‘ನಾಯಕ್’ ಸಿನಿಮಾದ ಪ್ರಚಾರಕ್ಕೆ ಬೆಂಗಳೂರಿಗೆ ಬಂದ ಅನಿಲ್ಕಪೂರ್
ಬೆಂಗಳೂರು : ಪ್ರಾಮಾಣಿಕತೆ ಹಾಗೂ ಬದ್ಧತೆಯನ್ನು ಅಪೇಕ್ಷಿಸುವ ಜವಾಬ್ದಾರಿಯುತ ಕರ್ತವ್ಯ ಪತ್ರಕರ್ತರದಾಗಿದೆ ಎಂದು ಬಣ್ಣಿಸಿರುವ ಬಾಲಿವುಡ್ ತಾರೆ ಅನಿಲ್ ಕಪೂರ್, ಇತ್ತೀಚೆಗೆ ತಮಿಳುನಾಡಿನಲ್ಲಿ ಪತ್ರಕರ್ತರ ಮೇಲೆ ನಡೆದಿರುವ ದೌರ್ಜನ್ಯದ ಪ್ರಕರಣಗಳನ್ನು ಕಟುವಾಗಿ ಟೀಕಿಸಿದ್ದಾರೆ.
ಸೆಪ್ಟಂಬರ್ 7 ರಂದು ತೆರೆ ಕಾಣಲಿರುವ ತಮ್ಮ ‘ನಾಯಕ್’ ಸಿನಿಮಾದ ಪ್ರಚಾರಕ್ಕಾಗಿ ಶುಕ್ರವಾರ ಬೆಂಗಳೂರಿಗೆ ಆಗಮಿಸಿದ್ದ ಅನಿಲ್ಕಪೂರ್, ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ‘ನಾಯಕ್’ ಚಿತ್ರ ತಮಿಳಿನ ‘ಮುದಲ್ವನ್’ ನ ಹಿಂದಿ ಅವತರಣಿಕೆಯಾಗಿದ್ದು, ಈ ಚಿತ್ರದಲ್ಲಿ ತಾವು ಟೀವಿ ಪತ್ರಕರ್ತರಾಗಿ ಪಾತ್ರ ನಿರ್ವಹಿಸಿರುವುದಾಗಿ ಕಪೂರ್ ಹೇಳಿದರು.
ಜನರನ್ನು ಆದರ್ಶಗಳೆಡೆಗೆ ಒಯ್ಯುವ ಉದ್ದೇಶವನ್ನು ಈ ಸಿನಿಮಾ ಹೊಂದಿದೆ. ಈ ದಿನಗಳಲ್ಲಿ ರಿಮೇಕ್ ಮಾಡುವುದು ಅತ್ಯಂತ ಕಠಿಣವಾಗಿದ್ದು, ಹೆಚ್ಚಿನ ಶ್ರಮವನ್ನು ಅಪೇಕ್ಷಿಸುತ್ತದೆ. ‘ನಾಯಕ್’ ನಲ್ಲಿ ಮೂಲಚಿತ್ರದ ಸೊಗಡನ್ನು ಉಳಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು. ಬಾಲಿವುಡ್ ಹಾಗೂ ಭೂಗತ ಜಗತ್ತಿನ ಹಣಕಾಸು ಸಂಪರ್ಕಗಳ ಪ್ರಶ್ನೆಗೆ ಉತ್ತರಿಸಿದ ಅವರು, ಇಂಥ ಪ್ರಕರಣಗಳು ಎಲ್ಲ ಉದ್ದಿಮೆಗಳಲ್ಲೂ ಇರುತ್ತವೆ. ಆದರೆ, ಪ್ರಸ್ತುತ ಸಿನಿಮಾ ಉದ್ಯಮ ಹೆಚ್ಚು ವೃತ್ತಿಪರವಾಗುತ್ತಿದ್ದು, ಅದರ ಎಲ್ಲ ವ್ಯವಹಾರಗಳು ಲಿಖಿತ ರೂಪದಲ್ಲಿರುತ್ತವೆ ಎಂದರು.
‘ನಾಯಕ್’ ನಲ್ಲಿ ಟೀವಿ ಪತ್ರಕರ್ತನ ಪಾತ್ರದ ಬಗೆಗಿನ ಅನುಭವ, ರೋಮಾಂಚನಗಳನ್ನು ಅನಿಲ್ ಕಪೂರ್ ಹಂಚಿಕೊಂಡರು. ಪ್ರಣಯ್ ರಾಯ್ ಅವರ ಭಾವುಕತೆ, ರಜತ್ ಶರ್ಮ ಅವರ ಗಾಢ ನಿರ್ಲಿಪ್ತತೆ ಹಾಗೂ ಪ್ರಶ್ನೆಗಳ ಮೂಲಕ ಗಲಿಬಿಲಿ ಹುಟ್ಟಿಸುವ ಕರಣ್ ಥಪರ್ ಅವರ ಚುರುಕುತನವನ್ನು ತಮ್ಮ ಪಾತ್ರದಲ್ಲಿ ತುಂಬಲು ಪ್ರಯತ್ನಿಸಲಾಗಿದೆ ಎಂದರು. ಕನ್ನಡದ ಪಲ್ಲವಿ ಅನುಪಲ್ಲವಿ ಚಿತ್ರದಲ್ಲಿ ಅಭಿನಯಿಸಿರುವುದನ್ನು ನೆನಪಿಸಿಕೊಂಡ ಕಪೂರ್, ದಕ್ಷಿಣದ ಇತರ ಭಾಷಾ ಚಿತ್ರಗಳಲ್ಲೂ ಅಭಿನಯಿಸುವ ಇಚ್ಛೆ ವ್ಯಕ್ತಪಡಿಸಿದರು.
(ಪಿಟಿಐ)