ಜೂನ್ ಮೊದಲ ವಾರದಲ್ಲೇ ರಾಜ್ಯಕ್ಕೆಕಾಲಿಡಲಿದೆ ಮುಂಗಾರು ಮಳೆ
ಬೆಂಗಳೂರು : ಈ ಬಾರಿ ಮುಂಗಾರು ಮಳೆ ಜೂನ್ ಮೊದಲ ವಾರದಲ್ಲೇ ಕೇರಳ ಹಾಗೂ ಕರ್ನಾಟಕಕ್ಕೆ ಕಾಲಿಡುವ ಸೂಚನೆಗಳು ದೊರೆತಿವೆ. ಈ ವಿಷಯವನ್ನು ಭಾರತೀಯ ಹವಾಮಾನ ಇಲಾಖೆಯ ತಜ್ಞರು ತಿಳಿಸಿದ್ದಾರೆ.
ಬಂಗಾಳಕೊಲ್ಲಿ, ಅರಬ್ಬಿ ಸಮುದ್ರ ಹಾಗೂ ಹಿಂದೂ ಮಹಾಸಾಗರದ ಅಲೆಗಳ ಹಾಗೂ ವಾಯುಗುಣದ ಲೆಕ್ಕಾಚಾರದ ಪ್ರಕಾರ ಜೂನ್ ಮೊದಲ ವಾರದಲ್ಲೇ ಮುಂಗಾರು ಕರ್ನಾಟಕ ಹಾಗೂ ಕೇರಳಕ್ಕೆ ಕಾಲಿಡಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದು ಕೇವಲ ಪ್ರಾಥಮಿಕ ವರದಿ ಆಗಿದ್ದು, ಮುಂದಿನ ಶುಕ್ರವಾರದ ಹೊತ್ತಿಗೆ ನಿಖರವಾದ ಮಾಹಿತಿ ದೊರಕಲಿದೆ ಎಂದೂ ಅವರು ತಿಳಿದ್ದಾರೆ. ಈ ಬಾರಿರಾಜ್ಯದಲ್ಲಿ ವಾಡಿಕೆಯಂತೆ ಮಳೆ ಆಗಲಿದೆ. ಏಪ್ರಿಲ್ ತಿಂಗಳಿನಲ್ಲಿಯೇ ಕರ್ನಾಟಕದ ಒಳನಾಡಿನ ಹಲವು ಭಾಗಗಳಲ್ಲಿ ನಿಗದಿತ ಪ್ರಮಾಣಕ್ಕಿಂತಲೂ ಹೆಚ್ಚು ಮಳೆಯಾಗಿದೆ.
ಅಂದರೆ, ಕರ್ನಾಟಕದ ಮಂದಿಗೆ ಜೂನ್ ಮೊದಲ ವಾರದಿಂದಲೇ ಬೇಸಿಗೆಯ ತಾಪದಿಂದ ಮುಕ್ತಿ ದೊರಕುವ ಸೂಚನೆ ಸಿಕ್ಕಂತಾಗಿದೆ. ಮುಂಗಾರು ಹಾಗೂ ಹಿಂಗಾರು ಮಳೆಗಳೆರಡೂ ನಿಗದಿತ ಸಮಯಕ್ಕೆ ಬರಲಿವೆ ಎಂಬ ಸುದ್ದಿಯಿಂದ ರಾಜ್ಯದ ರೈತರೂ ಹರ್ಷಚಿತ್ತರಾಗಿದ್ದಾರೆ.
ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲೇ ಬಿದ್ದ ಅಕಾಲಿಕ ಮಳೆಗೇ ಹೊಲಗದ್ದೆಗಳನ್ನು ಹದ ಮಾಡಿರುವ ರೈತರು ಬಿತ್ತನೆಗೆ ಸಜ್ಜಾಗಿದ್ದು, ಮುಂಗಾರು ಮಳೆಗಾಗಿ ಮುಗಿಲು ನೋಡುತ್ತಿದ್ದಾರೆ.