ಬತ್ತಳಿಕೆಯಲ್ಲೊಂದು ತಿರುತಿರುಗುವ ಹೊಸ ಗೂಗ್ಲಿ ಇದೆ- ಕುಂಬ್ಳೆ
*ಆಶಿಶ್ ಶುಕ್ಲಾ
ಡರ್ಬನ್ : ‘ಬತ್ತಳಿಕೆಯಲ್ಲೊಂದು ತಿರುಗು ಚೆಂಡಿದೆ. ವರ್ಷಗಳ ಕನಸದು. ಭುಜ ಸರಿಯಿರದಿದ್ದಾಗ ನಾನು ಸಿದ್ಧಪಡಿಸಿದ ಚೆಂಡು. ಮುಂದಿನ ವಾರ ಶುರುವಾಗುವ ಟೆಸ್ಟ್ನಲ್ಲಿ ಇದರ ಪ್ರಯೋಗ ಖಂಡಿತ’. ಕುಂಬ್ಳೆ ನಗುನಗುತ್ತಾ ಹೇಳಿದರು. ಅವರ ಮನದಲ್ಲಿ ಗಾಯದ ಕಲೆ ಮಾಯ. ಭುಜದ ನೋವೀಗ ಸಂಪೂರ್ಣ ಉಪಶಮನ. ಟೆಸ್ಟ್ ಪಂದ್ಯದ ಒಂದು ಇನ್ನಿಂಗ್ಸ್ನಲ್ಲಿ ಹತ್ತೂ ವಿಕೆಟ್ ಕಿತ್ತಾಗ ಇದ್ದ ಅದೇ ಛಾತಿಯ ಇಣುಕು. ಮುಂದುವರೆಯಿತು ಅವರ ಮಾತು...
...ಅದು ವಿಶೇಷ ಗೂಗ್ಲಿ. ಆಶ್ಚರ್ಯಕರ ರೀತಿಯಲ್ಲಿ ಪುಟಿದೇಳುತ್ತದೆ; ತಿರುತಿರುಗುತ್ತ. ಅದನ್ನು ಎಸೆವ ಅವಕಾಶಕ್ಕಾಗಿ ತಹತಹಿಸುತ್ತಿದ್ದೇನೆ. ನನ್ನ ಬಗ್ಗೆ ಒಂದು ಆರೋಪ ಇದೆ, ಚೆಂಡನ್ನು ಹೆಚ್ಚು ತಿರುಗಿಸುವುದಿಲ್ಲ ಎಂಬುದು. ವಾಸ್ತವದಲ್ಲಿ ನನ್ನ ಶೈಲಿಯೇ ಅದು. ಗಾಳಿ ವಿರುದ್ಧ ಚೆಂಡೆಸೆಯುವುದು ಅನೇಕ ಬೌಲರ್ಗಳಿಗೆ ಇಷ್ಟವಿಲ್ಲ. ನನಗೋ ಅದೇ ಇಷ್ಟ. ವಿಕೆಟ್ ತೆಗೆಯುವ ಚಕಮಕಿಗಳ ಹೊಸೆದು, ಎಸೆಯುವುದೇ ನನ್ನ ಉದ್ದೇಶ. ಅದರಲ್ಲಿ ನಾನು ಸಾಕಷ್ಟು ಯಶಸ್ವಿಯಾಗಿದ್ದೇನೆ ಕೂಡ.
ನಾನೀಗ ಪೂರ್ಣಪ್ರಮಾಣದಲ್ಲಿ ಗುಣಮುಖ. ಬಲ ಭುಜ ನನ್ನ ಮಾತನ್ನು ಕೇಳುತ್ತಿದೆ. ಭುಜದ ನೋವು ಕಾಣಿಸಿಕೊಂಡಾಗ ಹತಾಶೆಯಾಗಿತ್ತು ನಿಜ. ಆದರೆ ಅದೊಂದು ನೌಕರಿಯ ಸಹಜ ತೊಡರಿದ್ದಂತೆ. ಸರಿಪಡಿಸಿ ನಡೆಯಲೇಬೇಕಾಯಿತು. ಒಂದು ರೀತಿಯಲ್ಲಿ ಹಾಗಾದದ್ದು ಹರ್ಭಜನ್ ಬೆಳಕಿಗೆ ಬರಲು ಸಾಧ್ಯವಾಯಿತು. ಭಾರತ ತಂಡದಲ್ಲೇ ನನಗೆ ಪ್ರತಿಸ್ಪರ್ಧಿಯಾಬ್ಬ ಹುಟ್ಟಿಬಿಟ್ಟಿದ್ದಾನೆ, ಹಾಗೆ ಹೀಗೆ ಎಂದೆಲ್ಲಾ ಕೆಲವರು ಬರೆದಿದ್ದಾರೆ. ಹೊಸಬರಿಗೆ ಬೆನ್ನು ತಟ್ಟಬೇಕು. ನನಗೆ ತಿಳಿದದ್ದನ್ನು ಒಬ್ಬ ಬೌಲರ್ಗೆ ಹೇಳಿಕೊಡುತ್ತೇನೆ ಅಂದುಕೊಳ್ಳಿ. ಅವನು ಹೆಚ್ಚು ವಿಕೆಟ್ ಕಿತ್ತರೆ, ನನಗೆ ತಂಡದಿಂದ ಕೊಕ್ ಎಂಬ ಅಭಿಪ್ರಾಯ ಸರಿಯಾದುದಲ್ಲ. ಎಲ್ಲಿಯವರೆಗೆ ನನ್ನಲ್ಲಿ ಆಟ ಇರುತ್ತದೋ ನಾನೂ ಇರುತ್ತೇನೆ. ಅನುಭವಗಳನ್ನು ಹಂಚಿಕೊಂಡು ಬೆಳೆಯಬೇಕು, ಬೆಳೆಸಬೇಕು ಎಂಬುದು ನನ್ನ ಸಿದ್ಧಾಂತ.
ಕೊನೆಯದಾಗಿ ನೀವು ಮರೆಯಲಾಗದ ಘಳಿಗೆ ಯಾವುದು ಅಂತ ಕುಂಬ್ಳೆ ಅವರನ್ನು ಕೇಳಿದಾಗ, ಹಿಂದೂಮುಂದು ನೋಡದೆ ಹೇಳಿಬಿಟ್ಟರು- ‘ಪಾಕಿಸ್ತಾನದ ಹತ್ತೂ ವಿಕೆಟ್ ಬುಟ್ಟಿಗೆ ಬಿದ್ದ ಅಪರೂಪದ ದಿನ. ಆ ದಾಖಲೆಯನ್ನು ಬೇರೆಯವರು ಸರಿಗಟ್ಟಬಹುದು, ನನ್ನ ಹೆಸರು ಅಳಿಸೋದೇ ಇಲ್ಲ. ಜನ ಆ ಮೂಲಕ ಸದಾ ನನ್ನನ್ನು ನೆನಪಿಸಿಕೊಳ್ಳುವರೆಂಬ ಹೆಮ್ಮೆ’.
(ಪಿಟಿಐ)