ಮಂದಿರ ನಿರ್ಮಾಣ ತಡೆ ಯಾವ ಶಕ್ತಿಗೂ ಅಸಾಧ್ಯ- ವಿಶ್ವೇಶತೀರ್ಥ ಸ್ವಾಮೀಜಿ
ಬೆಂಗಳೂರು: ಗುಜರಾತ್ನಲ್ಲಿ ಸೋಮನಾಥ ದೇವಸ್ಥಾನವನ್ನು ಕಟ್ಟಿದ ಮಾದರಿಯಲ್ಲಿ ಒಮ್ಮತ ಹಾಗೂ ಶಾಂತಿಯುತ ಪರಿಹಾರ ಕಂಡು ಹುಡುಕುವ ಮೂಲಕ ಒಮ್ಮತದಿಂದ ರಾಮಮಂದಿರವನ್ನೂ ಅಯೋಧ್ಯೆಯಲ್ಲಿ ನಿರ್ಮಿಸಬೇಕು ಎಂದು ಕೇಂದ್ರ ಕ್ರೀಡಾ ಸಚಿವೆ ಉಮಾಭಾರತಿ ಸಲಹೆ ಮಾಡಿದ್ದಾರೆ.
ವಿಶ್ವಹಿಂದೂ ಪರಿಷತ್ ಗೋಧ್ರಾ ರೈಲು ದುರಂತವನ್ನು ಖಂಡಿಸಿ ನಗರದಲ್ಲಿ ಭಾನುವಾರ ನಗರದಲ್ಲಿ ಆಯೋಜಿಸಿದ್ದ ಪ್ರತಿಭಟನಾ ರ್ಯಾಲಿಯನ್ನು ಉದ್ದೇಶಿಸಿ ಉಮಾಭಾರತಿ ಮಾತನಾಡುತ್ತಿದ್ದರು. ಹಿಂದೂ ಮತ್ತು ಮುಸ್ಲಿಂ ರಕ್ತವನ್ನು ಪ್ರತ್ಯೇಕಿಸಿ ಮಾತನಾಡುತ್ತಲೇ, ಜಾತ್ಯತೀತ ಪಕ್ಷ ಎಂದು ಕರೆಸಿಕೊಳ್ಳುತ್ತಿರುವ ಕಾಂಗ್ರೆಸ್ ಮತ್ತಿತರ ಪಕ್ಷಗಳನ್ನು ಖಂಡಿಸಿದರು.
ಗುಜರಾತಿನ ನರೇಂದ್ರ ಮೋದಿ ಸರಕಾರ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದ ನಿಯೋಗದಲ್ಲಿ ಸೋನಿಯಾ ಗಾಂಧಿಭಾಗವಹಿಸಿದ್ದುದನ್ನು ಪ್ರಸ್ತಾಪಿಸಿದ ಅವರು- ಕಾಂಗ್ರೆಸ್ ಪ್ರೇರಿತ ದೆಹಲಿ ಗಲಭೆಯಲ್ಲಿ 10 ಸಾವಿರ ಮಂದಿ ಸಿಖ್ಖರ ಸಾಮೂಹಿಕ ಹತ್ಯೆ ನಡೆದ ಸಂದರ್ಭದಲ್ಲಿ ಸೋನಿಯಾರ ಪತಿ ರಾಜೀವ್ ಗಾಂಧಿ ರಾಜೀನಾಮೆ ನೀಡಿದ್ದರೆ.. ಎಂದು ಸೋನಿಯಾ ಗಾಂಧಿ ಅವರ ನಡಾವಳಿಯನ್ನು ತರಾಟೆಗೆ ತೆಗೆದುಕೊಂಡರು.
ಬೆಂಗಳೂರಿನಲ್ಲಿ ನಡೆದ ರ್ಯಾಲಿಗೆ ಅನಿರೀಕ್ಷಿತವಾಗಿ ಆಗಮಿಸಿದ ಉಮಾಭಾರತಿ, ವಿಹೆಚ್ಪಿ ಪ್ರಮುಖ, ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿಯವರನ್ನು ಭೆಟ್ಟಿಯಾಗಲು ಕರ್ನಾಟಕಕ್ಕೆ ಬಂದಿರುವುದಾಗಿ ಹೇಳಿದರು. ಅಯೋಧ್ಯಾ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಅವಾಂತರಗಳಿಗೂ ಹಿಂದುಗಳೇ ಕಾರಣ ಎಂಬಂತೆ ಬಿಂಬಿಸುತ್ತಿರುವ ಮಾಧ್ಯಮಗಳ ಮೇಲೂ ಉಮಾಭಾರತಿ ಕಿಡಿ ಕಾರಿದರು.
ಯಾವ ಶಕ್ತಿಯೂ ರಾಮಮಂದಿರ ನಿರ್ಮಾಣವನ್ನು ತಡೆಯದು
ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವೇಶ ತೀರ್ಥ ಸ್ವಾಮೀಜಿ ರಾಮ ಮಂದಿರ ಅಯೋಧ್ಯೆಯಲ್ಲಿ ನಿರ್ಮಾಣವಾಗಲೇ ಬೇಕು. ಈ ವಿಷಯದಲ್ಲಿ ಮುಸ್ಲಿಮರು ತಲೆ ಹಾಕದೇ ಶಾಂತಿಯಿಂದ ಈ ಸಮಸ್ಯೆಯನ್ನು ಬಗೆಹರಿಸುವಂತೆ ಮುಸ್ಲಿಮ್ ಸಮುದಾಯಕ್ಕೆ ಮನವಿ ಮಾಡಿಕೊಂಡರು.
ಮುಸ್ಲಿಮರು ತಾಳ್ಮೆಯಿಂದ ವರ್ತಿಸುವ ಮೂಲಕ ಹಿಂದೂ- ಮುಸ್ಲಿಂ ಬಾಂಧವ್ಯದಲ್ಲಿ ಹೊಸದೊಂದು ಅಧ್ಯಾಯವನ್ನು ತೆರೆಯಬೇಕು ಎಂದು ಕರೆ ನೀಡಿದ ಸ್ವಾಮೀಜಿ, ರಾಮಮಂದಿರ ನಿರ್ಮಾಣವನ್ನು ತಡೆಯಲು ಭೂಮಿ ಮೇಲಿನ ಯಾವುದೇ ಶಕ್ತಿಯಿಂದ ಸಾಧ್ಯವಿಲ್ಲ ಎಂದರು.
ರ್ಯಾಲಿಯಲ್ಲಿ ಆದಿಚುಂಚನಗಿರಿ ಬಾಲಗಂಗಾಧರನಾಥ ಸ್ವಾಮೀಜಿ , ಆರ್ಎಸ್ಎಸ್ನ ರಾಜ್ಯ ಪ್ರಮುಖರು ಮತ್ತು ಬಿಜೆಪಿ ನಾಯಕರು ಭಾಗವಹಿಸಿ ಗೋಧ್ರಾದಲ್ಲಿನ ಸಬರಮತಿ ರೈಲು ದುರಂತವನ್ನು ಖಂಡಿಸಿ ಮಾತನಾಡಿದರು. ಅಯೋಧ್ಯಾ ವಿಷಯಕ್ಕೆ ಸಂಬಂಧಿಸಿ ತಮಿಳು ನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ತಳೆದಿರುವ ನಿಲುವನ್ನು ರ್ಯಾಲಿಯಲ್ಲಿ ಮಾತನಾಡಿದ ಕೆಲವರು ಶ್ಲಾಘಿಸಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications