ಭಾರತದ ಐಟಿ ಯಶಸ್ಸು ಜರ್ಮನಿಗೆ ಪಾಠ- ಗ್ರೆಹಾರ್ಡ್ ಷ್ರೋಡರ್
ಬೆಂಗಳೂರು: ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅದ್ಭುತ ಯಶಸ್ಸನ್ನು ಸಾಧಿಸಿರುವ ಭಾರತದಿಂದ ಜರ್ಮನಿ ಕಲಿಯಬೇಕಾದುದು ತುಂಬಾ ಇದೆ ಎಂದು ಜರ್ಮನ್ ಚಾನ್ಸಲರ್ ಗ್ರೆಹಾರ್ಡ್ ಷ್ರೋಡರ್ ಮಂಗಳವಾರ ಅಭಿಪ್ರಾಯಪಟ್ಟರು.
ಭಾರತ ಬಹಳಷ್ಟು ಕ್ಷೇತ್ರಗಳಲ್ಲಿ ಮುಂದಿದೆ. ಉಭಯ ದೇಶಗಳು ಪರಸ್ಪರ ಕಲಿಯಬೇಕಾದ ವಿಷಯಗಳಿವೆ. ಆರ್ಥಿಕ ಸುಭದ್ರತೆಗೆ ಶಾಂತಿಯುತ ವಿಶ್ವ ಅಗತ್ಯ ಎನ್ನುವ ಸಂದೇಶವನ್ನು ಭಾರತ ಹಾಗೂ ಜರ್ಮನಿ ಒಟ್ಟಾಗಿ ನೀಡಬೇಕು ಎಂದು ಅವರು ಹೇಳಿದರು. ವಿಪ್ರೋಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಅಲ್ಲಿನ ಸಿಬ್ಬಂದಿಗಳನ್ನುದ್ದೇಶಿಸಿ ಷ್ರೋಡರ್ ಮಾತನಾಡುತ್ತಿದ್ದರು.
ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಯಶಸ್ಸು ಭಾರತಕ್ಕಷ್ಟೇ ಸೀಮಿತವಾಗಿಲ್ಲ . ವಿಶ್ವದ ಇತರ ಭಾಗಗಳಲ್ಲೂ ಇಂಥ ಯಶಸ್ಸನ್ನು ಕಂಡಿದ್ದೇವೆ. ಆದರೆ, ಸಾಫ್ಟ್ವೇರ್ ಅಭಿವೃದ್ಧಿ ಹಾಗೂ ಸಂವಹನ ಕ್ಷೇತ್ರಗಳಲ್ಲಿ ಭಾರತೀಯರ ಸಾಧನೆ ದೊಡ್ಡದು. ನಾವು ಈ ಸಾಧನೆಯನ್ನು ಗೌರವಿಸುತ್ತೇವೆ. ಜ್ಞಾನ ಹಾಗೂ ಮಾಹಿತಿ ಬದಲಿಸಿಕೊಳ್ಳುವುದನ್ನು ನಾವು ಇಷ್ಟಪಡುತ್ತೇವೆ. ಪ್ರಸಕ್ತ ಜಾಗತಿಕ ಸಂದರ್ಭದಲ್ಲಿ ಇಂಥ ಬದಲಾವಣೆಗಳು ಹೆಚ್ಚು ಹೆಚ್ಚು ಅಪೇಕ್ಷಣೀಯ ಎಂದು ಷ್ರೋಡರ್ ಹೇಳಿದರು.
ಇದೇ ಸಂದರ್ಭದಲ್ಲಿ , ಜರ್ಮನ್ ಸಂಸ್ಕೃತಿ ಹಾಗೂ ಭಾಷೆಯ ಅಧ್ಯಯನಕ್ಕೆ ಅನುವು ಮಾಡಿಕೊಟ್ಟಿರುವ ವಿಪ್ರೋದ ಕಲಿಕಾ ಕೇಂದ್ರವನ್ನು ಷ್ರೋಡರ್ ವೀಕ್ಷಿಸಿದರು. ಷ್ರೋಡರ್ ಅವರ ಭೇಟಿ ಜರ್ಮನಿಯಲ್ಲಿ ವಿಪ್ರೋದ ವ್ಯವಹಾರಗಳಿಗೆ ಅನುಕೂಲಕರವಾಗಿದೆ ಎಂದು ವಿಪ್ರೋದ ಅಧ್ಯಕ್ಷ ಅಜೀಂ ಪ್ರೇಂಜಿ ಹೇಳಿದರು.
ರಾಜ್ಯಪಾಲೆ, ಮುಖ್ಯಮಂತ್ರಿಗಳಿಂದ ಸ್ವಾಗತ
ಉನ್ನತ ಮಟ್ಟದ ವಾಣಿಜ್ಯ ನಿಯೋಗದೊಂದಿಗೆ ಮಂಗಳವಾರ ಬೆಳಗ್ಗೆ ಉನ್ನತ ಮಟ್ಟದ ಬೆಂಗಳೂರಿಗೆ ಆಗಮಿಸಿದ ಷ್ರೋಡರ್ ಅವರಿಗೆ ರಾಜ್ಯಪಾಲೆ ವಿ.ಎಸ್.ರಮಾದೇವಿ, ಮುಖ್ಯಮಂತ್ರಿ ಎಸ್.ಎಂ.ಕೃಷ್ಣ , ಮೇಯರ್ ಪ್ರೇಮಾ ಕಾರ್ಯಪ್ಪ ಇತರರು ಸ್ವಾಗತ ಕೋರಿದರು.
ವಿದೇಶಿ ಬಂಡವಾಳ ಹೂಡಿಕೆ ಜಾಗತೀಕರಣದ ಲಕ್ಷಣ
ಜಾಗತೀಕರಣದ ಮುಖ್ಯ ಅಂಶವೇ ವಿದೇಶಿ ಬಂಡವಾಳವಾಗಿದ್ದು , ಭಾರತದಲ್ಲಿ ತಂತ್ರಜ್ಞಾನವನ್ನು ತೊಡಗಿಸಲು ಜರ್ಮನ್ ಕಂಪನಿಗಳು ಆಸಕ್ತವಾಗಿವೆ ಎಂದು ಜರ್ಮನ್ ಅರ್ಥಿಕ ಮತ್ತು ತಂತ್ರಜ್ಞಾನ ಸಚಿವ ಡಾ। ವರ್ನರ್ ಮುಲ್ಲರ್ ಹೇಳಿದರು.
ಮೈಕೊ ಅಪ್ಲಿಕೇಷನ್ ಸೆಂಟರ್ನಲ್ಲಿ ಡೀಜಲ್ ಇಂಜಿನ್ ಉದ್ಘಾಟಿಸಿ ಮಾತನಾಡುತ್ತಿದ್ದ ಮುಲ್ಲರ್, ಅಭಿವೃದ್ಧಿ ಶೀಲ ರಾಷ್ಟ್ರಗಳು ಪರಿಸರ ರಕ್ಷಣೆಯ ಕಡೆಗೆ ಗಮನಹರಿಸಲು ಕರೆ ನೀಡಿದರು.
(ಪಿಟಿಐ)