ಚಿತ್ರದುರ್ಗದಲ್ಲಿ ಸ್ವಾತಂತ್ರ್ಯಹೋರಾಟಗಾರರ ವೀರಸೌಧ
ಚಿತ್ರದುರ್ಗ : ಜಿಲ್ಲೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಕನಸು ವೀರ ಸೌಧ ಕಟ್ಟಡಕ್ಕೆ ಕೆಸರು ಕಲ್ಲು ಹಾಕುವ ಕಾರ್ಯಕ್ರಮ ಡಿಸೆಂಬರ್ 24ರಂದು ನಡೆಯಲಿದೆ ಎಂದು ಜಿಲ್ಲೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಅಧ್ಯಕ್ಷ ಡಿ. ಚಿದಾನಂದಪ್ಪ ತಿಳಿಸಿದ್ದಾರೆ.
ವೀರ ಸೌಧಕ್ಕಾಗಿ 53 ಲಕ್ಷ ಹಣ ಬಿಡುಗಡೆ ಮಾಡಲು ಸರಕಾರ ಒಪ್ಪಿಕೊಂಡಿದ್ದು , 20 ಲಕ್ಷರೂಪಾಯಿ ಹಣ ಈಗಾಗಲೇ ಬಿಡುಗಡೆಯಾಗಿದೆ. ಡಿಸೆಂಬರ್ 24ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ರಾಣಿ ಸತೀಶ್ ಅವರು ವೀರಸೌಧ ನಿರ್ಮಾಣಕ್ಕೆ ಕೆಸರು ಕಲ್ಲು ಹಾಕಲಿದ್ದಾರೆ. ಮುರುಘರಾಜೇಂದ್ರ ಬೃಹನ್ಮಠದ ಶಿವಮೂರ್ತಿ ಶರಣ ಅವರು ಈ ಸಂದರ್ಭದಲ್ಲಿ ಆಶೀರ್ವಚನ ನೀಡುವರು ಎಂದು ಚಿದಾನಂದಪ್ಪ ಹೇಳಿದರು.
ವೀರ ಸೌಧದಲ್ಲಿ ಮಕ್ಕಳಿಗೆ ದೇಶಭಕ್ತಿಯ ಅರಿವು ಮೂಡಿಸಲು, ಹಾಗೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಬಳಸಿಕೊಳ್ಳಬಹುದು. ವೀರ ಸೌಧ ಮಾತ್ರವಲ್ಲದೆ ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರ ಕನಸಿನಂತೆ ತುರುವನೂರಿನಲ್ಲಿ ಗಾಂಧಿ ಭವನ ಕಟ್ಟುವುದಕ್ಕೆ ಸರಕಾರ ಒಪ್ಪಿಕೊಂಡಿದೆ.
ಮೈಸೂರು ಪ್ರಾಂತ್ಯದಲ್ಲಿರುವ ಐದು ಜಿಲ್ಲೆಗಳ ಪೈಕಿ ಚಿತ್ರದುರ್ಗ ಜಿಲ್ಲೆಯಲ್ಲಿಯೇ ಹೆಚ್ಚು ಮಂದಿ ಭಾರತ ಬಿಟ್ಟು ತೊಲಗಿ ಹಾಗೂ ಉಪ್ಪಿನ ಸತ್ಯಾಗ್ರಹ ಚಳವಳಿಯಲ್ಲಿ ಭಾಗವಹಿಸಿದವರಿದ್ದಾರೆ. ಈ ಹಿನ್ನೆಲೆಯಲ್ಲಿ ವೀರ ಸೌಧದಲ್ಲಿ ಗಾಂಧೀಜಿ ಪ್ರತಿಮೆಯನ್ನು ಸ್ಥಾಪಿಸಲಾಗುವುದು ಎಂದು ಚಿದಾನಂದಪ್ಪ ವಿವರಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...