ಶ್ರೀನಾಥ್, ಪ್ರಸಾದ್ ಕ್ರಿಕೆಟ್ಗೆ ಗುಡ್ ಬೈ ಹೇಳಲಿ- ಡುಂಗಾರ್ಪುರ್
ದುಬೈ : ಮೈಸೂರು ಎಕ್ಸ್ಪ್ರೆಸ್ ಜಾವಗಲ್ ಶ್ರೀನಾಥ್ ಸುಸ್ತಾಗಿದ್ದಾರೆ. ಲೆಗ್ ಕಟರ್ ಮೋಡಿಗಾರ ವೆಂಕಟೇಶ್ ಪ್ರಸಾದ್ ಮೊನಚು ಮಾಯವಾಗಿದೆ. ಹೀಗಾಗಿ ಈ ಇಬ್ಬರಿಗೂ ಗೋಲ್ಡನ್ ಹ್ಯಾಂಡ್ಶೇಕ್ ಮಾಡುವ ಕಾಲ ಹತ್ತಿರಾಗಿದೆ, ಅರ್ಥಾತ್ ಕ್ರಿಕೆಟ್ಜೀವನಕ್ಕೆ ಮಂಗಳ ಹಾಡುವ ದಿನ ಸನ್ನಿಹಿತವಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮಾಜಿ ಅಧ್ಯಕ್ಷ ರಾಜ್ಸಿಂಗ್ ಡುಂಗಾರ್ಪುರ್ ಹೇಳಿದ್ದಾರೆ.
ಗಲ್ಫ್ ನ್ಯೂಸ್ಗೆ ಕೊಟ್ಟಿರುವ ಸಂದರ್ಶನದಲ್ಲಿ ಅವರು ಈ ಮಾತನ್ನಾಡಿದ್ದಾರೆ. ದಕ್ಷಿಣ ಆಫ್ರಿಕದಲ್ಲಿನ ಒಂದು ದಿನದ ಪಂದ್ಯಗಳ ತ್ರಿಕೋನ ಸರಣಿಯಲ್ಲಿನ ಸೋಲನ್ನು ಕುರಿತ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಿದ್ದರು. ಶ್ರೀನಾಥ್ ಹಾಗೂ ಪ್ರಸಾದ್ ಸಾಕಷ್ಟು ಆಡಿದ್ದಾರೆ. ಒಂದೋ ಈ ಇಬ್ಬರೂ ದೀರ್ಘ ಕಾಲ ರೆಸ್ಟ್ ತಗೊಳ್ಳಬೇಕು. ಇಲ್ಲವೇ ರಿಟೈರ್ ಆಗಬೇಕು. ಆಶಿಶ್ ನೆಹ್ರ ಹಾಗೂ ಜಹೀರ್ ಖಾನ್ ಲಯ ಕಂಡುಕೊಂಡಲ್ಲಿ ಶ್ರೀನಾಥ್ ಮತ್ತು ಪ್ರಸಾದ್ ಜಾಗೆಗಳನ್ನು ಸಮರ್ಥವಾಗಿ ತುಂಬಬಲ್ಲರು. ಮೂರನೇ ವೇಗಿಯಾಗಿ ಅಜಿತ್ ಅಗರ್ಕರ್ ತಂಡಕ್ಕೆ ಇದ್ದೇ ಇದ್ದಾರೆ. ಅಗರ್ಕರ್ ಪ್ರತಿಭಾವಂತ. ಇನ್ನಷ್ಟು ಸಾಣೆಗೊಡ್ಡಿಕೊಂಡು, ಅತಿಯಾದ ಯತ್ನಗಳನ್ನು ಮಾಡದಿದ್ದಲ್ಲಿ ಕ್ರಿಕೆಟ್ಟಿಗೆ ಎಂಟ್ರಿ ಕೊಟ್ಟಾಗ ತೋರಿದ ಪ್ರದರ್ಶನವನ್ನೇ ಮುಂದುವರಿಸಲು ಸಾಧ್ಯವಿದೆ ಎಂದರು.
ಭಾರತ ಸತತ 9ನೇ ಫೈನಲ್ಗಳನ್ನು ಸೋತಿದೆ. ಸಚಿನ್ ಔಟಾದೊಡನೆ, ಅವರನ್ನೇ ಅನುಕರಿಸುವ ಚಾಳಿ ಇನ್ನೂ ಕೊನೆಯಾಗಿಲ್ಲ. ತಂಡದ ಆಯ್ಕೆ ಪ್ರಕ್ರಿಯೆ ಇನ್ನೂ ಪಾರದರ್ಶಕವಾಗಬೇಕು. ನಯನ್ ಮೊಂಗಿಯಾ ಅವರನ್ನು ತಂಡದಿಂದ ಹೊರಗೆ ಹಾಕಿದ್ದು ತರವಲ್ಲ ಎಂದು ಡುಂಗಾರ್ಪುರ್ ಅಭಿಪ್ರಾಯಪಟ್ಟರು.
(ಪಿಟಿಐ)