ಕೋಹಿನೂರ್ ವಜ್ರ ಭಾರತಕ್ಕೆ ಮರಳಿ ಬಂದೀತೆ?
ನವದೆಹಲಿ : ಮಹಾರಾಜಾ ರಣಜಿತ್ಸಿಂಗ್ನ ಪುತ್ರ ದಲೀಪ್ ಸಿಂಗ್ರಿಂದ ಬಲವಂತವಾಗಿ ಬ್ರಿಟೀಷರು ವಶ ಪಡಿಸಿಕೊಂಡಿದ್ದ ಕೊಹಿನೂರ್ ವಜ್ರವನ್ನು ಬ್ರಿಟನ್ನಿಂದ ಮರಳಿ ಭಾರತಕ್ಕೆ ತರಲು ಸಾಧ್ಯವೇ? ಕಷ್ಟ ಸಾಧ್ಯ ಎಂದು ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಖಾತೆ ಸಚಿವ ಅನಂತ್ಕುಮಾರ್ ಹೇಳಿದ್ದಾರೆ.
ಆದರೂ ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಮಾತುಕತೆಯಿಂದ ಈ ಅಮೂಲ್ಯ ವಜ್ರವನ್ನು ಭಾರತಕ್ಕೆ ತರುವ ಪ್ರಯತ್ನ ಮಾಡಬಹುದು ಎಂಬ ಇಂಗಿತವನ್ನೂ ವ್ಯಕ್ತಪಡಿಸಿದ್ದಾರೆ. ಬುಧವಾರ ರಾಜ್ಯಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು.
ಚಾರಿತ್ರಿಕ ಮಹತ್ವದ ಪುರಾತನ ಕಲಾಕೃತಿಗಳನ್ನು ಹಿಂತಿರುಗಿಸುವ ಬಗ್ಗೆ ನಿರ್ಣಯ ಮಾಡಿರುವ ಯುನೆಸ್ಕೋ ಸಹ ಈ ನಿಟ್ಟಿನಲ್ಲಿ ಅಸಹಾಯಕವಾಗಿದೆ. ಬ್ರಿಟನ್ ಈ ನಿರ್ಣಯಕ್ಕೆ ಸಹಿ ಮಾಡದಿರುವುದರಿಂದ ಏನೂ ಮಾಡದ ಪರಿಸ್ಥಿತಿ ಇದೆ. ಭಾರತ ಸ್ವಾತಂತ್ರ್ಯ ಪಡೆವ ಮೊದಲು ವಿದೇಶಗಳ ವಸ್ತುಸಂಗ್ರಹಾಲಯ ಸೇರಿದ ಅಥವಾ ಇತರರ ಕೈವಶವಾದ ಅಮೂಲ್ಯ ಚಾರಿತ್ರಿಕ ಹಾಗೂ ಪಾರಂಪರಿಕ ವಸ್ತುಗಳನ್ನು ಮರಳಿ ಪಡೆಯುವುದು ಕ್ಲಿಷ್ಟಕರ. ಕೇವಲ ದ್ವಿಪಕ್ಷೀಯ ಮಾತುಕತೆಗಳ ಮೂಲಕ ಇದು ಸಾಧ್ಯವಾಗಬಹುದು ಎಂದು ಅವರು ರಾಜ್ಯಸಭೆಗೆ ತಿಳಿಸಿದ್ದಾರೆ.
ಆದರೆ, ಕೆಲವೇ ದಿನಗಳ ಹಿಂದೆ ಪ್ರಧಾನಿ ವಾಜಪೇಯಿ ಅವರು ಯಾರು ಈ ವಜ್ರವನ್ನು ತೆಗೆದುಕೊಂಡು ಹೋದರೋ ಅವರೇ ಅದನ್ನು ಭಾರತಕ್ಕೆ ಸುರಕ್ಷಿತವಾಗಿ ಹಿಂತಿರುಗಿಸುತ್ತಾರೆ ಎಂಬ ನಂಬಿಕೆ ತಮಗಿದೆ ಎಂದು ಹೇಳಿದ್ದರು. ಪ್ರಸ್ತುತ ಕೊಹಿನೂರ್ ಬ್ರಿಟನ್ನಲ್ಲಿರುವ ಕಿರೀಟದ ಒಂದಂಗವಾಗಿ ಹೋಗಿದೆ. ಈ ವಜ್ರದ ಮೇಲೆ ಬ್ರಿಟನ್ ಅಷ್ಟೇ ಅಲ್ಲದೆ ಪಾಕಿಸ್ತಾನ್, ಇರಾನ್ ಕೂಡ ತನ್ನ ಹಕ್ಕು ಪ್ರತಿಪಾದಿಸಿವೆ.
ಭಾರತವಂತೂ 1947ರಿಂದಲೇ ಈ ಅಮೂಲ್ಯ ವಜ್ರವನ್ನು ಭಾರತದ ವಶಕ್ಕೆ ಒಪ್ಪಿಸುವಂತೆ ಪದೇಪದೇ ಮನವಿ ಸಲ್ಲಿಸುತ್ತಲೇ ಬಂದಿದೆ. ಕಳೆದ ವರ್ಷ ಕೊಹಿನೂರನ್ನು ಮರಳಿಸುವಂತೆ ಬ್ರಿಟನ್ನಿಗೆ ಭಾರತ ಅಧಿಕೃತ ಪತ್ರ ಬರೆದಿತ್ತು. ಈ ಪತ್ರಕ್ಕೆ ಸಂಸತ್ತಿನ ಉಭಯ ಸದನಗಳ 50 ಸದಸ್ಯರು ಸಹಿ ಹಾಕಿದ್ದರು. ಹೆಸರಾಂತ ಪತ್ರಕರ್ತ ಕುಲದೀಪ್ನಯ್ಯರ್ ರಾಜ್ಯಸಭೆಯಲ್ಲಿ ಈ ಬಗೆಗೆ ವಿಧೇಯಕವನ್ನು ಸಹ ಮಂಡಿಸಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಮುಖಪುಟ / ಇವತ್ತು... ಈ ಹೊತ್ತು...