ದೆಹಲಿಯಲ್ಲಿ ನಫೀಜಾ ಫಸಲ್: ಖಾತೆ ಬದಲಾವಣೆಗೆ ತೀವ್ರಅತೃಪ್ತಿ
ಬೆಂಗಳೂರು : ಇತ್ತೀಚೆಗೆ ನಗರದ ಪಂಚತಾರಾ ಹೊಟೇಲೊಂದರಲ್ಲಿ ಪಾನಮತ್ತರಾಗಿ ನೃತ್ಯ ಮಾಡಿದ ಆಪಾದನೆಯನ್ನು ಎದುರಿಸುತ್ತಿರುವ ಸಚಿವೆ ನಫೀಜಾ ಫಸಲ್ ಅವರ ಖಾತೆಯನ್ನು ಬದಲಾಯಿಸುವ ಮೂಲಕ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ರಾಜಕೀಯ ವಲಯಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಖಾತೆ ಬದಲಾವಣೆಯ ಬಗ್ಗೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ ಹಾಗೂ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಚರ್ಚೆ ನಡೆಸಿದ ಮುಖ್ಯಮಂತ್ರಿಗಳು, ಖಾತೆ ಬದಲಾವಣೆಯ ಪ್ರಸ್ತಾವನೆಯನ್ನು ರಾಜ್ಯಪಾಲರಿಗೆ ಕಳುಹಿಸಿದರು.
ನಫೀಜಾ ಅವರಿಂದ ವೈದ್ಯ ಶಿಕ್ಷಣ ಸ್ವತಂತ್ರ ಖಾತೆಯನ್ನು ಹಿಂದಕ್ಕೆ ಪಡೆದು, ಅದನ್ನು ಉನ್ನತ ಶಿಕ್ಷಣ ಸಚಿವ ಜಿ.ಪರಮೇಶ್ವರ್ ಅವರಿಗೆ ಹಸ್ತಾಂತರಿಸಲಾಗಿದೆ. ಈವರೆಗೆ ಪರಮೇಶ್ವರ್ ಅವರು ನಿರ್ವಹಿಸುತ್ತಿದ್ದ ವಿಜ್ಞಾನ ಮತ್ತು ತಂತ್ರಜ್ಞಾನ ಸ್ವತಂತ್ರ ಖಾತೆಯನ್ನು ನಫೀಜಾ ಅವರಿಗೆ ನೀಡಲಾಗಿದೆ. ಈ ಕುರಿತಾದ ಪ್ರಕಟಣೆಯನ್ನು ರಾಜ್ಯಪಾಲರು ಶುಕ್ರವಾರ ಇಳಿಸಂಜೆ ಹೊರಡಿಸಿದ್ದಾರೆ.
ದೆಹಲಿಯಲ್ಲಿ ನಫೀಜಾ: ಖಾತೆ ಬದಲಾವಣೆಗೆ ಅಸಮಾಧಾನ
ಹಿರಿಯ ಕಾಂಗ್ರೆಸ್ ಮುಖಂಡ ಆರ್.ಕೆ. ಧವನ್ ಅವರನ್ನು ಶುಕ್ರವಾರ ಸಂಜೆ ಭೇಟಿ ಮಾಡಿರುವ ನಫೀಜಾ ಫಸಲ್ ಅವರು ತಮ್ಮ ಖಾತೆ ಬದಲಾವಣೆಯ ಬಗೆಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದು ದೆಹಲಿ ಮೂಲಗಳು ತಿಳಿಸಿವೆ. ತಮಗೆ ವೈದ್ಯ ಶಿಕ್ಷಣ ಖಾತೆಯೇ ಬೇಕು ಎಂದು ಅವರು ಪಟ್ಟು ಹಿಡಿದಿದ್ದು , ಈ ಕುರಿತು ಪಕ್ಷದ ಹಿರಿಯ ನಾಯಕರಿಗೆ ಮನವಿ ಸಲ್ಲಿಸಿದ್ದಾರೆ.
(ಇನ್ಫೋ ವಾರ್ತೆ)