ಕುಲದಲ್ಲಿ ಮೇಲಾವುದೋ ಹುಚ್ಚಪ್ಪ ಎಂದರು ದೇವೇಗೌಡರು!
ಬೆಂಗಳೂರು : ವಿಠಲೇನಹಳ್ಳಿ ಪಾದಯಾತ್ರೆ ಮೂಲಕ ಅಪಾರ ಪ್ರಚಾರ ಪಡೆದರೂ, ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ ದಾರುಣ ಸೋಲಿನಿಂದ ಕಂಗೆಟ್ಟು ಕಳೆದೊಂದು ವಾರದಿಂದ ಮಾಧ್ಯಮಗಳ ಕಣ್ಣಿನಿಂದ ದೂರವಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಶುಕ್ರವಾರ ಮತ್ತೆ ಸುದ್ದಿಯಲ್ಲಿ ! ಅಪ್ರಧೀನ ಪ್ರಕಾಶನ ಮತ್ತು ಪ್ರಜ್ಞಾ ಸಾಂಸ್ಕೃತಿಕ ವೇದಿಕೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಗೌಡರೇ ಕೇಂದ್ರಬಿಂದು!
ಡಾ। ನಲ್ಲೂರು ಪ್ರಸಾದ್ ಅವರ ಗಂಗಡಿಕಾರ ಒಕ್ಕಲಿಗರು ಎನ್ನುವ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ದೇವೇಗೌಡರು- ಪ್ರಬಲವಾಗುತ್ತಿರುವ ಜಾತೀಯತೆ ಬಗೆಗೆ ತಮ್ಮ ಆತಂಕ ವ್ಯಕ್ತಪಡಿಸಿದರು. ಜಾಗತಿಕ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಸೂಕ್ಷ್ಮವಾಗಿ ಪರೀಶೀಲಿಸಿದರೆ, ಜಾತಿ ವ್ಯವಸ್ಥೆಯಿಂದ ಇಡೀ ಮನುಕುಲ ಬಿಕ್ಕಟ್ಟಿಗೆ ಸಿಲುಕಿರುವುದು ಸ್ಪಷ್ಟವಾಗಿದೆ. ಸುವ್ಯವಸ್ಥಿತ ಸಮಾಜದ ಅವನತಿಗೆ ಜಾತಿ ಪದ್ಧತಿ ಕಾರಣವಾಗಲಿದೆ ಎಂದರು.
ಜನ ಸಾಮಾನ್ಯರ ಆಶೋತ್ತರಗಳನ್ನು ಅರ್ಥ ಮಾಡಿಕೊಳ್ಳಲು ಹಾಗೂ ಅವರ ಸಮಸ್ಯೆಗಳನ್ನು ಪರಿಹರಿಸಲೋಸುಗುವೆ ತಾವು ಸಣ್ಣ ಪುಟ್ಟ ವಿಷಯಗಳ ಬಗೆಗೂ ಗಮನ ಹರಿಸುತ್ತಿರುವುದಾಗಿ ಹೇಳಿದ ದೇವೇಗೌಡ, ಜನತೆಯ ಸಮಸ್ಯೆಗಳಿಗೆ ಬೆನ್ನು ಹಾಕಿರುವ ಕೇಂದ್ರ ಸರ್ಕಾರದ ನಕಾರಾತ್ಮಕ ನಿಲುವನ್ನು ಟೀಕಿಸಿದರು.
ಗಂಗಡಿಕಾರ ಒಕ್ಕಲಿಗರು ಕೃತಿಯ ಲೇಖಕ ನಲ್ಲೂರು ಪ್ರಸಾದ್ ಅವರನ್ನು ವೇದಿಕೆಯ ವತಿಯಿಂದ ಸನ್ಮಾನಿಸಲಾಯಿತು. ಡ। ಹಂ.ಪ.ನಾಗರಾಜಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಅಧ್ಯಕ್ಷ ಹರಿಕೃಷ್ಣ ಪುನರೂರು, ಕಾರ್ಯದರ್ಶಿ ಪುಂಡಲೀಕ ಹಾಲಂಬಿ, ಜಾನಪದ ವಿದ್ವಾಂಸ ಚಕ್ಕರೆ ಶಿವಶಂಕರ್, ಶಾಸಕ ಚೆಲುವರಾಯ ಸ್ವಾಮಿ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications