ಇದೀಗ ಸಾರ್ವಜನಿಕರ ಅಹವಾಲು ನೇರ ಎಸ್.ಎಂ. ಕೃಷ್ಣ ಗಮನಕ್ಕೆ
ಬೆಂಗಳೂರು : ನೌಕರಷಾಹಿಯ ದಿನ ನಿತ್ಯದ ಕಾರ್ಯ ಕ್ಷಮತೆಯ ಬಗ್ಗೆ ಕಟ್ಟು ನಿಟ್ಟಿನ ಎಚ್ಚರವನ್ನು ವಹಿಸಲು ಅನುಕೂಲವಾಗುವ ನೂತನ ನಿರ್ವಹಣಾ ಮಾಹಿತಿ ಪದ್ಧತಿಯನ್ನು ‘ಮುಖ್ಯ ವಾಹಿನಿ’ ಕಾರ್ಯಕ್ರಮದಡಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಜಾರಿಗೆ ತಂದಿದ್ದಾರೆ.
ಇತ್ತೀಗಷ್ಟೇ ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ನೂತನ ಪದ್ಧತಿಯನ್ನು ಅಳವಡಿಸಲಾಗಿದೆ. ಸಾರ್ವಜನಿಕರು ಹಾಗೂ ಜನ ಪ್ರತಿನಿಧಿಗಳು ಸಲ್ಲಿಸುವ ದೂರು ದುಮ್ಮಾನಗಳು ಹೊಸ ವ್ಯವಸ್ಥೆಯಲ್ಲಿ ದಾಖಲಾಗುತ್ತವೆ ಹಾಗೂ ಈ ದೂರುಗಳ ಬಗೆಗೆ ಸ್ವತಃ ಮುಖ್ಯಮಂತ್ರಿಗಳೇ ಗಮನ ಹರಿಸುವರು. ಇದರಿಂದಾಗಿ ರಾಜ್ಯದ ಅಧಿಕಾರಿ ಷಾಹಿ ಕಾರ್ಯ ಕ್ಷಮತೆಯನ್ನು ಮುಖ್ಯಮಂತ್ರಿಗಳು ಅತ್ಯಂತ ಹತ್ತಿರದಿಂದ ಗಮನಿಸಲು ಸಾಧ್ಯವಾಗುತ್ತದೆ ಎಂದು ಅಧಿಕೃತ ಮೂಲಗಳು ಬುಧವಾರ ತಿಳಿಸಿವೆ.
ಈಗಾಗಲೇ ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಕೆಲವು ರಾಜ್ಯಗಳು ಈ ಪದ್ಧತಿಯನ್ನು ಅಭಿವೃದ್ಧಿ ಪಡಿಸಿವೆ. ಕೃಷಿ, ಮೂಲಭೂತ ವ್ಯವಸ್ಥೆ , ಶಿಕ್ಷಣ, ಆರೋಗ್ಯ ಹಾಗೂ ಆಡಳಿತ ಕುರಿತಾದ ವಿಷಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ತಮ್ಮ ಮನವಿ- ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಬಹುದಾಗಿದೆ. ಪ್ರಸ್ತುತ ಮುಖ್ಯಮಂತ್ರಿಗಳ ಕಾರ್ಯಾಲಯ ಪ್ರತಿದಿನ 800 ಮನವಿಗಳನ್ನು ಸ್ವೀಕರಿಸುತ್ತಿದೆ.
(ಯುಎನ್ಐ)