ವಿದ್ಯುತ್ ದರ ಏರಿಕೆ ಅನಿವಾರ್ಯ ಅಂತಾರೆ ಮುಖ್ಯಮಂತ್ರಿ ಕೃಷ್ಣ
ಬೆಂಗಳೂರು : ಬರದ ಹಿನ್ನೆಲೆಯಲ್ಲಿ ಸದ್ಯಕ್ಕೆ ವಿದ್ಯುತ್ ದರ ಏರಿಸುವುದಿಲ್ಲ ಎಂದು ಸಾರುತ್ತಿದ್ದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು, ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ದಿಗ್ವಿಜಯದ ನಂತರ ವಿದ್ಯುತ್ ದರ ಏರಿಕೆ ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.
ಕರ್ನಾಟಕ ಕಾಫಿ ಬೆಳೆಗಾರರ ವಾರ್ಷಿಕ ಸಮ್ಮೇಳನಾನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ವಿದ್ಯುತ್ ಖರೀದಿಗೆ ಸರಕಾರ ಈಗಾಗಲೇ 2300 ಕೋಟಿ ರುಪಾಯಿ ಸಹಾಯಧನ ನೀಡುತ್ತಿದೆ. ಪ್ರಸಕ್ತ ಸನ್ನಿವೇಶದಲ್ಲಿ ದರ ಏರಿಸದಿದ್ದರೆ, 2700 ಕೋಟಿ ರುಪಾಯಿಗಳನ್ನು ಸರಕಾರ ಭರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಸಮಸ್ಯೆಯನ್ನು ಜನರ ಮುಂದಿಡಬೇಕಾದ ಪರಿಸ್ಥಿತಿ ಬಂದಿದೆ ಎಂದರು.
ಈಗ ವಿದ್ಯುತ್ ವಲಯದಲ್ಲಿ ಎದುರಿಸುತ್ತಿರುವ ಸಮಸ್ಯೆಯನ್ನು ಬಹುದಿನಗಳ ಕಾಲ ಸಹಿಸಿಕೊಳ್ಳುವುದು ಸಾಧ್ಯವಿಲ್ಲ. ಈ ಹಂತದಲ್ಲಿ ಕಠಿಣ ನಿರ್ಧಾರ ಕೈಗೊಳ್ಳದೆ ವಿಧಿ ಇಲ್ಲ ಎಂದು ಹೇಳುವ ಮೂಲಕ, ವಿದ್ಯುತ್ ದರ ಏರಿಸುವ ಇಂಗಿತ ವ್ಯಕ್ತಪಡಿಸಿದರು.
ವಿದ್ಯುತ್ ವಿತರಣೆಯಲ್ಲಿನ ನಷ್ಟವನ್ನು ತಪ್ಪಿಸಲು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಶೇ.38ರಷ್ಟಿದ್ದ ವಿದ್ಯುತ್ ವಿತರಣೆ ನಷ್ಟ ಶೇ.30ಕ್ಕೆ ಇಳಿದಿದೆ. ಆದರೆ, ವಿದ್ಯುತ್ ಬೇಡಿಕೆ ಹೆಚ್ಚಾಗಿರುವುದರಿಂದ ನಾವು ಈ ವರ್ಷ ತೀವ್ರ ವಿದ್ಯುತ್ ಸಮಸ್ಯೆ ಎದುರಿಸುತ್ತಿದ್ದೇವೆ ಎಂದರು.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...