ವೀರಪ್ಪನನ್ನು ಬಗ್ಗುಬಡಿಯಲು ಜಯಲಲಿತಾ ಸರ್ಕಾರ ಸಂಕಲ್ಪ
ಚೆನ್ನೈ : ನರಹಂತಕ ವೀರಪ್ಪನ್ ಸೆರೆಗೆ ಎಲ್ಲಾ ಅಗತ್ಯ ಕ್ರಮಗಳನ್ನು ತಮಿಳುನಾಡು ರಾಜ್ಯ ಸರ್ಕಾರ ಕೈಗೊಳ್ಳುವುದೆಂದು ರಾಜ್ಯಪಾಲೆ ಫಾತಿಮಾ ದೇವಿ ಶುಕ್ರವಾರ ವಿಧಾನಸಭೆಯಲ್ಲಿ ಘೋಷಿಸಿದ್ದಾರೆ.
ಯಾವುದೇ ಭಯೋತ್ಪಾದಕತೆ ಅಥವಾ ಬೆದರಿಕೆಗಳಿಗೆ ಮಣಿಯದೆ ವೀರಪ್ಪನ್ನಂತಹ ಸಮಸ್ಯೆಗಳನ್ನು ಪರಿಹರಿಸುವ ಮಾರ್ಗ ಕಂಡುಕೊಳ್ಳಲಾಗುವುದು. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ಸಲಹೆಯನ್ನೂ ಪಡೆಯಲಾಗುವುದು ಎಂದು ಫಾತಿಮಾ ದೇವಿ ಹೇಳಿದರು. ಅವರು 12 ನೇ ವಿಧಾನಸಭೆಯ ಮೊದಲ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಹಿಂದಿನ ಸರ್ಕಾರವು ವೀರಪ್ಪನ್ ಸಮಸ್ಯೆ ಹಾಗೂ ಪ್ರತ್ಯೇಕತಾವಾದಿಗಳನ್ನು ಮಟ್ಟ ಹಾಕುವಲ್ಲಿ ವಿಫಲವಾಗಿರುವುದನ್ನು ತಮ್ಮ ಭಾಷಣದಲ್ಲಿ ವಿಶೇಷವಾಗಿ ಪ್ರಸ್ತಾಪಿಸಿದ ರಾಜ್ಯಪಾಲರು, ಈ ಭಾರಿ ಹಳೆಯ ಘಟನೆಗಳು ಮರುಕಳಿಸುವುದಿಲ್ಲ . ಟಿಎನ್ಎಲ್ಎ ಹಾಗೂ ಟಿಎನ್ಆರ್ಟಿ ಯಂತಹ ರಾಷ್ಟ್ರ ವಿರೋಧಿ ಒಕ್ಕೂಟಗಳನ್ನು ಸರ್ಕಾರ ಸದೆ ಬಡಿಯುವ ಭರವಸೆ ನೀಡಿದರು.
ವೀರಪ್ಪನ್ ಕಾರ್ಯಾಚರಣೆ ಕಮಾಂಡರ್ ಆಗಿ ಕೆಂಪಯ್ಯ(ಬೆಂಗಳೂರು ವರದಿ)
ರಾಜ್ಯ ಪೊಲೀಸ್ ಪಡೆಯ ಡಿಐಜಿ ಕೆಂಪಯ್ಯ ಅವರಿಗೆ ಐಜಿಪಿಯಾಗಿ ಬಡ್ತಿ ನೀಡಿರುವ ರಾಜ್ಯ ಸರ್ಕಾರ, ಅವರನ್ನು ವೀರಪ್ಪನ್ ವಿರುದ್ಧದ ವಿಶೇಷ ಕಾರ್ಯಾಚರಣೆ ಪಡೆಯ ಕಮಾಂಡರ್ ಆಗಿ ನೇಮಿಸಿದೆ.
ಈವರೆಗೂ ಎಸ್ಟಿಎಫ್ ಮುಖ್ಯಸ್ಥರಾಗಿದ್ದ ಹರ್ಷ ವರ್ಧನ ರಾಜು ಅವರು ಕೇಂದ್ರಕ್ಕೆ ಎರವಲು ಸೇವೆಗಾಗಿ ಮರಳಿದ್ದರಿಂದ ಖಾಲಿಯಾಗಿದ್ದ ಸ್ಥಾನವನ್ನು ಕೆಂಪಯ್ಯ ತುಂಬಲಿದ್ದಾರೆ. ಕೆಂಪಯ್ಯ ಅವರೊಂದಿಗೆ ಇತರ ಐವರು ಐಪಿಎಸ್ ಅಧಿಕಾರಿಗಳಿಗೆ ಐಜಿಪಿ ಸ್ಥಾನಕ್ಕೆ ರಾಜ್ಯ ಸರ್ಕಾರ ಬಡ್ತಿ ನೀಡಿದೆ.
ವಾರ್ತಾ
ಸಂಚಯ
ಮುಖಪುಟ
/
ವೀರಪ್ಪನ್
ಶಿಕಾರಿ