ಕೊಡಗು ಜಿಲ್ಲಾ ಟೆಲಿಕಾಂನಿಂದ ‘ಇಂಟಲಿಜೆನ್ಸ್ ನೆಟ್ವರ್ಕ್’ ಸೇವೆ
ಮಡಿಕೇರಿ : ಹಿಂದೆ ಕೇವಲ ಶ್ರೀಮಂತ ವರ್ಗದ ಸ್ವತ್ತಾಗಿದ್ದ ದೂರವಾಣಿ ಇಂದು ಶ್ರೀಸಾಮಾನ್ಯನ ಕೈಗೂ ಎಟಕಿದ್ದು, ಬಹುಮುಖಿ ಸೇವೆಯಾಗಿ ಹೊರಹೊಮ್ಮಿದೆ ಎಂದು ಕೇಂದ್ರ ಜವಳಿ ಖಾತೆ ರಾಜ್ಯ ಸಚಿವ ವಿ. ಧನಂಜಯ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.
ಕೊಡಗು ಜಿಲ್ಲಾ ದೂರವಾಣಿ ನಿಗಮವು ಆರಂಭಿಸಿದ ಹೊಸ ಇಂಟಲಿಜೆನ್ಸ್ ನೆಟ್ವರ್ಕ್ ಸೇವೆ ಉದ್ಘಾಟಿಸಿದ ಅವರು, ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪ್ರಗತಿಯಿಂದ ಮಹತ್ವದ ಬೆಳವಣಿಗೆ ಆಗುತ್ತಿದೆ. ಈ ನಿಟ್ಟಿನಲ್ಲಿ ದೂರವಾಣಿ ಪ್ರಮುಖ ಪಾತ್ರ ವಹಿಸಿದೆ ಎಂದರು.
ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕ್ರಾಂತಿಯಲ್ಲಿ ದೂರವಾಣಿ ಮೂಲಕ ಬಹುಮುಖ ಸೌಲಭ್ಯ ಪಡೆಯಬಹುದಾಗಿದೆ. ಭಾರತ ದೇಶವು ಐ.ಟಿ. ಕ್ಷೇತ್ರದಲ್ಲಿ ಜಗತ್ತಿನ ಇತರ ದೇಶಗಳೊಂದಿಗೆ ಸ್ಪರ್ಧಾ ನಿರತವಾಗಿದೆ ಎಂದರು.
ಜಿಲ್ಲೆಯಲ್ಲಿ ಪ್ರಸ್ತುತ ಸುಮಾರು 40,000 ದೂರವಾಣಿ ಗ್ರಾಹಕರಿದ್ದಾರೆ. 74 ವಿನಿಮಯ ಕೇಂದ್ರಗಳು ಜಿಲ್ಲೆಯಲ್ಲಿವೆ. ಹಾಲಿ 8,000 ಮಂದಿ ದೂರವಾಣಿ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ಜಿಲ್ಲಾ ಟೆಲಿಕಾಂ ಪ್ರಧಾನ ವ್ಯವಸ್ಥಾಪಕ ಸುರೇಂದ್ರ ಶೆಣೈ ತಿಳಿಸಿದರು.
ಇಂಟಲಿಜೆನ್ಸ್ ನೆಟ್ವರ್ಕ್ ಸೇವಾ ಸೌಲಭ್ಯ ಪಡೆದ ರಾಜ್ಯದ 6ನೇ ಜಿಲ್ಲೆ ಎಂಬ ಹೆಗ್ಗಳಿಕೆಗೆ ಕೊಡಗು ಪಾತ್ರವಾಗಿದೆ. ಈ ವ್ಯವಸ್ಥೆಯಡಿ ಪೂರ್ವಭಾವಿಯಾಗಿ ಖರೀದಿಸಿದ ಪತ್ರದ ನೆರವಿನಿಂದ ಗ್ರಾಹಕರು ಯಾವುದೇ ದೂರವಾಣಿಯಿಂದ ನಿಗದಿತ ದರದವರೆಗೆ ದೂರವಾಣಿ ಕರೆ ಮಾಡಬಹುದಾಗಿದೆ ಎಂದು ಅವರು, ಹೇಳಿದರು.