ಕಪ್ಪು ಪಟ್ಟಿ ಧರಿಸಿ ಮೌಲ್ಯಮಾಪನ : ಪದವಿಪೂರ್ವಶಿಕ್ಷಕರ ನಿರ್ಧಾರ
ಬೆಂಗಳೂರು : ಪದವಿಪೂರ್ವ ಪರೀಕ್ಷೆಗಳು ಕೊನೆಯ ಹಂತದಲ್ಲಿವೆ. ಇನ್ನು ಮೌಲ್ಯಮಾಪನ. ಕಳೆದ ವರ್ಷ ಪಿ.ಯು.ಸಿ. ಪರೀಕ್ಷೆಗಳು ಮುಗಿದ ತರುವಾಯು ಪದವಿಪೂರ್ವ ಶಿಕ್ಷಣ ಮಂಡಳಿಯ ಶಿಕ್ಷಕರು ತಮ್ಮ ಬೇಡಿಕೆಗಳನ್ನು ಮುಂದಿಟ್ಟು, ಮೌಲ್ಯಮಾಪನ ಬಹಿಷ್ಕರಿಸಿದ್ದರು.
ವಾದ, ವಿವಾದ, ಚರ್ಚೆಯೆಲ್ಲಾ ವಿಫಲವಾಗಿ ಎಸ್ಮಾ ಜಾರಿ, ಜೈಲ್ಭರೋವರೆಗೂ ಮುಟ್ಟಿದ್ದ ಶಿಕ್ಷಕರು - ಸರಕಾರದ ಸಂಘರ್ಷ ಕೊನೆಗೂ ಸುಖಾಂತ ಕಂಡಿತು. ಮೌಲ್ಯಮಾಪನವೂ ಆಯಿತು. ಫಲಿತಾಂಶವೂ ಹೊರಬಿತ್ತು. ಈ ವರ್ಷ ಬಹುಶಃ ಮೌಲ್ಯಮಾಪನಕ್ಕೆ ಅಷ್ಟೊಂದು ಅಡ್ಡಿ ಆಗಲಾರದು. ಆದರೂ, ಪದವಿ ಪೂರ್ವ ಶಿಕ್ಷಕರು ಮತ್ತೆ ತಮ್ಮ ಬೇಡಿಕೆಗಳಿಗಾಗಿ ಸಾಂಕೇತ ಹೋರಾಟ ನಡೆಸಲು ನಿರ್ಧರಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪದವಿ ಪೂರ್ವ ಶಿಕ್ಷಣ ಅಧಿಕಾರಿಗಳ, ಪ್ರಾಂಶುಪಾಲರ ಮತ್ತು ಬೋಧಕೇತರ ಸಿಬ್ಬಂದಿ ಒಕ್ಕೂಟದ ಅಧ್ಯಕ್ಷ ಎಂ.ಎಲ್.ವಿ. ನಾಯ್ದು, ಕಳೆದ ವರ್ಷ ಅನಗತ್ಯವಾಗಿ ನೌಕರರ ಮೇಲೆ ಹೇರಲಾಗಿದ್ದ ಎಸ್ಮಾ ಕೇಸುಗಳನ್ನು ವಾಪಸ್ಸು ಪಡೆಯುವುದು ಸೇರಿದಂತೆ ತಮ್ಮ ಕೆಲವು ಬೇಡಿಕೆಗಳ ಈಡೇರಿಕೆಗಾಗಿ ಸರಕಾರವನ್ನು ಒತ್ತಾಯಿಸಲು ಎಲ್ಲ ಶಿಕ್ಷಕರೂ ಕಪ್ಪುಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ ಮಾಡುತ್ತಾ ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸುವರು ಎಂದು ಹೇಳಿದರು.
ಕೇಸುಗಳನ್ನು ಖುಲಾಸೆ ಮಾಡುವುದಾಗಿ ರಾಜ್ಯಸಭೆಯಲ್ಲಿ ಭರವಸೆ ಕೊಟ್ಟರೂ, 10 ತಿಂಗಳಿಂದ ಅದನ್ನು ಅನುಷಜ್ಞ್ಠನಕ್ಕೆ ತಂದಿಲ್ಲ. ಪದವಿ ಪೂರ್ವ ಶಿಕ್ಷಣ ಸಂಸ್ಥೆಗಳ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯ ಸ್ಥಿತಿ- ಗತಿ ಕುರಿತು ವರದಿ ಸಲ್ಲಿಸುವಂತೆ ರಚಿಸಲಾಗಿದ್ದ ಸಂಯುಕ್ತ ಸಮಾಲೋಚನಾ ಸಮಿತಿಯನ್ನು ಸರ್ಕಾರ ಏಕಪಕ್ಷೀಯವಾಗಿ ರದ್ದು ಮಾಡಿರುವುದು ಸರಿಯಲ್ಲ ಸರ್ಕಾರಕ್ಕೆ ತೊಂದರೆ ಕೊಡಬೇಕೆನ್ನುವುದು ನಮ್ಮ ಉದ್ದೇಶವಲ್ಲ. ನ್ಯಾಯಕ್ಕಾಗಿ ಈ ಹೋರಾಟ ಎಂದು ನಾಯ್ಡು ವಿವರಿಸಿದರು.
- ಕೆಲಸಕ್ಕೆ ತಕ್ಕ ವೇತನ ಕೊಡಬೇಕು
- ಎಲ್ಲಾ ಪದವಿ ಪೂರ್ವ ಕಾಲೇಜುಗಳಲ್ಲಿ ಗ್ರಂಥಪಾಲಕರ ಹಾಗೂ ದೈಹಿಕ ಶಿಕ್ಷಕರ ಹುದ್ದೆ ಸೃಷ್ಟಿಸಿ, ನೇಮಕಾತಿ ಮಾಡಬೇಕು
- ಬೋಧಕೇತರ ಹುದ್ದೆಗಳಿಗೆ ವಿಧಿಸಲಾಗಿರುವ ಆರ್ಥಿಕ ಮಿತವ್ಯಯ ಸಡಿಲಿಸಿ, ಕನಿಷ್ಠ ಸಿಬ್ಬಂದಿ ನೇಮಕ ಮಾಡಬೇಕು
- ಬೋಧಕೇತರ ಸಿಬ್ಬಂದಿಯನ್ನು ಪದವಿ ಪೂರ್ವ ಇಲಾಖಾ ವ್ಯಾಪ್ತಿಗೆ ಒಳಪಡಿಸಬೇಕು
- ಎಂ.ಫಿಲ್ ಹಾಗೂ ಪಿಎಚ್.ಡಿ. ಪದವಿ ಪಡೆದವರಿಗೆ ಕ್ರಮವಾಗಿ 2 ಮತ್ತು 4 ಮುಂಗಡ ವೇತನ ಬಡ್ತಿ ನೀಡಬೇಕು
ಶಿಕ್ಷಕರು ತಮ್ಮ ಬೇಡಿಕೆಗೆ ಹೋರಾಡುವುದು ತಪ್ಪಲ್ಲ ಆದರೆ, ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಡಕಾಗದಂತೆ ಶಿಕ್ಷಕರು ವರ್ತಿಸಲಿ ಎಂಬುದು ಪಾಲಕರ ಕೋರಿಕೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...