ಲಾಲೂ ನಾಡಿನ ಈ ಜಗಳದಲ್ಲಿ ಚಂದ್ರಜೀತ್ನ ಕಣ್ಣುಗಳನ್ನೇ ಕಿತ್ತರು !
ನಳಂದ : ಕತೆಗಳಲ್ಲಿ ಕೇಳುವಂಥಾ ಕಣ್ಣು ಕೀಳುವ ದೃಶ್ಯವನ್ನು ಮಧ್ಯ ಬಿಹಾರದ ಜನ ಪ್ರತ್ಯಕ್ಷ ಕಂಡಿದ್ದಾರೆ. ಜಮೀನಿನ ವಿಷಯದ ಜಗಳ ಪ್ರಕೋಪಕ್ಕೆ ತಿರುಗಿ 30ರ ಹರೆಯದ ಒಬ್ಬಾತನ ಕಣ್ಣುಗಳನ್ನು ಬರ್ಬರವಾಗಿ ಕಿತ್ತಿದ್ದಾರೆ.
ಸೋಮವಾರ ಮಧ್ಯಾಹ್ನ ಜಮೀನಿನ ವಿಷಯಕ್ಕೆ ಎರಡು ಸಂಸಾರಗಳ ನಡುವೆ ನಡೆದ ಜಗಳದ ಫಲಶೃತಿಯಿದು. ತನ್ನ ಸಂಸಾರದ ವಿರೋಧಿ ಪಡೆಯ ಜನ ಕತ್ತಿಗಳನ್ನು ತಂದು, ಚಂದ್ರಜೀತ್ ಕುಮಾರ್ ಎಂಬಾತನ ಕಣ್ಣುಗಳನ್ನು ಕಿತ್ತಿದ್ದಾರೆ ! ಪಾಟ್ನಾ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಂದ್ರಜೀತ್ ಈಗ ಅಕ್ಷರಶಃ ಅಂಧ. ಕಿತ್ತಿರುವ ಈತನ ಕಣ್ಣುಗಳಿಗೆ ದೃಷ್ಟಿ ತುಂಬಲು ವೈದ್ಯರ ತಂಡ ಶತಾಯಗತಾಯ ಯತ್ನಿಸುತ್ತಿದೆ. ಆದರೆ ಇದು ತೀರಾ ಕಷ್ಟದ ಕೆಲಸವಾಗಿದೆ.
ಎಡಗಣ್ಣಂತೂ ಪೂರ್ಣ ಪ್ರಮಾಣದಲ್ಲಿ ಹೊರಕ್ಕೆ ಬಂದಿದೆ. ಬಲಗಣ್ಣಿನಲ್ಲಿ ತೇವಾಂಶವೇ ಇಲ್ಲ. ಈ ಪ್ರಕರಣ ತೀರಾ ಬರ್ಬರ ಅಷ್ಟೇ ಅಲ್ಲ, ನಮಗೆ ದೊಡ್ಡ ಸವಾಲಾಗಿದೆ ಎನ್ನುತ್ತಾರೆ ಉಮೇಶ್ ಕುಮಾರ್ ಎಂಬ ವೈದ್ಯ.
ಚಚ್ಚು, ಕೊಲ್ಲು ಎಂದು ಚೀರುತ್ತಾ ವಿರೋಧಿಗಳು ನನ್ನ ಮೇಲೆ ಎರಗಿದರು. ಕಣ್ಣುಗಳ ಮೇಲೆ ಏಕಾಏಕಿ ಮಾಡಿದ ದಾಳಿಯಿಂದ ಎಲ್ಲಾ ಶೂನ್ಯ. ನಾನು ಅನುಭವಿಸಿದ್ದು ನರಕ ಯಾತನೆ. ಏನಾಗುತ್ತಿದೆ ಅಂತಲೇ ನನಗೆ ಗೊತ್ತಾಗಲಿಲ್ಲ ಎನ್ನುತ್ತಾರೆ ಚಂದ್ರಜೀತ್.
ನಳಂದಾ ಜಿಲ್ಲೆಯ ಹಿಸ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣದ ಪ್ರಥಮ ದೂರು ವರದಿ ದಾಖಲಾಗಿದೆ. ಪೊಲೀಸರು ತನಿಖೆ ನಡೆಸಿದ್ದಾರೆ. ಜಮೀನು ಜಗಳಗಳನ್ನು ಹಳ್ಳಿಗಳ ಜನ, ಅದರಲ್ಲೂ ವಿಶೇಷವಾಗಿ ಉತ್ತರ ಭಾರತದ ಜನ ಯಾವ ಮಟ್ಟದ ಪರಾಕಾಷ್ಠೆಗೆ ಒಯ್ಯುತ್ತಿದ್ದಾರೆ ಎಂಬುದಕ್ಕೆ ಇದು ನಿದರ್ಶನ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...