ಇಲಿ ಜ್ವರದ ಸೋಂಕು : ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಹಿಳೆ ಸಾವು
ಚಿಕ್ಕಮಗಳೂರು : ಕಾಫಿಯ ನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಇತ್ತೀಚೆಗೆ 4 ಇಲಿ ಜ್ವರದ ಪ್ರಕರಣಗಳು ವರದಿಯಾಗಿದ್ದು, ಆ ಪೈಕಿ ಓರ್ವ ವಿವಾಹಿತ ಮಹಿಳೆ ಸಾವನ್ನಪ್ಪಿದ್ದಾಳೆ. ಈ ವಿಷಯವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಭಾಸ್ಕರ್ ನಾಯಕ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ಪ್ರಜ್ಞಾಹೀನಳಾಗಿ ಆಗಸ್ಟ್ 27ರಂದು ಸರಕಾರಿ ಆಸ್ಪತ್ರೆ ಸೇರಿದ್ದ ಕೊಪ್ಪ ತಾಲೂಕು ಜಯಪುರದ ಜಲದುರ್ಗ ಎಸ್ಟೇಟಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ನಾಗರತ್ನ ಎಂಬ 25 ವರ್ಷದ ಮಹಿಳೆ ಮೃತಪಟ್ಟಳೆಂದು ಅವರು ತಿಳಿಸಿದ್ದಾರೆ. ಆಕೆಯ ರಕ್ತ ಪರೀಕ್ಷೆಯಿಂದ ಮೊದಲು ಆಕೆಗೆ ಹೈಪಟೈಟಿಸ್ ಬಿ ಕಾಯಿಲೆ ಇರುವುದು ಪತ್ತೆಯಾಗಿತ್ತು. ಆನಂತರ ಆಕೆ ಇಲಿ ಜ್ವರದ ಸೋಂಕಿಗೆ ಬಲಿಯಾಗಿರುವುದೂ ತಿಳಿಯಿತು ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ರೋಗ ಉಲ್ಬಣಾವಸ್ಥೆಯಲ್ಲಿದ್ದ ಕಾರಣ ಆಕೆಯನ್ನು ಬದುಕಿಸುವ ಪ್ರಯತ್ನಗಳು ಫಲಕಾರಿಯಾಗಲಿಲ್ಲ ಎಂದವರು ಹೇಳಿದ್ದಾರೆ. ನಾಗರತ್ನ ಬಿನ್ ರಾಜಪ್ಪ ಎಂಬ ಈಕೆ ಮೂಲತಃ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನಿಂದ ಕೂಲಿ ಕೆಲಸಕ್ಕಾಗಿ ಇಲ್ಲಿಗೆ ಆಗಮಿಸಿದ್ದಳು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...