ಚೆಂಬು ಕಳ್ಳನ ಪತ್ತೆಗೆ ಸರ್ಕಾರಿ ಶಾಲಾ ಶಿಕ್ಷಕಿಯಿಂದ ‘ಅಗ್ನಿದಿವ್ಯ’ದ ಶಿಕ್ಷೆ
ಕೋಲಾರ : ಗಿರೀಶ್ ಕಾರ್ನಾಡರ ನಾಗಮಂಡಲ ನಾಟಕ ವೀಕ್ಷಿಸಿರುವಿರಾ? ನಾಗಾಭರಣ ನಿರ್ದೇಶಿಸಿದ ಈ ಚಿತ್ರವನ್ನು ನೋಡಿದ್ದೀರಾ? ಅದರಲ್ಲಿ ನಾಯಕಿ ತನ್ನ ಸತ್ಯಸಂದತೆಯನ್ನು ಮೆರೆಯಲು ನಾಗರ ಹಾವನ್ನು ಹಿಡಿದು ಆಣೆ ಮಾಡುತ್ತಾಳೆ. ಇದಕ್ಕೆ ನಾಗದಿವ್ಯ ಅಂತಾರೆ. ಅಂತೆಯೇ ಬೆಂಕಿಯನ್ನು ಹಿಡಿದು ಪ್ರಮಾಣ ಮಾಡಿದರೆ ಅಗ್ನಿ ದಿವ್ಯ ಎನ್ನುತ್ತಾರೆ.
ಇದೇನು ಈ 21ನೇ ಶತಮಾನದಲ್ಲಿ, ಇಂಟರ್ನೆಟ್ ಯುಗದಲ್ಲಿ ಸರ್ಪದಿವ್ಯ, ಅಗ್ನಿ ದಿವ್ಯದ ಮಾತೆ! ಎಂದು ಹುಬ್ಬೇರಿಸಬೇಡಿ. ಚೆಂಬು ಕಳ್ಳನ ಪತ್ತೆ ಹಚ್ಚಲು ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಏಳನೇ ತರಗತಿ ವಿದ್ಯಾರ್ಥಿಯಿಂದ ಅಗ್ನಿ ದಿವ್ಯ ಮಾಡಿಸಿ, ಕೈಸುಟ್ಟಿರುವ ಸುದ್ದಿ ತಡವಾಗಿ ವರದಿಯಾಗಿದೆ.
ಸರಿಯಾದ ಸಾಕ್ಷಿ, ಪುರಾವೆಗಳು ಇಲ್ಲದಿದ್ದ ಸಂದರ್ಭದಲ್ಲಿ ಹಿಂದೆ ಅಗ್ನಿ ದಿವ್ಯ, ಸರ್ಪದಿವ್ಯ ಮಾಡುತ್ತಿದ್ದರು. ಆದರೆ, ಈ ವಿಜ್ಞಾನ ಯುಗದಲ್ಲೂ ಅದೂ ಮಕ್ಕಳ ಮೌಢ್ಯವನ್ನು ಅಳಿಸಬೇಕಾದ ಶಿಕ್ಷಕಿಯೇ ಇಂತಹ ಘೋರಕ್ಕೆ ಕೈಹಾಕಿರುವುದು ನಾಚಿಕೆಗೇಡಿನ ಸಂಗತಿ.
ನಡೆದದ್ದು ಇಷ್ಟು : ನಾಲ್ಕು ದಿನಗಳ ಹಿಂದೆ ಕೋಲಾರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಂಜೇನಹಳ್ಳಿಯ ವರವಣಿ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಶಾಲೆಯ ಪಕ್ಕದಲ್ಲೇ ಇರುವ ಮನೆಯಾಂದರಿಂದ ಕುಡಿಯಲು ನೀರು ತರಿಸಿಕೊಂಡರು. ನೀರು ಕುಡಿದ ಬಳಿಕ ಚೆಂಬನ್ನು ಹಿಂತಿರುಗಿಸುವುದನ್ನು ಮರೆತರು. ಮರುದಿನ ಚೆಂಬು ನಾಪತ್ತೆಯಾಗಿತ್ತು. ವಿದ್ಯಾರ್ಥಿಗಳು ನನಗೆ ಗೊತ್ತಿಲ್ಲ, ತನಗೆ ಗೊತ್ತಿಲ್ಲ ಎಂದರು.
ಕಳ್ಳನನ್ನು ತಾನು ಅಗ್ನಿದಿವ್ಯದಿಂದ ಪತ್ತೆ ಹಚ್ಚುವುದಾಗಿ ಹೇಳಿದ ಶಿಕ್ಷಕಿ ಕರ್ಪೂರ ತರಿಸಿ, ವಿದ್ಯಾರ್ಥಿಯಾಬ್ಬನ ಅಂಗೈಮೇಲೆ ಹಚ್ಚಿ ಸತ್ಯಶೋಧನೆ ಮಾಡೇ ಬಿಟ್ಟರು. ಈಗ ಹುಡುಗ ಕೈಸುಟ್ಟುಕೊಂಡು, ವೈದ್ಯರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಘಟನೆ ನಡೆದ ದಿನ ಮುಖ್ಯೋಪಾಧ್ಯಾಯರು ಶಾಲೆಯಲ್ಲಿರಲಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಇನ್ನೂ 12ನೇ ಶತಮಾನದ ಮೂಡ ನಂಬಿಕೆಯಲ್ಲಿರುವ ಈ ಶಿಕ್ಷಕಿ ತಮ್ಮ ಮಕ್ಕಳಿಗೆ ಏನು ಪಾಠ ಮಾಡಿಯಾಳು? ಈಕೆಯಿಂದ ಪಾಠ ಕಲಿತ ನಮ್ಮ ಮಕ್ಕಳು ಹೇಗೆ ಉದ್ದಾರವಾದರು? ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ. ವಿಷಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಿವಿಗೂ ಮುಟ್ಟಿದೆ. ನಾಡನಾಳುವ ದೊರೆಗೂ ತಲುಪಿದೆ.
ಆದರೆ, ತನಗೂ ಹುಡುಗ ಕೈಸುಟ್ಟುಕೊಂಡಿರುವುದಕ್ಕೂ ಸಂಬಂಧವೇ ಇಲ್ಲ, ಇದು ಹೇಗೆ ಆಯಿತೋ ಗೊತ್ತಿಲ್ಲ ಎನ್ನುತ್ತಿದ್ದಾರೆ ಶಿಕ್ಷಕಿ. ಇದರ ಪತ್ತೆಗೆ ಸರ್ಪದಿವ್ಯ ಮಾಡಬೇಕೇನೋ!
(ಇನ್ಫೋ ವಾರ್ತೆ)
ನಿಮ-ಗೇ-ನ-ನಿ-ಸು-ತ್ತ-ದೆ ?
ಮುಖಪುಟ / ಲೋಕೋಭಿನ್ನರುಚಿ