ಮತ್ತೆ ತಟ್ಟಿದೆ ಬೇಸಿಗೆಯ ಬಿಸಿ
ಬೆಂಗಳೂರು : ಏಪ್ರಿಲ್ ತಿಂಗಳಿನಲ್ಲಿ ಅಕಾಲಿಕವಾಗಿ ಸುರಿದ ದಾಖಲೆಯ ಮಳೆ ನಿಂತು ವಾರಗಳೇ ಕಳೆದರೂ ರಾಜ್ಯಾದ್ಯಂತ ಒಳಚರಂಡಿಗಳಿಂದ ಉಕ್ಕಿ ಹರಿಯುತ್ತಿರುವ ನೀರು ಮಾತ್ರ ನಿಂತಿಲ್ಲ. ಹಳ್ಳ ಕೊಳ್ಳಗಳಿಂದ ಕೂಡಿದ ರಸ್ತೆಯಲ್ಲಿ ನೀರು ನಿಂತೇ ಇದೆ.
ಬೆಂಗಳೂರಿನಲ್ಲಿ ಬಾಯ್ತೆರೆದ ಮ್ಯಾನ್ಹೋಲ್ಗಳಿಂದ ಹೊಲಸು ನೀರು ಉಕ್ಕಿ ರಸ್ತೆಗಳಲ್ಲಿ ಹರಿಯುತ್ತಿದೆ. ಬಿ.ವಿ.ಕೆ. ಅಯ್ಯಂಗಾರ್ ರಸ್ತೆ ಕೊಳಚೆ ನೀರಿನಲ್ಲಿ ಮುಳುಗಿಹೋಗಿದೆ. ತಗ್ಗು ಪ್ರದೇಶಗಳಲ್ಲಿ ಹಾಗೂ ಹಳ್ಳಗಳಿರುವ ಸ್ಥಳದಲ್ಲಿ ನಿಂತ ಮಳೆಯ ನೀರು ಕೊಳೆತು ನಾರುತ್ತಿದೆ. ಸೊಳ್ಳೆಗಳ ಆಶ್ರಯ ತಾಣವಾಗಿದೆ.
ಈ ಮಧ್ಯೆ ಬೆಂಗಳೂರಿನಲ್ಲಿ ಬಿಸಿಲು ಏರಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ತಲುಪಿತ್ತು. ಶನಿವಾರ ಕೂಡ ಸುಡು ಬಿಸಿಲಿನ ಅನುಭವ ಆಯಿತು. ಮೋಡ, ಮಳೆ ಇಲ್ಲದ ನಿರ್ಮಲ ನೀಲಾಕಾಶದಲ್ಲಿ ಪ್ರಜ್ವಲಿಸುತಿಹ ಸೂರ್ಯ ಮತ್ತೆ ಬೇಸಿಗೆಯ ಬಿಸಿಯನ್ನು ಭೂಮಿಗೆ ತಟ್ಟಿಸಿಹ.
ರಾಜ್ಯದ ಉತ್ತರ ಒಳನಾಡಿನ ಅಲ್ಲಲ್ಲಿ ಮಳೆ ಆಗಿದೆ. ದಕ್ಷಿಣ ಒಳನಾಡು ಹಾಗೂ ಕರಾವಳಿಯಲ್ಲಿ ಒಣಹವೆ ಇತ್ತು. ದಕ್ಷಿಣ ಒಳನಾಡಿನಲ್ಲಿ ಗರಿಷ್ಠ ತಾಪಮಾನ ಅಧಿಕವಾಗಿದ್ದರೆ, ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಅಲ್ಪ ಬದಲಾವಣೆ ಆಗಿತ್ತು.
ಉತ್ತರ ಒಳನಾಡು ಹಾಗೂ ಕರಾವಳಿಯ ಅನೇಕ ಕಡೆಗಳಲ್ಲಿ ಗರಿಷ್ಠ ತಾಪಮಾನ ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಾಗಿತ್ತು. ರಾಜ್ಯದ ಅತಿ ಹೆಚ್ಚು ತಾಪಮಾನ 43ಡಿಗ್ರಿ ಸೆಲ್ಸಿಯಸ್ ಗುಲ್ಬರ್ಗಾದಲ್ಲಿ ದಾಖಲಾಗಿತ್ತು. ಮುನ್ಸೂಚನೆಯ ಪ್ರಕಾರ ರಾಜ್ಯದಲ್ಲಿ ಒಣಹವೆ ಮುಂದುವರಿಯಲಿದೆ.
ಮುಂದಿನ 48 ಗಂಟೆಗಳ ಅವಧಿಯಲ್ಲಿ ರಾಜ್ಯದ ಒಟ್ಟಾರೆ ತಾಪಮಾನದಲ್ಲಿ ಅಂತಹ ಹೆಚ್ಚಿನ ಬದಲಾವಣೆಗಳೇನೂ ಕಂಡುಬರುವುದಿಲ್ಲ. ಸ್ಥಳೀಯ ಹವಾಮಾನ ಮುನ್ಸೂಚನೆಯಂತೆ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇದ್ದು, ದಿನದ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ತಲುಪುವ ಸೂಚನೆ ಇದೆ.