ವಾರ್ಷಿಕ 2 ಲಕ್ಷ ರು. ಆದಾಯದವರಿಗೂ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ
ಬೆಂಗಳೂರು : ಶಿಕ್ಷಣ ಮತ್ತು ಉದ್ಯೋಗದಲ್ಲಿ ಹೆಚ್ಚು ಜನರಿಗೆ ಅವಕಾಶ ಕಲ್ಪಿಸುವ ಸಲುವಾಗಿ ಇನ್ನು ಮುಂದೆ ವಾರ್ಷಿಕ 2 ಲಕ್ಷ ರುಪಾಯಿ ವರಮಾನ ಇರುವವರಿಗೂ ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಸಮಾಜ ಕಲ್ಯಾಣ ಸಚಿವ ಕಾಗೋಡು ತಿಮ್ಮಪ್ಪ ಶುಕ್ರವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಈಗ ಇರುವ ಮೀಸಲಾತಿ ನಿಯಮದಂತೆ ವಾರ್ಷಿಕ ಗರಿಷ್ಠ 15 ಸಾವಿರ ರುಪಾಯಿ ವರಮಾನ ಇರುವವರು ಮಾತ್ರ ಮೀಸಲಾತಿ ವ್ಯಾಪ್ತಿಗೆ ಬರುತ್ತಾರೆ. ಶುಷ್ಕ ಪ್ರದೇಶಗಳಲ್ಲಿ ಗರಿಷ್ಠ 20 ಎಕರೆ ಜಾಗ ಇರುವವರು ಈಗಿನ ಶಿಕ್ಷಣ ಹಾಗೂ ಉದ್ಯೋಗ ಮೀಸಲಾತಿ ವ್ಯಾಪ್ತಿಗೆ ಬರುತ್ತಾರೆ. ಈ ಮಿತಿಯನ್ನು 54 ಎಕರೆ ಭೂಮಿ ಇರುವವರಿಗೂ ವಿಸ್ತರಿಸಲಾಗುವುದು ಎಂದು ಸಚಿವರು ಹೇಳಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡಗಳ 7866 ಬ್ಯಾಕ್ಲಾಗ್ ಹುದ್ದೆಗಳನ್ನು ಇನ್ನು 6 ತಿಂಗಳಲ್ಲಿ ಭರ್ತಿ ಮಾಡಲಾಗುವುದು. ಈ ಬಗ್ಗೆ ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ಸೂಚನೆ ಕೊಡಲಾಗಿದ್ದು, ಅನುಸರಿಸದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಪುನರೆಚ್ಚರಿಸಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...