ಮೈದುಂಬಿದ ಕಬಿನಿ ಮತ್ತು ಹಾರಂಗಿ, ನೆರೆ ನಡುವೆ ನಂಜನಗೂಡು
ಮಡಿಕೇರಿ: ಜಿಲ್ಲೆಯಾದ್ಯಂತ ಸುರಿದ ಮಳೆಗೆ ಹಾರಂಗಿ ಮತ್ತು ಕಬಿನಿ ಜಲಾಶಯಗಳು ಭರ್ತಿಯಾಗಿವೆ. ಪರಿಣಾಮವಾಗಿ ನಂಜನಗೂಡಿನ ಪ್ರಸಿದ್ಧ ನಂಜುಡೇಶ್ವರ ದೇವಾಲಯ ನೀರಿನಿಂದ ಆವೃತವಾಗಿದೆ.
ಭರ್ತಿಯಾಗಿರುವ ಕಬಿನಿ ಜಲಾಶಯದ ಎಲ್ಲ ಗೇಟುಗಳನ್ನು ಸೋಮವಾರ ಸಂಜೆ ತೆಗೆದು ಕಾವೇರಿಗೆ ನೀರು ಬಿಡಲಾಗಿದೆ. ಇನ್ನಷ್ಟು ಮಳೆ ಬರುವ ನಿರೀಕ್ಷೆಯಿಂದ ಮಾದೇಕಟ್ಟೆ ಹಳ್ಳಿಯನ್ನು ಖಾಲಿ ಮಾಡಿ ನಿವಾಸಿಗಳನ್ನು ತಾತ್ಕಾಲಿಕ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಕಬಿನಿ ಜಲಾಶಯದ ಕೆಳ ದಂಡೆಯಲ್ಲಿ ವಾಸಿಸುವ ಮಂದಿಗೆ ಹಾಗೂ ಹೆಗ್ಗಡದೇವನ ಕೋಟೆಯ ನಿವಾಸಿಗಳಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಲಾಗಿದೆ. ಕಿಟ್ಟರಮಲ್ಲ ಮತ್ತು ಮೂಡುಕುತೊರೆ ಪ್ರದೇಶದಲ್ಲಿ ಈಗಾಗಲೇ ನೀರು ತುಂಬಿಕೊಂಡಿದೆ. ಟೀ ನರಸೀಪುರ ಮತ್ತು ನಂಜನಗೂಡಿನ ನಿವಾಸಿಗಳೂ ಎತ್ತರ ಪ್ರದೇಶಕ್ಕೆ ತೆರಳುತ್ತಿದ್ದಾರೆ.
ಕೊಡಗಿನ ಲಕ್ಷ್ಮಣ ತೀರ್ಥ ನದಿ ಉಕ್ಕಿ ಹರಿಯುತ್ತಿದೆ. ನದಿದಂಡೆಯಲ್ಲಿ ವಾಸಿಸುತ್ತಿರುವವರಿಗೆ ಗಂಟೆ ಮೂಟೆ ಕಟ್ಟಿಕೊಂಡು ಎತ್ತರದ ಪ್ರದೇಶಕ್ಕ ಹೋಗುವಂತೆ ಆಜ್ಞಾಪಿಸಲಾಗಿದೆ.
ತುಂಗಭದ್ರಾ ಜಲಾಶಯದ ಮೇಲ್ಭಾಗದಲ್ಲಿ ಉತ್ತಮ ಮಳೆಯಾಗಿರುವುದರಿಂದ ಜಲಾಶಯಕ್ಕೆ 5.42 ಅಡಿ ನೀರು ಬಂದಿದೆ. 37 ಸಾವಿರ ಕ್ಯೂಸೆಕ್ಸ್ ನೀರಿನ ಒಳಹರಿವು ಬಂದಿದ್ದು, 35.464 ಟಿಎಂಸಿ ನೀರು ಶೇಖರಣೆಯಾಗಿದೆ. ಕೊಡಗಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣ ರಾಜ ಸಾಗರದಲ್ಲಿಯೂ ನೀರಿನ ಮಟ್ಟ 92.50 ಅಡಿಗಳಿಗೇರಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...