ದ್ರಾವಿಡ್, ಶ್ರೀನಾಥ್, ಅಗರ್ಕರ್, ಅಜ-ರ್ ಸ್ಟಿರಾ-ಯಿ-ಡ್ ಸೇವ-ನೆ?
ನವದೆಹಲಿ : ಭಾರತ ಕ್ರಿಕೆಟ್ ತಂಡದ ಉಪನಾಯಕ ರಾಹುಲ್ ದ್ರಾವಿಡ್, ಮೈಸೂರ್ ಎಕ್ಸ್ಪ್ರೆಸ್ ಜಾವಗಲ್ ಶ್ರೀನಾಥ್, ಅಗರ್ಕರ್ ಹಾಗೂ ಕಣದಿಂದ ಬಹಿಷ್ಕಾರಕ್ಕೀಡಾಗಿರುವ ಮೊಹಮದ್ ಅಜರುದ್ದೀನ್ ಸ್ಟಿರಾಯಿಡ್ ಬಳಸಿದ್ದಾರೆ!
ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ಅನ್ಷುಮನ್ ಗಾಯಕವಾಡ್ ಕೊಟ್ಟ ಹೇಳಿಕೆಯ ಜಾಡು ಹಿಡಿದು ಪತ್ತೆಗೆ ಕೈ ಹಾಕಿದ ಔಟ್ಲುಕ್ ಪತ್ರಿಕೆ ಈ ವಿಷಯವನ್ನು ಹೊರಗೆಡಹಿದೆ. ಅಗರ್ಕರ್ಗೆ ಅಷ್ಟು ವೇಗವಾಗಿ ಬೌಲ್ ಮಾಡುವ ಪರ್ಸನಾಲಿಟಿ ಇರಲಿಲ್ಲ. ಪದೇ ಪದೇ ಆ ನೋವು ಈ ನೋವು ಅಂತ ಒದ್ದಾಡುತ್ತಿದ್ದರು. ಆಗ ನೆರವಿಗೆ ಬಂದದ್ದು ಸ್ಟಿರಾಯಿಡ್ ಹಾಗೂ ಕಾರ್ಟಿಸೋನ್ ಚಚ್ಚುಮದ್ದುಗಳು.
ನೋವಿನಿಂದ ಕ್ಷಿಪ್ರವಾಗಿ ಗುಣಮುಖರಾಗಲು, ಮಾಂಸಗಳು ಬಲಾಢ್ಯವಾಗಲು ಅನೇಕ ಆಟಗಾರರು ನಿಯಮಿತವಾಗಿ ಸ್ಟಿರಾಯಿಡ್ ಮೊದಲಾದ ದೇಹ ಶಕ್ತಿ ವರ್ಧಕಗಳನ್ನು ಬಳಸುತ್ತಿದ್ದರು. ಭಾರತ ಕ್ರಿಕೆಟ್ ತಂಡದ ದೈಹಿಕ ತಜ್ಞ ಆ್ಯಂಡ್ರೂ ಲೀಪಸ್ ಅಗರ್ಕರ್ಗೆ ತರಪೇತಿ ಕೊಟ್ಟ ನಂತರ ಅವರ ಕಾಲುಗಳು ದೃಢವಾದವು ಎಂದು ಗಾಯಕವಾಡ್ ಹೇಳಿದ್ದಾರೆ.
ಹಾಗೆಲ್ಲಾ ಬರೆಯಬೇಡಿ : ಈ ವಿಷಯವನ್ನು ಖಾತ್ರಿ ಪಡಿಸಿಕೊಳ್ಳಲು ಔಟ್ಲುಕ್ ಪತ್ರಿಕೆ ಆಟಗಾರರನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಅಗರ್ಕರ್ ಮಾತ್ರ ಮಾತಿಗೆ ಸಿಕ್ಕಿದ್ದಾರೆ. ಓಕೆ. ಆದರೆ ಈಗ ನಾನು ಸ್ಟಿರಾಯಿಡ್ ಬಳಸುತ್ತಿಲ್ಲ. ಹಾಗೆಲ್ಲಾ ಬರೆಯಬೇಡಿ ಅಂತ ಅಗರ್ಕರ್ ಹರಾರೆಯಿಂದ ಪ್ರತಿಕ್ರಿಯಿಸಿದ್ದಾರೆ. ಈಗ ಬಳಸುತ್ತಿಲ್ಲ ಎಂಬ ಧ್ವನಿ ಹಿಂದೆ ಬಳಸುತ್ತಿದ್ದೆ ಎಂಬುದನ್ನು ಖಚಿತಪಡಿಸುತ್ತದೆ.
ಉದ್ದೀಪನಾ ಮದ್ದು ಒಯ್ಯುತ್ತಿದ್ದುದು ಹೇಗೆ ? : ಒಬ್ಬ ಕ್ರಿಕೆಟಿಗ ಹೇಳಿರುವ ಮಾತನ್ನು ಔಟ್ಲುಕ್ ಹೀಗೆ ಪ್ರಕಟಿಸಿದೆ- ಪ್ರವಾಸದ ವೇಳೆ ಉದ್ದೀಪನ ಮದ್ದಿನ ಬಳಕೆಯ ಗುಮಾನಿ ತಡೆಯಲು, ಅನೇಕ ಕ್ರಿಕೆಟಿಗರು ಸ್ಟಿರಾಯಿಡ್ ಮೊದಲಾದುವುಗಳನ್ನು ತಂಡದ ಫಿಸಿಯೋ ಅವರ ಕಿಟ್ಟಿನೊಟ್ಟಿಗೆ ಒಯ್ಯುತ್ತಿದ್ದರು. ಮುಂಬಯಿಯ ಸಂಜೆ ಪತ್ರಿಕೆಯಾಂದಕ್ಕೆ ಇತ್ತೀಚೆಗೆ ನೀಡಿರುವ ಸಂದರ್ಶನದಲ್ಲಿ ಮಾಜಿ ದೈಹಿಕ ತಜ್ಞ ಅಲಿ ಹೀಗೆಂದಿದ್ದಾರೆ- ನಾನು ಅಜರ್ಗೆ ಬರುವ ಪಾರ್ಸಲ್ ಅಷ್ಟೇ ಅಲ್ಲ, ಎಲ್ಲಾ ಆಟಗಾರರ ಪಾರ್ಸಲ್ಗಳನ್ನೂ ಇಟ್ಟುಕೊಂಡಿರುತ್ತೇನೆ. ಅವರು ಬಂದು ನನ್ನಿಂದ ಪಡೆಯುತ್ತಾರೆ.
ಐಸಿಸಿ ವರದಿಯಲ್ಲೂ ... : ಈ ಎಲ್ಲಾ ವಿಷಯಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಭಾರತ ತಂಡದ ಅನೇಕ ಕ್ರಿಕೆಟಿಗರು ಉದ್ದೀಪನ ಮದ್ದನ್ನು ಬಳಸುತ್ತಾರೆ ಎಂಬುದು ಖಾತ್ರಿಯಾಗುತ್ತದೆ ಎಂದು ಪತ್ರಿಕೆ ಪ್ರಕಟಿಸಿದೆ. ಭಾರತದ ಆಟಗಾರರಷ್ಟೇ ಅಲ್ಲದೆ, ಪಾಕಿಸ್ತಾನದ ಕ್ರಿಕೆಟಿಗರಿಗೂ ಉದ್ದೀಪನ ಮದ್ದಿನ ಚಾಳಿಯಿದೆ. 80ರ ದಶಕದಲ್ಲೇ ಇದರ ಬಗ್ಗೆ ಸೊಲ್ಲೆದ್ದಿತ್ತು. ಕಳೆದ ಮೇ ತಿಂಗಳಲ್ಲಿ ಬಹಿರಂಗವಾದ ಐಸಿಸಿಯ ಮ್ಯಾಚ್ಫಿಕ್ಸಿಂಗ್ ವರದಿಯಲ್ಲೂ ಕ್ರಿಕೆಟಿಗರು ಉದ್ದೀಪನಾ ಮದ್ದನ್ನು ಬಳಸಿರುವ ಉಲ್ಲೇಖವಿದೆ. ಆದರೆ ಅದಕ್ಕೆ ಬಲವಾದ ಸಾಕ್ಷ್ಯಗಳು ಲಭಿಸಿಲ್ಲ.
ಅಪರ್ಣಾ ಪೋಪಟ್ ಡಿ ಕೋಲ್ಡ್ ತೆಗೆದುಕೊಂಡದ್ದಕ್ಕೇ ಆಕೆಯ ಬ್ಯಾಡ್ಮಿಂಟನ್ ಕೆರಿಯರ್ಗೆ ಪೆಟ್ಟು ಬಿದ್ದಿತು. ಫುಟ್ಬಾಲ್ ಹಾಗೂ ಅಥ್ಲೀಟ್ನಲ್ಲಿ ಅದೆಷ್ಟು ದಿಗ್ಗಜರು ಉದ್ದೀಪನಾ ಮದ್ದು ಸೇವನೆ ಆರೋಪದಿಂದ ಆಟ ಕಳೆದುಕೊಂಡಿದ್ದಾರೋ ಲೆಕ್ಕವಿಲ್ಲ. ಭಾರತದ ಮನೆ ಮನೆ ಆಟವಾದ ಕ್ರಿಕೆಟ್ಟೂ ಇದಕ್ಕೆ ಹೊರತಲ್ಲವೆಂದರೆ... ಈ ಹೊತ್ತು ಚರ್ಚೆಯಲ್ಲಿರುವ ವಿಷಯವೇ ಇದು. ಒಂದು ವೇಳೆ ಉದ್ದೀಪನಾ ಮದ್ದಿನ ಬಳಕೆ ನಿಜವೇ ಆಗಿದ್ದಲ್ಲಿ ಕ್ರಿಕೆಟಿಗರಿಗೆ ಕೆಟ್ಟ ಕಾಲ ಬರುವ ದಿನಗಳು ದೂರವಿಲ್ಲ.
(ಇನ್ಫೋ ವಾರ್ತೆ)
What do you think about this article?
ಮುಖಪುಟ / ಇವತ್ತು... ಈ ಹೊತ್ತು...