ಉಡುಪಿ ರಾಜಾಂಗಣದಲ್ಲಿ ಯಕ್ಷಗಾನದ ಹಿರಿಯ ಕಲಾವಿದರ ಸಮ್ಮಿಲನ
ಉಡುಪಿ : ಇಲ್ಲಿನ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಮಂಗಳವಾರದಿಂದ ಏಳು ದಿನಗಳ ಕಾಲ ಯಕ್ಷಗಾನ ಸಪ್ತೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.
ಯಕ್ಷಗಾನ ಮೇಳಗಳೆಲ್ಲ ದೀಪಾವಳಿಯವರೆಗೆ ತಿರುಗಾಟಕ್ಕೆ ಹೋಗುವುದಿಲ್ಲವಾದ್ದರಿಂದ ಪ್ರಸಿದ್ಧ ಕಲಾವಿದರಿಗೆ ಈಗ ಬಿಡುವು. ಹಿರಿಯ ಕಲಾವಿದರ ಸಮ್ಮಿಲನಕ್ಕೆ ಉತ್ತಮ ಅವಕಾಶ. ಸಪ್ತೋತ್ಸವ ಆರಂಭವಾಗುವುದು ಮಂಗಳವಾರ ರಾತ್ರಿ. ಪೇಜಾವರ ಶ್ರೀಗಳು ಉತ್ಸವವನ್ನು ಉದ್ಘಾಟಿಸುತ್ತಾರೆ. ಕೃಷ್ಣಾರ್ಜುನ ಪ್ರಸಂಗದ ಯಕ್ಷಗಾನ ಬಯಲಾಟದೊಂದಿಗೆ ಉತ್ಸವ ತೆರೆದುಕೊಳ್ಳುತ್ತದೆ. ಪೂರ್ಣ ಚಂದ್ರ ಯಕ್ಷಕಲಾ ಮೇಳ ಮತ್ತು ಬಡಗು ತಿಟ್ಟಿನ ಪ್ರಸಿದ್ಧ ಕಲಾವಿದರ ಸಮ್ಮಿಲನದಲ್ಲಿ ನಡೆವ ಕಾರ್ಯಕ್ರಮದಲ್ಲಿ ತೆಂಕು- ಬಡಗಿನ ಹಿರಿಯ ಭಾಗವತರು ಹಾಡುತ್ತಾರೆ.
ಬುಧವಾರ ಸಂಜೆ ಶ್ರೀಧರ್ ಹಂದೆ ನೇತೃತ್ವದ ತಂಡದವರಿಂದ ಹೂವಿನ ಕೋಲು ಮತ್ತು ರಾತ್ರಿ ರಾಮಾಂಜನೇಯ ಯಕ್ಷಗಾನ. ನವೆಂಬರ್ 1ರಂದು ಡಾ. ಎಂ. ಪ್ರಭಾಕರ ಜೋಶಿ ಮತ್ತು ಪ್ರೊ. ಎಂ. ಎಲ್ ಸಾಮಗರಿಂದ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಂತರ ಲಂಕಾದಹನ ಬಯಲಾಟವಿರುತ್ತದೆ.
ಗಾನ ತಾಳಮದ್ದಳೆ
ಮರುದಿನ ಸಂಜೆ ತಾಳಮದ್ದಳೆಯ ಸಡಗರ. ಇದು ಗಾನ ತಾಳಮದ್ದಳೆ ಎಂಬ ವಿಶಿಷ್ಟ ಪ್ರಯೋಗ. ಭಾಗವತಿಕೆಯಲ್ಲಿ ಹೆಸರು ಮಾಡಿದ ತೆಂಕು ಹಾಗೂ ಬಡಗು ತಿಟ್ಟು ಯಕ್ಷಗಾನ ಮೇಳಗಳ ಪದ್ಯಾಣ ಗಣಪತಿ ಭಟ್ ಸುಬ್ರಹ್ಮಣ್ಯ ಧಾರೇಶ್ವರ, ಪುತ್ತಿಗೆ ರಘುರಾಮ ಹೊಳ್ಳ, ದಿನೇಶ್ ಅಮ್ಮಣ್ಣಾಯ ಮತ್ತಿತರು ಕೃಷ್ಣ ಸಂಧಾನದ ಗಾನ ತಾಳ ಮದ್ದಳೆಯನ್ನು ನಡೆಸಿಕೊಡಲಿದ್ದಾರೆ. ರಾತ್ರಿ ಮಾಗಧವಧೆ ಬಯಲಾಟ.
ನವೆಂಬರ್ ಮೂರರಂದು ಕಾವ್ಯ-ಚಿತ್ರ-ಯಕ್ಷನೃತ್ಯ ಎಂಬ ಇನ್ನೊಂದು ಪ್ರದರ್ಶನ ಕಾರ್ಯಕ್ರಮ. ರಾತ್ರಿ ಸತ್ಯಹರಿಶ್ಚಂದ್ರ ಬಯಲಾಟ. ನವೆಂಬರ್ ನಾಲ್ಕರಂದು ಬೆಳಗ್ಗೆ ಯಕ್ಷಗಾನ ಕ್ಷೇತ್ರದ ಹಿರಿಯರೊಂದಿಗೆ ಮಾತುಕತೆ. ಮಧ್ಯಾಹ್ನ ಶತಾವಧಾನಿ ಆರ್. ಗಣೇಶ್ ಅವರಿಂದ ಅಷ್ಟಾವಧಾನ. ರಾತ್ರಿ ಶ್ರೀರಾಮ ಪಟ್ಟಾಭಿಷೇಕ ಯಕ್ಷಗಾನ. ಸಮಾರೋಪ ದಿನದಂದು ಬ್ರಹ್ಮ ಕಪಾಲ ಯಕ್ಷಗಾನ ಬಯಲಾಟವಿದೆ. ಅಂದು ಪೇಜಾವಶ್ರೀಗಳು ಆಶೀರ್ವಚನ ನೀಡುವರು.
(ಇನ್ಫೋ ವಾರ್ತೆ)