ಕೊಬ್ಬರಿ ಬೆಳೆಗಾರರ ನೆರವಿಗೆ ರಾಜ್ಯ ಸರ್ಕಾರ: 10 ಕೋಟಿ ಬಿಡುಗಡೆ
ಬೆಂಗಳೂರು: ಬೆಲೆ ಕುಸಿತದಿಂದ ತತ್ತರಿಸಿರುವ ಕೊಬ್ಬರಿ ಬೆಳೆಗಾರರ ನೆರವಿಗೆ ಬಂದಿರುವ ರಾಜ್ಯ ಸರಕಾರ, ಮಾರುಕಟ್ಟೆ ಪುನಶ್ಚೇತನ ಯೋಜನೆಯಡಿ ಹೆಚ್ಚುವರಿಯಾಗಿ 10 ಕೋಟಿ ರುಪಾಯಿ ಬಿಡುಗಡೆ ಮಾಡಿದೆ. ಈ ವಿಷಯವನ್ನು ರಾಜ್ಯ ಕೃಷಿ ಸಚಿವ ಟಿ.ಬಿ. ಜಯಚಂದ್ರ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
ಕೊಬ್ಬರಿ ಬೆಲೆ ಕುಸಿತದಿಂದ ಕಂಗಾಲಾಗಿದ್ದ ರೈತರಿಗೆ ಸ್ಥೈರ್ಯ ತುಂಬಲು ರಾಜ್ಯ ಸರಕಾರ ಈವರೆಗೆ 19.8 ಕೋಟಿ ರುಪಾಯಿ ಮೌಲ್ಯದ ಒಟ್ಟು 34,050 ಕ್ವಿಂಟಾಲ್ ಕೊಬ್ಬರಿಯನ್ನು ಖರೀದಿಸಿದೆ. ಸರಕಾರ ಒಂದು ಕ್ವಿಂಟಾಲ್ ಕೊಬ್ಬರಿಗೆ 3,550 ರುಪಾಯಿಗಳ ಬೆಂಬಲ ಬೆಲೆ ಘೋಷಿಸಿದೆ ಎಂದೂ ಅವರು ಹೇಳಿದರು.
ಮೆಕ್ಕೆಜೋಳ ಬೆಳೆಗಾರರ ನೆರವಿಗೆ ಬರಲು ರಾಜ್ಯ ಸರಕಾರ ತೀರ್ಮಾನಿಸಿದ್ದು, ಬೆಳೆ ಮಾರುಕಟ್ಟೆಗೆ ಬಂದ ಕೂಡಲೇ ಸರಕಾರ ಮಾರುಕಟ್ಟೆಗೆ ಮಧ್ಯ ಪ್ರವೇಶಿಸುವುದು ಎಂದೂ ಅವರು ಭರವಸೆ ನೀಡಿದರು. ಸ್ಥಳೀಯ ಬೆಳೆಗಾರರ ಹಿತರಕ್ಷಣೆಯ ದೃಷ್ಟಿಯಿಂದ ಮೆಕ್ಕೆ ಜೋಳದ ಆಮದಿನ ಮೇಲೆ ಆಮದು ಸುಂಕ ಹೆಚ್ಚಿಸುವಂತೆ ರಾಜ್ಯ ಸರಕಾರವು ಕೇಂದ್ರವನ್ನು ಒತ್ತಾಯಿಸುತ್ತಲೇ ಇದೆ ಎಂದು ಜಯಚಂದ್ರ ತಿಳಿಸಿದರು.
(ಪಿ.ಟಿ.ಐ)
ಮುಖಪುಟ / ಇವತ್ತು... ಈ ಹೊತ್ತು...