ಕಾಲೇಜಿಗೆ ಮರಳೋಣ ಬನ್ನಿ !
ಒಂದು ಕಾಲದಲ್ಲಿ ಒಟ್ಟಿಗೆ ಓದಿ, ಹರಟಿ, ಕಾಲೇಜಿಗೆ ಚಕ್ಕರ್ ಕೊಟ್ಟು ಸಿನಿಮಾ ನೋಡಿ, ಮಾಸ್ತರರಿಗೆ ಅಡ್ಡ ಹೆಸರಿಟ್ಟು ಕರೆದು ಗಹಗಹಿಸಿ ನಕ್ಕು, ಕನಸುಗಳ ಹಂಚಿಕೊಂಡು, ದೇವದಾಸ ಗೆಳೆಯನನ್ನು ಆಡಿಕೊಂಡು... ಏನೆಲ್ಲಾ ಮಾಡಿರುವ ವಿದ್ಯಾರ್ಥಿಗಳು ಎಲ್ಲೋ ಒಂದು ಕಡೆ ಸಂಸಾರ ಕಟ್ಟಿಕೊಂಡಿರುತ್ತಾರೆ. ಓಡುವ ಕಾಲದಲ್ಲಿ ಗಾಣದೆತ್ತಿನಂತೆ ದುಡಿಯುತ್ತಿರುತ್ತಾರೆ. ಒಂದೊಮ್ಮೆ ಮತ್ತೆ ಕಾಲೇಜು ದಿನಗಳತ್ತ ಹೊರಳುವ ಅವಕಾಶ ಸಿಕ್ಕರೆ ಎಷ್ಟು ಚೆನ್ನ ಅಲ್ಲವೇ? ಇಲ್ಲಿ ನೋಡಿ, ಅಂಥ ಅವಕಾಶದ ಸುದ್ದಿ.
ದಾವಣಗೆರೆ ಕುವೆಂಪು ವಿಶ್ವವಿದ್ಯಾಲಯದ ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳೆಲ್ಲಾ (ಅಲ್ಯುಮಿನಿ) ಬೆಂಗಳೂರಲ್ಲಿ ಒಂದೆಡೆ ಸೇರೋದು ಅಂತ ತೀರ್ಮಾನವಾಗಿದೆ. ಬೆಂಗಳೂರಿನಲ್ಲಿರುವ ಹಳೇ ವಿದ್ಯಾರ್ಥಿಗಳು ನೆನಪನ್ನು ಮೆಲುಕು ಹಾಕುವ ಮಜಾ ಕೂಟವನ್ನು ಆಯೋಜಿಸಿದ್ದಾರೆ. ನೀವೂ ಇವರಲ್ಲಿ ಒಬ್ಬರಾಗಿದ್ದರೆ, ತಡ ಮಾಡಬೇಡಿ. ಡೈರಿಯಲ್ಲಿ ಈಗಲೇ ಬರೆದಿಟ್ಟುಕೊಳ್ಳಿ.
ಕಾಲೇಜಿನ ಸ್ವರ್ಣ ಮಹೋತ್ಸವದ ಸಂದರ್ಭವೂ ಆಗಿರುವುದರಿಂದ ಈ ಒಟ್ಟು ಭೇಟಿಗೆ ವಿಶೇಷ ಔಚಿತ್ಯವಿದೆ. ಬೆಂಗಳೂರಿನ ಕೆಂಪೇಗೌಡ ರಸ್ತೆಯ ಕೆಪಿಟಿಸಿಎಲ್ನ ಸಭಾಂಗಣದಲ್ಲಿ ನಡೆಯಲಿರುವ ಈ ಕೂಟದ ಮುಖ್ಯ ಅತಿಥಿ ಕುವೆಂಪು ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ.ಕೆ.ಚಿದಾನಂದ ಗೌಡ. ಡಿಸೆಂಬರ್ 22ನೇ ತಾರೀಕು ಭಾನುವಾರ ಬೆಳಗ್ಗೆ 10 ಗಂಟೆಯಿಂದ 1.30 ಗಂಟೆವರೆಗೆ ಎಲ್ಲಾ ಸೇರೋದು ಅಂತ ನಿಶ್ಚಯವಾಗಿದೆ.
ಕೂಟದಲ್ಲಿ ನೆನಪುಗಳ ಮೆಲುಕು ಹಾಕಿದ ನಂತರ ಹಳೇ ವಿದ್ಯಾರ್ಥಿಗಳ ಸಂಘದ ವಾರ್ಷಿಕ ಸಾಮಾನ್ಯ ಸಭೆ ನಡೆಯಲಿದೆ. ರುಚಿಕರ ಊಟವೂ ಉಂಟು.
ಹೆಚ್ಚಿನ ವಿಷಯಗಳಿಗೆ- ಕೆ.ವಿಶ್ವನಾಥ್ (ಸಂಘದ ಬೆಂಗಳೂರು ಕಾರ್ಯದರ್ಶಿ) ಅವರಿಗೆ ಫೋನಾಯಿಸಿ. ನಂಬರುಗಳು- 3333491, 3531407 ಅಥವಾ 8565487.
ಅಲ್ಯುಮಿನಿ ವೆಬ್ಸೈಟು- ಮುಖಪುಟ / ಇವತ್ತು... ಈ ಹೊತ್ತು...