ನಾಗಪ್ಪ ಹತ್ಯೆ ಶ್ವೇತಪತ್ರ ತಯಾರಿಯಲ್ಲಿ ಸರ್ಕಾರ
ಬೆಂಗಳೂರು/ಚೆನ್ನೈ : ಬರ್ಬರ ಹಾಗೂ ದುರಂತ ಅಂತ್ಯದೊಂದಿಗೆ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿರುವ ನಾಗಪ್ಪ ಪ್ರಕರಣ ಕುರಿತು ಶ್ವೇತ ಪತ್ರ ಹೊರಡಿಸಲು ಸರ್ಕಾರ ನಿರ್ಧರಿಸಿದೆ. ನಾಗಪ್ಪನವರ ದುರಂತ ಅಂತ್ಯದ ಬಗ್ಗೆ ಚರ್ಚಿಸಲು ವಿಧಾನಮಂಡಲದ ವಿಶೇಷ ಕಲಾಪ ನಡೆಸಲು ಕೂಡ ತೀರ್ಮಾನಿಸಿದೆ.
ಜನರಲ್ಲಿ ಸಾಕಷ್ಟು ಕುತೂಹಲ ಕೆರಳಿಸಿರುವ ಹಾಗೂ ವಿರೋಧ ಪಕ್ಷಗಳ ಪಾಳಯದವರಿಗೆ ಸಾಕಷ್ಟು ಟೀಕಾವಕಾಶ ಮಾಡಿಕೊಟ್ಟಿರುವ ಈ ಪ್ರಕರಣದ ಬಗ್ಗೆ ತಾನು ಮುಗುಮ್ಮಾಗಿದ್ದರೆ ಪರಿಸ್ಥಿತಿ ಪ್ರಕೋಪಕ್ಕೆ ಹೋಗಬಹುದೆಂಬ ಕಾರಣಕ್ಕೆ ಸರ್ಕಾರ ಈ ನಿರ್ಣಯಕ್ಕೆ ಬಂದಿದೆ ಎನ್ನಲಾಗುತ್ತಿದೆ. ಎನ್ಡಿಟಿವಿ ಮಂಗಳವಾರ ಈ ಸುದ್ದಿಯನ್ನು ಪ್ರಕಟಿಸಿದೆ.
ಮತ್ತೆ ಚುರುಕಾಯಿತು ಎಸ್ಟಿಎಫ್
ತಮಿಳುನಾಡಿನ ವಾಲ್ಟರ್ ದೇವರಂ ಹಾಗೂ ಕರ್ನಾಟಕದ ರಕ್ಷಣಾ ಸಲಹೆಗಾರ ಟಿ.ಶ್ರೀನಿವಾಸುಲು ನೇತೃತ್ವದ ಜಂಟಿ ವಿಶೇಷ ಕಾರ್ಯಾಚರಣೆ ಪಡೆ ಸತ್ಯಮಂಗಲಂ ಕಾಡಿನಲ್ಲಿ ವೀರಪ್ಪನ್ ಶಿಕಾರಿಗಾಗಿ ಎದೆ ಸೆಟೆದು ನಿಂತಿದೆ. ಪದೇ ಪದೇ ಸಭೆ ಸೇರಿ ಕಾರ್ಯತಂತ್ರಗಳನ್ನು ಹೊಸೆಯುತ್ತಿರುವ ಪಡೆ, ಕೇಂದ್ರ ಸರ್ಕಾರಕ್ಕೆ ಆಧುನಿಕ ತಂತ್ರಜ್ಞಾನ ಒದಗಿಸುವಂತೆಯೂ ಮನವಿ ಮಾಡಿಕೊಂಡಿದೆ. ನರಹಂತಕ ವೀರಪ್ಪನ್ ಮಟ್ಟ ಹಾಕಲು ಕೋವಿ ಹಿಡಿದು ನಿಂತಿರುವ ಎಸ್ಟಿಎಫ್ ಪೊಲೀಸರ ಸಂಖ್ಯೆ ಬರೋಬ್ಬರಿ 2000! ಈ ದೊಡ್ಡ ಸೈನ್ಯವಾದರೂ ವೀರಪ್ಪನ್ನನ್ನು ಹಿಡಿಯುತ್ತದಾ? ಅಥವಾ ಇತಿಹಾಸ ಮರುಕಳಿಸುತ್ತದಾ?- ಗೊತ್ತಾಗಲು ಹೆಚ್ಚು ದಿನ ಬೇಕಾಗಿಲ್ಲ.
(ಏಜೆನ್ಸೀಸ್)
ಮುಖಪುಟ / ವೀರಪ್ಪನ್ ಶಿಕಾರಿ












Click it and Unblock the Notifications