ಕೋರ್ಟ್ ತೀರ್ಪು ದೇವರ ತೀರ್ಪು ; ನೀರಿಗಾಗಿ ರಜನಿ ಉಪವಾಸ
ಚೆನ್ನೈ: ನೈವೇಲಿಯಲ್ಲಿ ತಮಿಳು ಚಿತ್ರೋದ್ಯಮದ ತಾರೆಗಳು ಶನಿವಾರ ನಡೆಸಿದ ರ್ಯಾಲಿಗೆ ಪರ್ಯಾಯ ಎಂದು ಬಣ್ಣಿಸಲಾಗಿರುವ ತಮಿಳು ಚಿತ್ರರಂಗದ ಸೂಪರ್ಸ್ಟಾರ್ ರಜನಿಕಾಂತ್ ಅವರ 9 ಗಂಟೆಗಳ ಉಪವಾಸ ಭಾನುವಾರ ನಡೆದಿದ್ದು , ರಜನಿ ಅಭಿಮಾನಿಗಳು ರಾಜ್ಯಾದ್ಯಂತ ಉಪವಾಸ ನಡೆಸುವ ಮೂಲಕ ತಮ್ಮ ನಾಯಕ ನಿಲುವನ್ನು ಬೆಂಬಲಿಸಿದ್ದಾರೆ.
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವಂತೆ ಒತ್ತಾಯಿಸಿ ರಜನಿಕಾಂತ್ ಭಾನುವಾರ ಈ ಉಪವಾಸ ನಡೆಸಿದ್ದಾರೆ. ಬಿಳಿ ಕುರ್ತಾ ಹಾಗೂ ಪೈಜಾಮ ಧರಿಸಿದ್ದ ರಜನಿ ಬೆಳಗ್ಗೆ 8 ಕ್ಕೆ ಉಪವಾಸ ಆರಂಭಿಸಿದರು. ನಟ ವಿಜಯಕುಮಾರ್, ಶರತ್ಕುಮಾರ್, ನೆಪೋಲಿಯನ್, ಅಬ್ಬಾಸ್, ರಾಜೀವ್ ಅಲೆಕ್ಸ್ , ನಟಿ ಜಯಚಿತ್ರ, ರಾಧಿಕಾ, ಸಿಮ್ರಾನ್, ಜ್ಯೋತಿಕಾ, ಸಂಗೀತ ನಿರ್ದೇಶಕ ಗಣೇಶ್ ಮತ್ತಿತರರು ರಜನಿ ಜೊತೆ ಉಪವಾಸ ಕಾರ್ಯಕ್ರಮದಲ್ಲಿ ಭಾಗಿಯಾದ ಪ್ರಮುಖರು.
ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ರಜನಿ ಉಪವಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಪವಾಸ ಆರಂಭಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ರಜನಿಕಾಂತ್, ನಿರ್ದೇಶಕ ಭಾರತಿರಾಜ ಅವರು ನೈವೇಲಿಯಲ್ಲಿ ತಮ್ಮನ್ನು ವಿಶ್ವಾಸ ಘಾತುಕ ಎಂದು ಟೀಕಿಸಿದ್ದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.
ಅಭಿಮಾನಿಗಳು ಹಾಗೂ ಚಿತ್ರೋದ್ಯಮದ ಗಣ್ಯರ ಹೂಮಾಲೆ-ಶುಭಾಶಯಗಳನ್ನು ಸ್ವೀಕರಿಸಿದ ನಂತರ ರಜನಿ ಉಪವಾಸ ಆರಂಭಿಸಿದರು. ಸುಪ್ರಿಂಕೋರ್ಟ್ ತೀರ್ಪು ದೇವರ ತೀರ್ಪು ಎನ್ನುವ ಭಿತ್ತಿ ಫಲಕಗಳು ಹಾಗೂ ಮಹಾತ್ಮ ಗಾಂಧಿ ಮತ್ತು ತಮಿಳು ಸಂತ ಕವಿ ತಿರುವಳ್ಳುವರು ಅವರ ಭಾವಚಿತ್ರಗಳು ಉಪವಾಸ ಸ್ಥಳದಲ್ಲಿ ಎದ್ದು ಕಾಣುತ್ತಿದ್ದವು.
(ಪಿಟಿಐ)
ಮುಖಪುಟ / ಕಾವೇರಿ ಕನ್ನಡಿ












Click it and Unblock the Notifications