ಅರಬ್ಬಿಯಲ್ಲಿ ವಾಯುಭಾರ ಕುಸಿತ : ಕರಾವಳಿಯಲ್ಲಿ ಚಂಡಮಾರುತ ಭೀತಿ
ಬೆಂಗಳೂರು : ಅರಬ್ಬಿ ಸಮುದ್ರದ ದಕ್ಷಿಣ ಭಾಗದಲ್ಲಿ ವಾಯುಭಾರ ಕುಸಿತ ಕಂಡುಬಂದಿದೆ. ತತ್ಪರಿಣಾಮವಾಗಿ ಕರ್ನಾಟಕದ ಕರಾವಳಿ ಪ್ರದೇಶಗಳೂ ಸೇರಿದಂತೆ ಕೊಂಕಣ, ಗೋವಾಗಳಲ್ಲಿ ಭಾರಿ ಮಳೆ ಆಗುತ್ತಿದೆ. ವಾಯುಭಾರ ಕುಸಿತ ಚಂಡಮಾರುತವಾಗಿ ಪರಿವರ್ತನೆಯಾಗುತ್ತಿದ್ದು, ಮುಂದಿನ ಎರಡು ದಿನಗಳಲ್ಲಿ ಭಾರಿ ಮಳೆಆಗಲಿದೆ ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ.
ಗೋವೆಯ ಪಣಜಿಯಿಂದ ನೈಋತ್ಯಕ್ಕೆ 350 ಕಿ.ಮೀಟರ್ ದೂರದಲ್ಲಿ ಚಂಡಮಾರುತ ಕೇಂದ್ರೀಕೃತವಾಗಿದ್ದು, ಇದು ಬುಧವಾರ ಮಧ್ಯಾಹ್ನದ ಹೊತ್ತಿಗೆ ತೀವ್ರವಾಗಿ ಪೂರ್ವ ಹಾಗೂ ಈಶಾನ್ಯದತ್ತ ತಿರುಗಿ ಕರಾವಳಿಯನ್ನೂ ದಾಟುವ ಸಂಭವ ಇದೆ.
ಧಾರಾಕಾರ ಮಳೆ : ವಾಯುಭಾರ ಕುಸಿತದ ಕಾರಣ ಸೋಮವಾರದಿಂದಲೇ ಕರಾವಳಿಯ ಹಲವೆಡೆಗಳಲ್ಲಿ ಮಳೆಯಾಗಿದೆ. ಮಂಗಳವಾರ ಕಾಸರಗೋಡಿನಲ್ಲಿ ಧಾರಾಕಾರವಾಗಿ ಮಳೆ ಸುರಿದು ಜನಜೀವನ ಅಸ್ತವ್ಯಸ್ತವಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಗುಡುಗು ಸಹಿತ ದಿನವಿಡೀ ಸುರಿಮಳೆ ಸುರಿದಿದೆ. ಗಂಗೊಳ್ಳಿ ಸಮುದ್ರತೀರ ಹಾಗೂ ಕುಂದಾಪುರಗಳಲ್ಲಿ ಗಾಳಿಯ ಆರ್ಭಟ ತೀವ್ರವಾಗಿದ್ದು, ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.
ಮುನ್ಸೂಚನೆಯ ಪ್ರಕಾರ ಕರಾವಳಿ ತೀರದಲ್ಲಿ ಬುಧವಾರ ರಭಸದಿಂದ ಗಾಳಿ ಬೀಸಲಿದ್ದು, ಕರಾವಳಿ ತೀರದ ಗ್ರಾಮಸ್ಥರಿಗೆ ಹಾಗೂ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ತೀವ್ರಗೊಳ್ಳುತ್ತಿರುವ ಚಂಡಮಾರುತದ ಪ್ರಭಾವ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಕೊಡಗು ಹಾಗೂ ಬೆಳಗಾವಿ ಜಿಲ್ಲೆಗಲ್ಲೂ ಕಂಡುಬರಲಿದೆ ಎಂದು ಇಲಾಖೆ ತಿಳಿಸಿದೆ.
ಅಧಿಕಾರಿಗಳಿಗೆ ಸೂಚನೆ : ಇದು ಮುಂಗಾರು ಮಳೆಯ ಸೂಚನೆ ಎಂದು ಒಳನಾಡಿನ ರೈತರು ಹರ್ಷ ಪಡುತ್ತಿದ್ದರೂ, ಕರಾವಳಿ ತೀರದ ಜನ ಚಂಡಮಾರುತದ ಭೀತಿಯಿಂದ ತತ್ತರಿಸಿದ್ದಾರೆ. ವಾಯುಭಾರ ಕುಸಿತದ ಪರಿಣಾಮವಾಗಿ ರಾಜ್ಯದ ಹಲವೆಡೆಗಳಲ್ಲಿ ಗರಿಷ್ಠ ತಾಪಮಾನ ಗಣನೀಯವಾಗಿ ಕುಸಿದಿದೆ. ಉತ್ತರ, ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗ, ಬೆಳಗಾವಿ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರಿಗೆ ಚಂಡಮಾರುತದ ಪರಿಣಾಮವಾಗಿ ಆಸ್ತಿ ಅಥವಾ ಪ್ರಾಣ ಹಾನಿ ಆಗದಂತೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...