ವೀರಪ್ಪನ್ಗೆ ಕೃಷ್ಣ ವೈರ್ಲೆಸ್ ಕಳಿಸಿದ್ದಾರೆ : ನಾಗಪ್ಪ ಡೈರಿ
ಗಳೂರು : ವೀರಪ್ಪನ್ ತೆಕ್ಕೆಯಲ್ಲಿದ್ದಾಗ ನಾಗಪ್ಪನವರು ಬರೆದಿರುವ ಡೈರಿಯಲ್ಲಿನ ಮಹತ್ವದ ಸಂಗತಿಗಳು ಈಗ ಪುಂಖಾನುಪುಂಖ ಬಿಚ್ಚಿಕೊಳ್ಳುತ್ತಿದ್ದು, ಸರ್ಕಾರವನ್ನು ಪೇಚಿಗೆ ಸಿಕ್ಕಿಸುವಂಥಾ ಅಂಶಗಳು ಬಯಲಾಗುತ್ತಿವೆ. ನಾಗಪ್ಪನವರ ಕುಟುಂಬದ ಆಪ್ತರೊಬ್ಬರು ಹೊರಗೆಡವಿರುವ ನಾಗಪ್ಪ ಡೈರಿಯ ಮಹತ್ವದ ವಿಷಯಗಳು ಹೀಗಿವೆ-
ವೀರಪ್ಪನ್ಗೆ ಕೃಷ್ಣ ವೈರ್ಲೆಸ್ ಕಳಿಸಿದ್ದಾರೆ.
ಡಾಕ್ಟರ್ ಒಬ್ಬರು ಸೋಲಾರ್ ಸೆಟ್ಟನ್ನೂ ಕೊಟ್ಟು ಬಂದಿದ್ದಾರೆ. (ವರನಟ ರಾಜ್ ಬಿಡುಗಡೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡಾ.ಭಾನು ಅವರೇ ಈ ಡಾಕ್ಟರ್ ಇರಬಹುದೆಂಬ ಅನುಮಾನ)
ಪಂಚಾಕ್ಷರಿ ಮಂತ್ರದ ನಡುನಡುವೆಯೂ ಒಂದೊಂದೇ ಸಾಲಿನಲ್ಲಿ ಬರೆಯಲಾಗಿರುವ ವಿಷಯಗಳು ಸಾಕಷ್ಟು ಪ್ರಶ್ನೆಗಳನ್ನು ಎಸೆದಿವೆ. ಉದಾ- 40 ಕೋಟಿ ರುಪಾಯಿ ಎಂದಷ್ಟೇ ಒಂದು ಕಡೆ ಬರೆದಿದ್ದಾರೆ. ಈ 40 ಕೋಟಿ ರು. ಯಾವುದು?
ರಾಂಕುಮಾರ್, ವೀರಮಣಿ ಹೆಸರು ಬರೆಯಲಾಗಿದೆ.
ಕೊಯಮತ್ತೂರಿನ ಕರಿಕಲ್ಲು ಶೆಟ್ಟಿ ... 27 ಲಕ್ಷ ರುಪಾಯಿ, 17 ಲಾರಿ..., 7 ಲಾರಿ... ಗ್ರಾನೈಟ್ ಹಾಗೂ ಗಂಧದ ಲಾರಿ.. ಎಂದೆಲ್ಲಾ ಬರೆಯಲಾಗಿದ್ದು, ವೀರಪ್ಪನ್ಗೂ ದಂಧೆಗಳಿಗೂ ಅವಿನಾಭಾವ ಸಂಬಂಧವಿದೆ ಎಂಬುದು ಗೊತ್ತಾಗುತ್ತದೆ.
ಬಸವರಾಜು ಬಂದು ನನ್ನನ್ನು ಭೇಟಿಯಾದರು ಎಂದು ನಾಗಪ್ಪನವರು ಬರೆದಿದ್ದಾರೆ. (ತೆಲನಹಳ್ಳಿಯ ಬಸವರಾಜು ಸಚಿವ ರಾಜೂಗೌಡರಿಗೆ ಆಪ್ತ. ಕಾಡಿನಲ್ಲಿ ಈತ ವೀರಪ್ಪನ್ನನ್ನು ಕಂಡಿರುವ ಸಾಧ್ಯತೆಯಿದ್ದು, ಪ್ರಕರಣಕ್ಕೆ ಹೊಸ ತಿರುವು ಕೊಡುತ್ತಿದೆ.)
ಬಸವರಾಜು ಕಾಡಿಗೆ ಹೋಗಿ, ವೀರಪ್ಪನ್ ಜೊತೆ ಏನು ಮಾತಾಡಿರಬಹುದು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ನಾಗಪ್ಪ ಕುಟುಂಬದವರು ಉತ್ಸುಕರಾಗಿದ್ದಾರೆ. ರಾಜಕೀಯ ಕಾರಣಗಳಿಂದ ನಾಗಪ್ಪ ಹಾಗೂ ರಾಜೂಗೌಡ ನಡುವೆ ಹಸನಾದ ಸಂಬಂಧ ಇರಲಿಲ್ಲ. ಸಾಲದ್ದಕ್ಕೆ ತೆಲನಹಳ್ಳಿ ಬಸವರಾಜು ರಾಜೂಗೌಡರ ಬಂಟ. ವೀರಪ್ಪನ್ ಹತ್ತಿರ ಇವನಿಗೇನು ಕೆಲಸ ಎಂಬುದು ನಾಗಪ್ಪ ಕುಟುಂಬದವರ ಪ್ರಶ್ನೆ. ರಾಜ್ಕುಮಾರ್ ಅಪಹರಣವಾದ ವೇಳೆ ಸರ್ಕಾರ ವೀರಪ್ಪನ್ ಜೊತೆ ಹೇಗೆ ಸಂಪರ್ಕ ಇಟ್ಟುಕೊಂಡಿತ್ತು ಎಂಬುದನ್ನೂ ನಾಗಪ್ಪನವರು ಡೈರಿಯಲ್ಲಿ ಬರೆದಿಟ್ಟಿದ್ದಾರೆ.
ವಿಧಾನ ಮಂಡಲದ ಉಭಯ ಸದನಗಳಲ್ಲಿ ನಾಗಪ್ಪ ಹತ್ಯೆ ಕುರಿತ ವಿಶೇಷ ಅಧಿವೇಶನ ನಡೆಯುತ್ತಿರುವ ಅವಧಿಯಲ್ಲೇ ಈ ಮಹತ್ವದ ಅಂಶಗಳು ಬೆಳಕಿಗೆ ಬಂದಿರುವುದು ಸರ್ಕಾರದ ಮೇಲೆ ಕಿಡಿ ಕಾರಲು ವಿರೋಧ ಪಕ್ಷಗಳಿಗೆ ಇನ್ನಷ್ಟು ಪುಷ್ಟಿ ದೊರೆತಂತಾಗಿದೆ. ಅದರಲ್ಲೂ, ಸಂಯುಕ್ತ ಜನತಾ ದಳದವರು ಸಿಬಿಐ ತನಿಖೆಗೆ ಒತ್ತಾಯಿಸಲು ಬೇಕಾದ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.(ಇನ್ಫೋ ವಾರ್ತೆ)