ಬೆಂಗಳೂರುಐಟಿ.ಕಾಂ ಮೇಳಕ್ಕೆ ತೆರೆ, 2.2 ಕೋಟಿ ರು.ನಷ್ಟ
ಬೆಂಗಳೂರು: ರಾಜ್ಯದ ವಾರ್ಷಿಕ ಮಾಹಿತಿ ತಂತ್ರಜ್ಞಾನ ಮೇಳ ಬೆಂಗಳೂರುಐಟಿ.ಕಾಂ-2001 ಸೋಮವಾರ ಕೊನೆಗೊಂಡಿತು. ನವಂಬರ್ 1 ರಿಂದ 5 ದಿನಗಳ ಕಾಲ ನಗರದ ಅರಮನೆ ಮೈದಾನದಲ್ಲಿ ಜರುಗಿದ ಈ ಮೇಳಕ್ಕೆ 2.25 ಲಕ್ಷ ಮಂದಿ ಭೇಟಿ ಕೊಟ್ಟಿದ್ದಾರೆ.
300 ವಿದೇಶಿಯರು, 45 ಸಾವಿರ ಉದ್ದಿಮೆದಾರರು ಹಾಗೂ 1.8 ಲಕ್ಷ ಮಂದಿ ಸಾರ್ವಜನಿಕರು ಐಟಿ ಮೇಳಕ್ಕೆ ಭೇಟಿ ಕೊಟ್ಟಿದ್ದರು. 750 ಆಹ್ವಾನಿತರು ಹಾಗೂ ಸುಮಾರು 450 ಸಿಇಓಗಳು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು ಎಂದು ಐಟಿ ಇಲಾಖೆಯ ನಿರ್ದೇಶಕ ರಮಣ ರೆಡ್ಡಿ ಸೋಮವಾರ ಸಂಜೆ ಸುದ್ದಿಗಾರರಿಗೆ ತಿಳಿಸಿದರು.
ಕರ್ನಾಟಕ ಮಾಹಿತಿ ತಂತ್ರಜ್ಞಾನ ಸಚಿವ ಬಿ.ಕೆ.ಚಂದ್ರಶೇಖರ್, ಐಟಿ ಸೆಕ್ರಟರಿ ವಿವೇಕ್ ಕುಲಕರ್ಣಿ ಹಾಗೂ ಎಸ್ಟಿಪಿಐ ನಿರ್ದೇಶಕ ಬಿ.ವಿ.ನಾಯ್ಡು ಕೂಡ ಐಟಿ ಮೇಳದ ಯಶಸ್ಸಿನ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.
ಸೆಪ್ಟಂಬರ್ 11 ರ ದುರಂತದ ಹಿನ್ನೆಲೆಯಲ್ಲಿ 111 ಕಂಪನಿಗಳು ಸಮ್ಮೇಳನದಲ್ಲಿ ಭಾಗವಹಿಸಲಿಲ್ಲ . ಆದ್ದರಿಂದ ಸಂಘಟಕರಿಗೆ 2.2 ಕೋಟಿ ರುಪಾಯಿ ನಷ್ಟ ಉಂಟಾಗಿದೆ ಎಂದು ಬಿ.ವಿ.ನಾಯ್ಡು ಹೇಳಿದರು.
(ಪಿಟಿಐ)