ಆರು ತಿಂಗಳಲ್ಲಿ ಶಾಸಕರಾಗದಿದ್ದಲ್ಲಿ ಸಚಿವ ಸ್ಥಾನ ನಷ್ಟ-ಸುಪ್ರಿಂಕೋರ್ಟ್
ನವದೆಹಲಿ : ಶಾಸಕನಲ್ಲದ ವ್ಯಕ್ತಿ ಸಚಿವನಾದಾಗ ಆರು ತಿಂಗಳ ಅವಧಿಯಾಳಗೆ ಶಾಸನ ಸಭೆಗೆ ಸದಸ್ಯನಾಗಲು ವಿಫಲನಾದಲ್ಲಿ , ಅಲ್ಪಾವಧಿಯ ನಂತರ ಸಚಿವನಾಗಿ ಆತನ ಮರು ನೇಮಕ ಅಸಿಂಧುವೆಂದು ಸುಪ್ರಿಂಕೋರ್ಟ್ ತೀರ್ಪು ನೀಡಿದೆ.
ಪಂಜಾಬ್ ಸರ್ಕಾರದಲ್ಲಿ ಶಾಸಕರಲ್ಲದ ತೇಜ್ ಪ್ರಕಾಶ್ ಸಿಂಗ್ ಅವರನ್ನು ಎರಡನೇ ಅವಧಿಗೆ ಸಚಿವರಾಗಿ ನೇಮಿಸಿರುವುದನ್ನು ಪ್ರಶ್ನಿಸಿ, ಎಸ್.ಆರ್.ಚೌಧುರಿ ಅವರು ಸಲ್ಲಿಸಿದ್ದ ದೂರಿನ ವಿಚಾರಣೆಯ ನಂತರ ಸುಪ್ರಿಂಕೋರ್ಟ್ ಈ ಮಹತ್ವದ ತೀರ್ಪನ್ನು ಶುಕ್ರವಾರ ನೀಡಿದೆ. ಮುಖ್ಯ ನ್ಯಾಯಮೂರ್ತಿ ಎ.ಎಸ್.ಆನಂದ್ ಅವರು ನೇತೃತ್ವ ವಹಿಸಿದ್ದ ತ್ರಿಸದಸ್ಯರ ನ್ಯಾಯಪೀಠ ಈ ತೀರ್ಪು ನೀಡಿದೆ.
ಶಾಸಕನಾಗಿ ಆಯ್ಕೆಯಾಗದ ವ್ಯಕ್ತಿಯನ್ನು 6 ತಿಂಗಳ ಬಳಿಕ ಸಚಿವನಾಗಿ ಮರು ನೇಮಿಸುವುದು ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ. ಆದರೆ, ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರಾದ ವ್ಯಕ್ತಿಗಳಿಗೆ ಇದರಿಂದ ವಿನಾಯಿತಿ ಇದೆಯೇ ಎನ್ನುವ ಬಗೆಗೆ ಅಭಿಪ್ರಾಯ ವ್ಯಕ್ತಪಡಿಸಲು ನ್ಯಾಯಪೀಠ ನಿರಾಕರಿಸಿದೆ.
ಜಯಲಲಿತಾ ಏನು ಮಾಡುತ್ತಾರೆ?
ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಪಾಲಿಗೆ ಸುಪ್ರಿಂಕೋರ್ಟ್ ತೀರ್ಪು ವ್ಯತಿರಿಕ್ತ ಪರಿಣಾಮ ಬೀರಲಿದೆ. ಭ್ರಷ್ಟಾಚಾರ ಪ್ರಕರಣವನ್ನು ಎದುರಿಸುತ್ತಿರುವ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅನುಮತಿ ನಿರಾಕರಿಸಲಾಗಿತ್ತು . ಆದರೆ, ತಮ್ಮ ಪಕ್ಷದ ಜಯಭೇರಿಯ ಹಿನ್ನೆಲೆಯಲ್ಲಿ ಜಯಲಲಿತಾ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಜಯಲಲಿತಾ ಅವರ 6 ತಿಂಗಳ ಅವಧಿ ನವಂಬರ್ನಲ್ಲಿ ಕೊನೆಗೊಳ್ಳಲಿದ್ದು , ಅಷ್ಟರೊಳಗೆ ಅವರು ಶಾಸಕರಾಗಿ ಆಯ್ಕೆಯಾಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಜಯಲಲಿತಾ ಮುಂದೇನು ಮಾಡುತ್ತಾರೆ ಅನ್ನುವುದು ಕುತೂಹಲ ಹುಟ್ಟಿಸಿದೆ.
(ಇನ್ಫೋ ವಾರ್ತೆ)