ನಕಾಶೆ ರೆಡಿ, ರಕ್ತಪಾತದೊಂದಿಗೆ ಮಂದಿರ- ವಿಹೆಚ್ಪಿ
ನವದೆಹಲಿ : ರಾಮ ಮಂದಿರ ವಿವಾದ ಸುಪ್ರೀಂ ಕೋರ್ಟ್ನ ಕಟಕಟೆಯಲ್ಲಿರುವಾಗಲೇ ಇತ್ತ ಮಂದಿರ ನಿರ್ಮಾಣಕ್ಕಾಗಿ ನಕಾಶೆಯಾಂದನ್ನು ತಯಾರಿಸಲಾಗಿದೆ. ವಿಶ್ವ ಹಿಂದೂ ಪರಿಷತ್ ಬೆಂಬಲದ ರಾಮಜನ್ಮಭೂಮಿ ನ್ಯಾಸವು ಮಂದಿರ ನಿರ್ಮಾಣ ಕಾರ್ಯಕ್ಕಾಗಿ ಸರಕಾರದ ಆದೇಶಗಳಾಗಲಿ, ಸುಪ್ರೀಂ ಕೋರ್ಟ್ನ ತೀರ್ಮಾನಗಳಾಗಲೀ ಅಗತ್ಯವಿಲ್ಲ ಎಂದು ಪ್ರತಿಪಾದಿಸುತ್ತಾ ಮಂದಿರ ನಿರ್ಮಾಣದ ನಕಾಶೆಯನ್ನು ತಯಾರಿಸಿದೆ.
ಮಂದಿರದ ನೀಲಿ ನಕಾಶೆಯ ಆಧಾರದ ಮೇಲೆ ಇನ್ನು ಒಂದೂವರೆ ವರ್ಷದ ಅವಧಿಯಲ್ಲಿ ರಕ್ತಪಾತದ ಮೂಲಕ ಮಂದಿರ ನಿರ್ಮಾಣ ಕಾರ್ಯ ಮುಗಿಯುತ್ತದೆ. ಮಂದಿರ ನಿರ್ಮಾಣ ಕಾರ್ಯಕ್ಕೂ ಮುಂಚೆ ದೇಶಾದ್ಯಂತ ಚಳವಳಿ, ಮತ್ತು ರಾಮ ಮಂದಿರ ನಿರ್ಮಾಣ ಬೆಂಬಲಿಸಿ ಹೋರಾಟವನ್ನು ನಡೆಸಲಾಗುತ್ತದೆ ಎಂದು ರಾಮಜನ್ಮಭೂಮಿ ನ್ಯಾಸದ ಅಧ್ಯಕ್ಷ ಮಹಾಂತ ಪರಮಹಂಸ ರಾಮಚಂದ್ರ ದಾಸ್ ಘೋಷಿಸಿದ್ದಾರೆ.
ಇನ್ಯಾವುದೇ ಕಾರಣಕ್ಕೂ ಮಂದಿರ ಕಟ್ಟುವ ಕಾರ್ಯವನ್ನು ತಡ ಮಾಡಿದಲ್ಲಿ ಸಹಿಸಲಾಗದು. ಅದು ಹಿಂದುತ್ವಕ್ಕೆ ಮಾಡುವ ಅಪಮಾನ ಎಂದು ನಾವು ಭಾವಿಸುತ್ತೇವೆ. ಇನ್ನೊಂದೂವರೆ ವರ್ಷದೊಳಗಾಗಿ ರಾಮಮಂದಿರ ಎದ್ದು ನಿಲ್ಲುತ್ತದೆ. ನಿರ್ಮಾಣ ಕಾರ್ಯವನ್ನು ಯಾವ ಕ್ಷಣದಲ್ಲಿ ಬೇಕಾದರೂ ನಾವು ಆರಂಭಿಸಬಹುದು. ನಂತರ ಕಾಮಗಾರಿಯನ್ನು ಯಾವುದೇ ಅಡೆ ತಡೆ ಬಂದರೂ ನಿಲ್ಲಿಸುವುದಿಲ್ಲ ಎಂದು ರಾಮಚಂದ್ರ ದಾಸ್ ಎಚ್ಚರಿಸಿದ್ದಾರೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...