ಸದನದಲ್ಲಿ ಬಿಜೆಪಿ ಬೆಂಕಿ, ವಿಧಾನಸಭೆ ಕಲಾಪ ಡಿ.26ಕ್ಕೆ
ಬೆಂಗಳೂರು : ಮುಖ್ಯಮಂತ್ರಿಗಳ ರಾಜೀನಾಮೆಗೆ ಹಾಗೂ ನಾಗಪ್ಪ ಹತ್ಯೆ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ವಿರೋಧ ಪಕ್ಷ ಬಿಜೆಪಿ ನಾಯಕರ ಎಗ್ಗಿಲ್ಲದ ಕಿಡಿಕಾರಿಕೆಯ ಕಾರಣ ವಿಧಾನಸಭೆಯ ಅಧಿವೇಶನವನ್ನು ಡಿಸೆಂಬರ್ 26ಕ್ಕೆ ಮುಂದೂಡಲಾಯಿತು.
ಸರ್ಕಾರ ಮೊದಲು ಉತ್ತರ ಕೊಟ್ಟ ನಂತರ ಆ ಬಗ್ಗೆ ಮುಕ್ತ ಚರ್ಚೆ ನಡೆಸಬೇಕೆಂದು ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಮುಂಜಾನೆ ಕಲಾಪ ಶುರುವಾಗುತ್ತಿದ್ದಂತೆ ವಿರೋಧ ಪಕ್ಷಗಳಿಗೆ ಕರೆ ಕೊಟ್ಟರು. ಆದರೆ, ಈ ಕರೆಗೆ ವಿರೋಧ ಪಕ್ಷದವರು ಕಿವಿಗೊಡಲಿಲ್ಲ. ಖರ್ಗೆ ಮಾತು ಮುಗಿಯುವ ಮುನ್ನವೇ ಬಿಜೆಪಿ ಪಕ್ಷದವರ ಮಾತಿನ ಅಂಬುಗಳು ಎರಗಿದವು. ನಾಗಪ್ಪನವರ ಹತ್ಯೆಗೆ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಹಾಗೂ ಆಹಾರ ಸಂಸ್ಕರಣ ಸಚಿವ ರಾಜುಗೌಡರೇ ಹೊಣೆ ಎಂದು ದೂರಿದ ಬಿಜೆಪಿ ಮುಖಂಡರು, ಇವರೆಲ್ಲರ ರಾಜೀನಾಮೆಗೆ ಒತ್ತಾಯಿಸಿದರು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಮಾತಿನ ಚಕಮಕಿ ಜೋರಾಗಿ ಚರ್ಚೆಗೆ ತಾವು ಸಿಗಲಿಲ್ಲ. ಸಭಾಪತಿ ಎಂ.ವಿ.ವೆಂಕಟಪ್ಪ ಹಾಗೂ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ತಣ್ಣಗೆ ಕೂತು ಚರ್ಚೆ ನಡೆಸಿ ಎಂದು ಮಾಡಿದ ಮನವಿಗೆ ಯಾರೂ ಸ್ಪಂದಿಸಲಿಲ್ಲ. ಕೂಗಾಟ ಮುಂದುವರೆಯಿತು. ಹೀಗಾಗಿ ಸಭಾಪತಿ ವೆಂಕಟಪ್ಪ ಕಲಾಪಗಳನ್ನು 30 ನಿಮಿಷಗಳ ಕಾಲ ಮುಂದೂಡಿದರು.
ಮುಂದೂಡಿದ್ದು 30 ನಿಮಿಷಗಳಾದರೂ, ಮತ್ತೆ ಕಲಾಪಕ್ಕೆ ಸದಸ್ಯರು ಸೇರಿದ್ದು 90 ನಿಮಿಷಗಳ ನಂತರ. ಆಗಲೂ ಬಿಜೆಪಿ ಸದಸ್ಯರು ಚರ್ಚೆಗೆ ತಕ್ಕ ವಾತಾವರಣವಿರಲು ಅವಕಾಶವೇ ಕೊಡಲಿಲ್ಲ. ಮತ್ತೆ ಘೋಷಣೆಗಳನ್ನು ಕೂಗುವುದು, ಒತ್ತಾಯ ಹೇರುವುದನ್ನು ಮುಂದುವರೆಸಿದರು. ಚರ್ಚೆ ಮಾಡಲು ಅವಕಾಶ ಕೊಡುವಂತೆ ತಾವು ಪದೇಪದೇ ಮಾಡಿದ ಮನವಿಗೆ ವಿರೋಧ ಪಕ್ಷದವರು ಕಿವಿಗೊಡದ ಕಾರಣ ಸಭಾಪತಿ ವೆಂಕಟಪ್ಪ ಕಲಾಪಗಳನ್ನು ರದ್ದು ಮಾಡಿದರು. ಡಿಸೆಂಬರ್ 26ಕ್ಕೆ ನಾಗಪ್ಪ ಹತ್ಯೆ ವಿಚಾರವಾಗಿ ಮತ್ತೆ ಕಲಾಪಗಳು ನಡೆಯಲಿವೆ. ಅಂದು ಕೂಡ ಬಿಜೆಪಿ ಇದೇ ಚಾಳಿ ಮುಂದುವರಿಸುವ ನಿರೀಕ್ಷೆಯಿದ್ದು, ನಾಗಪ್ಪ ಹತ್ಯೆ ಕುರಿತ ಆರೋಗ್ಯಕರ ಚರ್ಚೆ ಸಂಭವ ಕಡಿಮೆಯಾಗಿದೆ.
(ಪಿಟಿಐ)
ಮುಖಪುಟ / ವೀರಪ್ಪನ್ ಶಿಕಾರಿ