ರಾಜ್ಯ ನನಗೆ ಸಾಕಷ್ಟು ಕೊಟ್ಟಿದೆ, ನಾನು ಏನಾದರೂ ಕೊಡಬೇಕು- ಮಲ್ಯ
ಬೆಂಗಳೂರು : ರಾಜ್ಯಸಭಾ ಚುನಾವಣೆಯಲ್ಲಿ ಕಣಕ್ಕೆ ಇಳಿದಿರುವುದು ಗೆಳೆಯರ ಒತ್ತಾಯಕ್ಕೆ ಮಣಿದು. ನಾನು ಗೆದ್ದರೂ ಯಾವುದೇ ಅಧಿಕಾರಕ್ಕಾಗಿ ಆಸೆ ಪಡುವುದಿಲ್ಲ. ರಾಜ್ಯ ನನಗೆ ಸಾಕಷ್ಟು ಕೊಟ್ಟಿದೆ. ಅದಕ್ಕೆ ನಾನು ಪ್ರತಿಯಾಗಿ ಏನಾದರೂ ಕೊಡಬೇಕು ಅನ್ನುವುದು ನನ್ನಾಸೆ. ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ನಂತರ ಗುರುವಾರ ವಿಜಯ್ ಮಲ್ಯ ಆಡಿದ ಮಾತುಗಳಿವು.
ಈ ಬಾರಿ ಅವರಲ್ಲಿ ಭರವಸೆ ಸಾಕಷ್ಟಿದೆ. ಸುದ್ದಿಗಾರರ ಪ್ರಶ್ನೆಗಳಿಗೆ ಚಕಚಕನೆ ಉತ್ತರ ಕೊಡುತ್ತಿದ್ದ ಅವರಲ್ಲಿ ಸಾಕಷ್ಟು ಉತ್ಸಾಹ. ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ನನಗೇ ಲಾಭ ಅನ್ನುವುದನ್ನು ಗೆಳೆಯರು ಮನವರಿಕೆ ಮಾಡಿ ಕೊಟ್ಟ ನಂತರ ನಾನು ನಾಮಪತ್ರ ಸಲ್ಲಿಸಲು ನಿರ್ಧರಿಸಿದೆ ಎಂದರು.
ಬಿಜೆಪಿಯ ಅಮಾನತ್ತುಗೊಂಡಿರುವ ಸದಸ್ಯರಾದ ಎ.ಮಂಜು ಹಾಗೂ ಡಾ। ಭಾರತಿ ಶಂಕರ್ ಬೆಂಬಲಿಸುವುದಾಗಿ ಮುಕ್ತವಾಗಿ ಹೇಳಿದ್ದಾರೆ. ಕೋಲಾರದ ಸ್ವತಂತ್ರ ಸದಸ್ಯರಾದ ಚೌಡರೆಡ್ಡಿ, ಶಿವಶಂಕರ್ ರೆಡ್ಡಿ ಮತ್ತು ಎನ್.ಸಂಪಂಗಿ ಬೆಂಬಲ ಕೂಡ ಇದೆ. ಸದನದ 224 ಸ್ಥಾನಗಳ ಪೈಕಿ 23 ಶಾಸಕರು ಜನತಾ ಪರಿವಾರದವರು. ಕಾಂಗ್ರೆಸ್ನ ಬೆಂಬಲವನ್ನೂ ಕೋರಿದ್ದೇನೆ. ಆದರೆ, ಈಗಲೇ ಅದರ ಬೆಂಬಲವನ್ನು ನಿರೀಕ್ಷಿಸಲಾಗುವುದಿಲ್ಲ. ಕಳೆದ ಬಾರಿ 35 ಮತಗಳನ್ನು ನಾನು ಪಡೆದಿದ್ದೆ ಎಂದು ಮಲ್ಯ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರ ಕೊಟ್ಟರು.
ಕಾಂಗ್ರೆಸ್ನ ಜನಾರ್ಧನ ಪೂಜಾರಿ, ಎಂ.ವಿ.ರಾಜಶೇಖರನ್ ಹಾಗೂ ಪ್ರೇಮಾ ಕಾರ್ಯಪ್ಪ ಕಾಂಗ್ರೆಸ್ ಅಭ್ಯರ್ಥಿಗಳಾಗಿ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದರು. ಅವರ ಜೊತೆಯಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಅಲ್ಲಂ ವೀರಭದ್ರಪ್ಪ ಹಾಜರಿದ್ದರು. ಬಿಜೆಪಿಯ ಅಭ್ಯರ್ಥಿ ಡಿ.ಕೆ.ತಾರಾದೇವಿ ಗುರುವಾರ ಮತ್ತೊಂದು ಸೆಟ್ನಲ್ಲಿ ನಾಮಪತ್ರ ಸಲ್ಲಿಸಿದರು.
(ಪಿಟಿಐ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...