ಸಾವಿರ ಸಿನಿಮಾ ಹಾಡುಗಳ ಸರದಾರ ವಿಜಯನಾರಸಿಂಹ ನಿಧನ
ಬೆಂಗಳೂರು : ಪುಟ್ಟಣ್ಣ ಕಣಗಾಲ್ರ ಪ್ರೀತಿಯ ಸಾಹಿತಿ ವಿಜಯ ನಾರಸಿಂಹ ಬುಧವಾರ ಬೆಳಗ್ಗೆ ಇಲ್ಲಿನ ತಮ್ಮ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು. ಕಳೆದ ಎರಡು ವರ್ಷಗಳಿಂದ ಅನಾರೋಗ್ಯ ಪೀಡಿತರಾಗಿದ್ದ ನಾರಸಿಂಹ ಕೆಲವು ದಿನಗಳಿಂದ ತೀವ್ರ ಅಸ್ವಸ್ಥರಾಗಿದ್ದರು.
ನಿಮೋನಿಯಾ ಜ್ವರದಿಂದ ಬಳಲುತ್ತಿದ್ದ ಅವರನ್ನು ಬುಧವಾರ ಬೆಳಗ್ಗೆ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿ ಅವರು ಕೊನೆಯುಸಿರೆಳೆದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ನಾರಸಿಂಹ ಅವರಿಗೆ ಪತ್ನಿ ಹಾಗೂ ಓರ್ವ ಪುತ್ರಿ ಇದ್ದಾರೆ.
ಪುಟ್ಟಣ್ಣ ಕಣಗಾಲ್ ಹಾಗೂ ಸಿದ್ಧಲಿಂಗಯ್ಯ ಅವರ ಚಿತ್ರಗಳಿಗೇ ಹೆಚ್ಚು ಗೀತೆಗಳನ್ನು ಬರೆಯುತ್ತಿದ್ದ ವಿಜಯನಾರಸಿಂಹ ಅವರು ಬರೆದಿರುವ ಚಿತ್ರಗೀತೆಗಳ ಸಂಖ್ಯೆ ಸಾವಿರವನ್ನೂ ದಾಟಿದೆ. ಸಾವಿರ ಹಾಡುಗಳ ಸರದಾರ ಎಂದೇ ಖ್ಯಾತರಾಗಿದ್ದ ವಿಜಯನಾರಸಿಂಹ ಅವರು ಓಹಿಲೇಶ್ವರ ಚಿತ್ರಕ್ಕಾಗಿ ಬರೆದ ಗೀತೆಯಲ್ಲಿ ‘ಈ ದೇಹದಿಂದ ದೂರನಾದೆ ಏಕೆ ಆತ್ಮವೇ.. ಈ ಸಾವು ನ್ಯಾಯವೇ?’ ಎಂದು ಪ್ರಶ್ನಿಸಿದ್ದರು. (ಹುಟ್ಟು ಸಹಜ, ಸಾವು ನಿಶ್ಚಿತ ಎಂಬುದು ಅವರಿಗೂ ಗೊತ್ತಿತ್ತು.)
ಉಪಾಸನೆ, ಎಡಕಲ್ಲು ಗುಡ್ಡದ ಮೇಲೆ, ನಾಗರಹಾವು, ಮಾನಸಸರೋವರ, ಓಹಿಲೇಶ್ವರ ಮೊದಲಾದ ಚಿತ್ರಗಳಿಗೆ ಗೀತೆ ರಚಿಸಿದ್ದ, ವಿಜಯ ನಾರಸಿಂಹ ಬರೆದಿರುವ ಕೆಲವು ಜನಪ್ರಿಯ ಗೀತೆಗಳು :
ನೀತಿವಂತ ಬಾಳಲೇ ಬೇಕು - ಬಾಳು ಬೆಳಗಿತು, ಪಂಚಮವೇದ ಪ್ರೇಮದ ನಾದ - ಗೆಜ್ಜೆಪೂಜೆ, ಆಡೋಣಾ ನೀನೂ ನಾನು - ಕಸ್ತೂರಿ ನಿವಾಸ, ತೋಟದಾಗೆ ಹೂವಾ ಕಂಡೆ, ಹೂವಾ ಒಳಗೆ ನಿನ್ನ ಕಂಡೆ, ನನ್ನ ರಾಜಾ ರೋಜಾ... - ಚಿರಂಜೀವಿ, ಹೂವೊಂದು ಬಳಿ ಬಂದು ತಾಕಿತು ಎನ್ನೆದೆಯಾ... - ಶುಭಮಂಗಳ, ಠೂ ಠೂ ಠೂ ಬೇಡಪ್ಪ ... ನಿನ್ನ ಸಂಗ ಆಡಲೆಂದು ಬಂದೆನಪ್ಪ - ಪ್ರೇಮಮಯಿ, ಆ ದೇವರೆ ನುಡಿದ ಮೊದಲ ನುಡಿ ಪ್ರೇಮ ಪ್ರೇಮ.. - ಬಿಳಿ ಹೆಂಡ್ತಿ, ಯಾವ ತಾಯಿಯೂ ಪಡೆದ ಮಗಳಾದರೇನು - ಬಿಳಿ ಹೆಂಡ್ತಿ, ನಿನ್ನ ಸವಿ ನೆನಪೆ - ಅನುರಾಗ ಬಂಧನ, ಮನದ ಮಾತಿಗೆ ಮೌಲ ಬೇಲಿ - ನಂದಗೋಕುಲ, ಬಾರೇ ಬಾರೇ ಚಂದದ ಚಲುವಿನ ತಾರೆ - ನಾಗರಹಾವು ಹಾಗೂ ವಸಂತ ಬರೆದನು ಒಲವಿನ ಓಲೆ - ಬೆಸುಗೆ.
(ಇನ್ಫೋ ವಾರ್ತೆ)