ನಾಗಪ್ಪನವರ ಸಾವಿಗೆ ವರನಟ ರಾಜ್ಕುಮಾರ್ ಕಂಬನಿ
ಬೆಂಗಳೂರು : ಅವರು ತುಂಬಾ ಒಳ್ಳೆಯ ವ್ಯಕ್ತಿ . ಅವರಿಗೆ ಹೀಗಾಗಬಾರದಿತ್ತು . ಅವರ ಸಾವು ತಮಗೆ ತುಂಬಾ ನೋವು ಉಂಟು ಮಾಡಿದೆ ಎಂದು ವೀರಪ್ಪನ್ ಒತ್ತೆಯಾಳಾಗಿದ್ದ ಮಾಜಿ ಸಚಿವ ನಾಗಪ್ಪನವರ ಸಾವಿನ ಕುರಿತು ವರನಟ ಡಾ.ರಾಜ್ಕುಮಾರ್ ಕಂಬನಿ ಮಿಡಿದಿದ್ದಾರೆ.
ನಾನು 108 ದಿನಗಳ ಕಾಲ ವೀರಪ್ಪನ್ ಸೆರೆಯಲ್ಲಿದ್ದು ಬದುಕಿ ಬಂದೆ, ನಾಗಪ್ಪನವರು ಬರಲಿಲ್ಲ . ಅವರ ಸಾವು ಅತ್ಯಂತ ದುರದೃಷ್ಟಕರ ಹಾಗೂ ಶೋಚನೀಯ ಎಂದು ನಾಗಪ್ಪನವರ ಸಾವಿನ ಸುದ್ದಿ ತಿಳಿದ ರಾಜ್ ಪ್ರತಿಕ್ರಿಯಿಸಿದರು.
ನಾಗಪ್ಪನವರು ಸುರಕ್ಷಿತವಾಗಿ ಬಿಡುಗಡೆ ಹೊಂದುತ್ತಾರೆ, ಯೋಚಿಸಬೇಡಿ ಎಂದು ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದೆ . ಆದರೆ, ಈಗ ಪರಿಸ್ಥಿತಿ ಬದಲಾಗಿದೆ ಎಂದು ರಾಜ್ ನೋವಿನಿಂದ ನುಡಿದರು. ನಾಗಪ್ಪನವರ ಅಗಲಿಕೆಯನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರ ಕುಟುಂಬಕ್ಕೆ ನೀಡುವಂತೆ ದೇವರನ್ನು ಪ್ರಾರ್ಥಿಸುವುದಾಗಿ ರಾಜ್ ಹೇಳಿದರು.
ತಮಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದ ಸಂದರ್ಭದಲ್ಲಿ , ಆಗ ಸಚಿವರಾಗಿದ್ದ ನಾಗಪ್ಪನವರು ಕೊಳ್ಳೇಗಾಲದಲ್ಲಿ ಸನ್ಮಾನ ಸಮಾರಂಭ ಏರ್ಪಡಿಸಿದುದನ್ನು ಸ್ಮರಿಸಿಕೊಂಡ ರಾಜ್, ಅದೊಂದು ಮರೆಯಲಾಗದ ನೆನಪು ಎಂದು ಭಾವುಕರಾದರು.
(ಇನ್ಫೋ ವಾರ್ತೆ)
ಮುಖಪುಟ / ವೀರಪ್ಪನ್ ಶಿಕಾರಿ