ಸ್ಟಾಂಪ್ ಪೇಪರ್ ಜಾಲ : ಸಿಬಿಐ ತನಿಖೆಗೆ ಸಿದ್ಧರಾಮಯ್ಯ ಒತ್ತಾಯ
ಬೆಂಗಳೂರು: ನಗರ ಪೊಲೀಸರು ಬಹಿರಂಗಪಡಿಸಿದ ಬಹುಕೋಟಿ ರುಪಾಯಿ ಹಗರಣದ ನಕಲಿ ಸ್ಟಾಂಪ್ ಪೇಪರ್ ಜಾಲದ ತನಿಖೆಯನ್ನು ಸಿಬಿಐಗೆ ವಹಿಸಿಕೊಡುವಂತೆ ರಾಜ್ಯ ಜಾತ್ಯತೀತ ಜನತಾದಳ ಸರ್ಕಾರವನ್ನು ಒತ್ತಾಯಿಸಿದೆ.
10 ಸಾವಿರ ಕೋಟಿ ರುಪಾಯಿ ಮೌಲ್ಯದ ಸ್ಟಾಂಪ್ ಪೇಪರ್ ಜಾಲದಲ್ಲಿ ಐಪಿಎಸ್ ಅಧಿಕಾರಿಗಳು ಸೇರಿದಂತೆ ವಿವಿಧ ಗಣ್ಯರು ಭಾಗಿಯಾಗಿರುವ ಶಂಕೆಯಿದೆ. ಆ ಕಾರಣದಿಂದಾಗಿ ತನಿಖೆಯನ್ನು ಸಿಬಿಐಗೆ ವಹಿಸಿಕೊಡಬೇಕು ಎಂದು ಜಾತ್ಯತೀತ ಜನತಾದಳದ ಅಧ್ಯಕ್ಷ ಸಿದ್ಧರಾಮಯ್ಯ ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಪ್ರಕರಣದ ಬಗ್ಗೆ ತನಿಖೆ ನಡೆಸಿರುವ ಬೆಂಗಳೂರು ಮಹಾನಗರ ಪೊಲೀಸ್ ಆಯುಕ್ತ ಎಚ್.ಟಿ.ಸಾಂಗ್ಲಿಯಾನ ಅವರು ಸರ್ಕಾರಕ್ಕೆ ಪ್ರಾಥಮಿಕ ತನಿಖಾ ವರದಿಯನ್ನು ಸಲ್ಲಿಸಿದ್ದಾರೆ. ಸ್ಟಾಂಪ್ ಪೇಪರ್ ಜಾಲದ ವ್ಯಾಪ್ತಿ ಆಳವಾಗಿರುವುದರಿಂದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಸಾಂಗ್ಲಿಯಾನ ಅವರೇ ತಮ್ಮ ವರದಿಯಲ್ಲಿ ಸಲಹೆ ಮಾಡಿದ್ದಾರೆ ಎಂದು ಸಿದ್ಧರಾಮಯ್ಯ ಹೇಳಿದರು. ಅಬ್ದುಲ್ ಕರೀಂ ತೆಲಗಿ ಅಲಿಯಾಸ್ ಲಾಲಾ ಮತ್ತು ಪ್ರವಾಸೋದ್ಯಮ ಸಚಿವ ರೋಷನ್ ಬೇಗ್ ಅವರ ಸಹೋದರ ಡಾ। ರೆಹಮಾನ್ ಬೇಗ್ ಹೆಸರು ಪ್ರಕರಣದಲ್ಲಿ ಕೇಳಿಬರುತ್ತಿದೆ. ಜನತೆಗೆ ಸತ್ಯಾಂಶವನ್ನು ತಿಳಿಸಲು ಸಿಬಿಐ ತನಿಖೆ ಅಗತ್ಯ ಎಂದು ಸಿದ್ಧರಾಮಯ್ಯ ಅಭಿಪ್ರಾಯಪಟ್ಟರು. ಪ್ರಕರಣದಲ್ಲಿ ಸಚಿವ ರೋಷನ್ಬೇಗ್ ಅವರ ಪಾತ್ರವೇನೂ ಇಲ್ಲ ಎನ್ನುವ ಸಾಂಗ್ಲಿಯಾನ ಅವರ ಹೇಳಿಕೆಯನ್ನು ಟೀಕಿಸಿದ ಸಿದ್ಧರಾಮಯ್ಯ, ಇಂಥ ಬೃಹತ್ ಜಾಲ ಏಕವ್ಯಕ್ತಿಯದಾಗಿರುವುದು ಸಾಧ್ಯವಿಲ್ಲ ಎಂದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications