೊಸ ಸಂಸ್ಥೆಯಾಂದನ್ನು ರಚಿಸಿ, ಇಂಥವರ ಮೇಲೆ ನಿಗಾ ಇಡುವಂತೆ ಮಾಡಬೇಕು. ಆಗ ಅಶಿಸ್ತನ್ನು ಹೋಗಲಾಡಿಸಲು ಸಾಧ್ಯ ಎಂದು ಸೊರಾಬ್ಜಿ ಹೇಳಿದರು.
ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ ಮತ್ತು ಅಮೆರಿಕ ಅಭಿವೃದ್ಧಿ ಯೋಜನೆ ಜಂಟಿಯಾಗಿ ಆಯೋಜಿಸಿದ್ದ ‘ಮಾಹಿತಿ ಮಸೂದೆ ಸ್ವಾತಂತ್ರ್ಯ ಕುರಿತ ಕರಡು ನಿಯಮ’ಗಳ ಕುರಿತ ಕಮ್ಮಟದಲ್ಲಿ ಸೋಮವಾರ ಸೊರಾಬ್ಜಿ ಭಾಗವಹಿಸಿದರು. ಕಮ್ಮಟದ ನಂತರ ಸುದ್ದಿಗಾರರ ಜೊತೆ ಮಾತಾಡುತ್ತಾ ಹೊಸ ಸಂಸ್ಥೆ ರಚನೆಯ ಅಗತ್ಯವನ್ನು ಒತ್ತಿ ಹೇಳಿದರು. ಅಶಿಸ್ತಿನ ಊಟೆಗಳಾಗಿರುವ ಮುಖ್ಯ ನ್ಯಾಯಮೂರ್ತಿಗಳನ್ನು ಸೊರಾಬ್ಜಿ ತರಾಟೆಗೆ ತೆಗೆದುಕೊಂಡರು.
ವಕೀಲರು ಮುಷ್ಕರ ಹೂಡುವಂತಿಲ್ಲ ಎಂಬ ಸುಪ್ರಿಂಕೋರ್ಟಿನ ತೀರ್ಪನ್ನು ಅನುಮೋದಿಸಿದ ಸೊರಾಬ್ಜಿ, ಅದನ್ನು ಧಿಕ್ಕರಿಸಿ ಕೋರ್ಟಿನ ಕೆಲಸಕ್ಕೆ ಗೈರು ಹಾಜರಾದ ವಕೀಲರನ್ನು ಟೀಕಿಸಿದರು. ಕಾನೂನು, ಸಂವಿಧಾನ ಮತ್ತು ನ್ಯಾಯಾಂಗವನ್ನು ವಕೀಲರೇ ಗಾಳಿಗೆ ತೂರಿದ್ದು ಹೇಯಕರ ಸಂಗತಿ ಎಂದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...