ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಮೀಸಲಾತಿನೀಡಲು ಸರಕಾರದ ಒಪ್ಪಿಗೆ
ಬೆಂಗಳೂರು : ಒಂದರಿಂದ ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಸರಕಾರಿ ಹುದ್ದೆಗಳಲ್ಲಿ ಶೇ 5ರಷ್ಟು ಮೀಸಲಾತಿ ನೀಡಲು ರಾಜ್ಯ ಸರಕಾರ ಒಪ್ಪಿಕೊಂಡಿದೆ.
ಅಲ್ಲದೆ 3ನೇ ತರಗತಿಯಿಂದ ಕನ್ನಡ ಕಲಿಕೆ ಕಡ್ಡಾಯ ಹಾಗೂ ಶಿಕ್ಷಣ ಮತ್ತು ಮಾಧ್ಯಮಕ್ಕೆ ಸಂಬಂಧಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಲ್ಲಿಸಿದ ವರದಿಯ ಎಲ್ಲ ಶಿಫಾರಸುಗಳನ್ನು ಜಾರಿಗೊಳಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಮಂಗಳವಾರ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಚ್. ವಿಶ್ವ ನಾಥ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಒಂದರಿಂದ 10ನೇತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ವೃತ್ತಿ ಶಿಕ್ಷಣದಲ್ಲಿ ಶೇ 5ರಷ್ಟು ಮೀಸಲಾತಿ ಜಾರಿಗೊಳಿಸಲಾಗಿದ್ದು, ಅದು ಯಶಸ್ವಿಯಾಗಿದೆ. ಅದೇ ರೀತಿ ಸರಕಾರಿ ಉದ್ಯೋಗದಲ್ಲಿಯೂ ಶೇ 5ರಷ್ಟು ಸಮಾನಾಂತರ ಒಳ ಮೀಸಲಾತಿ ನೀಡಲಾಗುವುದು ಎಂದು ವಿಶ್ವನಾಥ್ ಹೇಳಿದರು.
1ರಿಂದ 7ನೇ ತರಗತಿಯವರೆಗೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡುವ ಶಿಫಾರಸಿಗೆ ಸರಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಆದರೆ ಈ ಕುರಿತು ಹೈಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಅಂತಿಮ ನಿರ್ಣಯ ಕೈಗೊಂಡಿಲ್ಲ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಬರಗೂರು ರಾಮಚಂದ್ರಪ್ಪ, ಮುಖ್ಯಮಂತ್ರಿ ಕೃಷ್ಣ ಹಾಗೂ ಉನ್ನತ ಶಿಕ್ಷಣ ಸಚಿವ ಜಿ. ಪರಮೇಶ್ವರ್ ಭಾಗವಹಿಸಿದ್ದ ಸಭೆಯಲ್ಲಿ ಕೈಗೊಂಡ ನಿರ್ಣಯಗಳು :
- ಕನ್ನಡೇತರ ಶಾಲೆಗಳಲ್ಲಿ 3ನೇ ತರಗತಿಯಿಂದ ಕನ್ನಡ ಭಾಷಾ ಕಲಿಕೆ ಮತ್ತು ಕನ್ನಡ ಶಾಲೆಗಳಲ್ಲಿ 3ನೇ ತರಗತಿಯಿಂದ ಇಂಗ್ಲಿಷ್ ಕಲಿಸುವಿಕೆ ಕಡ್ಡಾಯ
- ಉರ್ದು, ಮರಾಠಿ, ತಮಿಳು, ತೆಲುಗು ಶಾಲೆಗಳಿಗೆ ಪೂರ್ಣ ಕಾಲಿಕ ಕನ್ನಡ ಬೋಧಕರ ನೇಮಕ
- ವೃತ್ತಿ ಶಿಕ್ಷಣದಲ್ಲಿ ಒಂದು ವರ್ಷ ಕನ್ನಡ ಭಾಷೆ ಕಲಿಕೆ ಕಡ್ಡಾಯ
- ಕೃಷಿ ವಿಶ್ವ ವಿದ್ಯಾಲಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ತರಗತಿಯಲ್ಲಿ ಕನ್ನಡ ಕಲಿಯಲು ಅನುಕೂಲವಾಗುವಂತೆ ಕನ್ನಡ ವಿಭಾಗಗಳನ್ನು ತೆರೆಯುವುದು
- ಗಡಿಭಾಗದ ಕನ್ನಡಿಗರಿಗೆ ಅನುಕೂಲವಾಗುವಂತೆ ಮಹಾರಾಷ್ಟ್ರದ ಡಿಪ್ಲೊಮಾ ಇನ್ ಎಜುಕೇಷನ್ನ್ನು ರಾಜ್ಯದಲ್ಲಿ ಟಿಸಿಎಚ್ಗೆ ಸಮಾನಾಂತರವಾಗಿ ಪರಿಗಣಿಸುವುದ
ನಿಮಗೇನನಿಸುತ್ತದೆ ?
ಮುಖಪುಟ / ಇವತ್ತು... ಈ ಹೊತ್ತು...