ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಲ್ಲಾಗು ಬೆಟ್ಟದ ಮೇಲೆ, ಕಲ್ಲಾಗು ಕಷ್ಟಗಳ ಮಳೆ ಸುರಿಯೆ..

By Super
|
Google Oneindia Kannada News

ಕರ್ನಾಟಕ ಸಂಪದ್ಭರಿತ ನಾಡು. ನೈಸರ್ಗಿಕ ಸಂಪನ್ಮೂಲಗಳಿಂದ ತುಂಬಿದ ಸಿರಿವಂತ ನಾಡು. ಗಂಧದ ಬೀಡು. ಪಶು, ಪಕ್ಷಿ, ಗಿರಿ, ಝರಿಗಳಿಂದ ತುಂಬಿದ ಬೀಡು. ಊಟಿ, ಕೊಡೈಕೆನಾಲ್‌, ಶಿಮ್ಲಾ, ಕಾಶ್ಮೀರದಂತಹ ವಿಖ್ಯಾತ ಗಿರಿಧಾಮಗಳು ಕರ್ನಾಟಕದಲ್ಲಿಲ್ಲವಾದರೂ, ಕುಲುಮನಾಲಿ, ಡಾರ್ಜಿಲಿಂಗ್‌, ಮಸ್ಸೂರಿಗೆ ನಾವೇನೂ ಕಡಿಮೆ ಇಲ್ಲ ಎನ್ನುವಂತಹ ತಂಪಾದ ಎತ್ತರ ಪ್ರದೇಶಗಳು ಕರುನಾಡಿನ ಕೀರ್ತಿಕಳಶಕ್ಕೆ ಮಾಣಿಕ್ಯದಂತಿವೆ. ಬನ್ನಿ ಬಿಸಿಲಿನಿಂದ ಮುಕ್ತಿ ಪಡೆಯಲು ಗಿರಿಧಾಮಕ್ಕೆ ಹೋಗೋಣ.

ಕುದುರೆಮುಖ : ಕಬ್ಬಿಣದ ಅದಿರು ಕಂಪನಿಯಿಂದ ಹೆಸರುವಾಸಿಯಾದ ಈ ಗಿರಿಧಾಮ ಬೆಂಗಳೂರಿನಿಂದ 316 ಕಿ.ಮೀಟರ್‌ ದೂರದಲ್ಲಿದೆ. ನೈಸರ್ಗಿಕ ಅರಣ್ಯದಿಂದ ಕೂಡಿದ ಈ ಪ್ರದೇಶ ಕಬ್ಬಿಣದ ಅದಿರು ನಿಕ್ಷೇಪದಿಂದ ಶ್ರೀಮಂತವಾಗಿದೆ.

ಚಿಕ್ಕಮಗಳೂರು, ಶೃಂಗೇರಿ ಹಾಗೂ ಮಂಗಳೂರಿನಿಂದ ಉತ್ತಮ ರಸ್ತೆ ಇದ್ದು, ಬಸ್‌ ಸೌಕರ್ಯ ಇದೆ. ರಸ್ತೆಯುದ್ದಕ್ಕೂ ಹತ್ತಾರು ಜಲಪಾತಗಳನ್ನು ವೀಕ್ಷಿಸುವ ಅವಕಾಶವೂ ಇದೆ. ಪರಿಸರ ಪ್ರಿಯರಿಗೆ ಇದೊಂದು ಸುಂದರ ತಾಣ. ಕುದುರೆ ಮುಖದಿಂದ ಶೃಂಗೇರಿಗೆ ತೆರಳಿ ಶಾರದಾಂಬೆಯ ದರ್ಶನವನ್ನೂ ಮಾಡಬಹುದು.

ಕೆಮ್ಮಣ್ಣುಗುಂಡಿ : ಕೆಂಪು ಮಣ್ಣಿನ ಗಿರಿಪ್ರದೇಶದ ಕಂದರದಿಂದಾಗಿ ಕೆಮ್ಮಣ್ಣುಗುಂಡಿ ಎಂದೇ ಖ್ಯಾತವಾಗಿರುವ ಬೆಟ್ಟಶ್ರೇಣಿ. ಬೆಂಗಳೂರಿನಿಂದ ಇಲ್ಲಿಗೆ 257 ಕಿ.ಮೀ. ಹಾಸನ, ಮೈಸೂರು, ಬೆಂಗಳೂರು, ಶಿವಮೊಗ್ಗದಿಂದ ಬಸ್‌ ಸೌಕರ್ಯ ಇದೆ. ಸುಂದರಾತಿ ಸುಂದರವಾದ ಗಿರಿಶ್ರೇಣಿ ಹಾಗೂ ಗಿರಿಧಾಮ. ಮಧುಚಂದ್ರಕ್ಕೆ ಹೇಳಿ ಮಾಡಿಸಿದ ತಾಣ.

ಹಸುರು ಕಾನನಗಳ ಮಧ್ಯೆ ಕಂಗೊಳಿಸುವ ಈ ತಾಣದ ಸನಿಹದಲ್ಲೇ ಕಲ್ಲತ್ತಗಿರಿ ಜಲಪಾತವೂ ಇದೆ. ಪುರಾತನ ದೇವಾಲಯವೂ ಇದೆ. ಕೆಮ್ಮಣ್ಣು ಗುಂಡಿ ಬೆಟ್ಟದ ಮೇಲೆ ಸುಸಜ್ಜಿತವಾದ ಪ್ರವಾಸಿಧಾಮ, ಖಾಸಗಿ ಹೊಟೆಲ್‌ಗಳೂ ಇವೆ.

ಬಿಳಿಗಿರಿರಂಗನ ಬೆಟ್ಟ : ಬೆಂಗಳೂರಿಗೆ 247 ಕಿ.ಮೀಟರ್‌ ಹಾಗೂ ಮೈಸೂರಿನಿಂದ 114 ಕಿ.ಮೀಟರ್‌ ದೂರದಲ್ಲಿರುವ ಬಿಳಿಗಿರಿರಂಗನ ಬೆಟ್ಟ, ಕಾವೇರಿ ನದಿ ತೀರದಲ್ಲಿ ಪವಡಿಸಿರುವ ಶ್ರೀರಂಗನಾಥನ ಪುಣ್ಯಭೂಮಿ. 540 ಚದರ ಕಿಲೋ ಮೀಟರ್‌ ಹಬ್ಬಿರುವ ನೈಸರ್ಗಿಕ ಅರಣ್ಯದ ತವರು. ಶ್ರೀಗಂಧ, ತೇಗ, ಮತ್ತಿ, ಹೊನ್ನೆಯೇ ಮೊದಲಾದ ಬೆಲೆಬಾಳುವ ಮರಗಳು, ಜಿಂಕೆ, ಆನೆ, ಕರಡಿ, ಚಿರತೆ, ಹುಲಿಗಳಿಂದ ಕೂಡಿದ ಅರಣ್ಯ ಪ್ರದೇಶ.

ಸಮುದ್ರಮಟ್ಟದಿಂದ 5,091 ಅಡಿ ಎತ್ತರದಲ್ಲಿರುವ ಈ ಪ್ರದೇಶದಲ್ಲಿ ವನ್ಯಜೀವಿ ಸಂಕುಲಗಳನ್ನು ಕಾಣಬಹುದು. ಬಿಳರಂಗನ ಸುಂದರ ಹಾಗೂ ಪುರಾತನ ದೇವಾಲಯವೂ ಇಲ್ಲಿದೆ. ಶಿವನಸಮುದ್ರದ ಗಂಗರಾಜರ ಆಳ್ವಿಕೆಯ ಕಂಚಿಕೋಟೆಯೂ ಇದೆ. ಇಲ್ಲಿಗೆ ಸಮೀಪದ ಪಶ್ಚಿಮ ಘಟ್ಟಗಳ ಸೆರಗಿನಲ್ಲಿರುವ ಹಿಮವದ್ಗೋಪಾಲ ಸ್ವಾಮಿ ಬೆಟ್ಟದಲ್ಲಿ ಪ್ರತಿ ವರ್ಷ ವೈಶಾಖ ಮಾಸದಲ್ಲಿ ಅಂದರೆ ಏಪ್ರಿಲ್‌ ಅಥವಾ ಮೇ ತಿಂಗಳಿನಲ್ಲಿ ಎರಡು ವರ್ಷಕ್ಕೊಮ್ಮೆ ರಥೋತ್ಸವ ಜರುಗುತ್ತದೆ.

ಮಡಿಕೇರಿ : ಮೈಸೂರಿನಿಂದ 114, ಬೆಂಗಳೂರಿನಿಂದ 263 ಕಿ.ಮೀಟರ್‌ ದೂರದಲ್ಲಿರುವ ಮಡಿಕೇರಿ ಕೊಡಗಿನ ಹೆಮ್ಮೆಯ ನಾಡು. ಇಲ್ಲಿ ಕೆ.ಎಸ್‌.ಟಿ.ಡಿ.ಸಿ.ಯ ಮೌರ್ಯ ವ್ಯಾಲಿ ವ್ಯೂ ಹೊಟೆಲ್‌ ಇದೆ. ಕಾಫಿ ಬೆಳೆಯುವ ಈ ತಾಣದಲ್ಲಿ ಪ್ರಕೃತಿಯ ಸೊಬಗು ಸವಿಯಲು ಸಾಕಷ್ಟು ಜಾಗಗಳಿವೆ. ಸುಂದರವಾದ ನಗರವೂ ಇದೆ.

ಕನ್ನಡ ನಾಡಿನ ಜೀವನದಿ ಕಾವೇರಿ ನದಿಯ ಉಗಮಸ್ಥಾನ ತಲಕಾವೇರಿಯ ಪುರಾಣ ಹಾಗೂ ಇತಿಹಾಸ ಪ್ರಸಿದ್ಧ ಸ್ಥಳವೂ ಇದೆ. ಸಂರಕ್ಷಿಸಲ್ಪಟ್ಟ ಅಭಯಾರಣ್ಯವೂ ಹತ್ತಿರದಲ್ಲೇ ಇದೆ.

ನಂದಿ ಬೆಟ್ಟ : ಅದು ಬೆಟ್ಟ .. ಇದು ಬೆಟ್ಟವೋ ನಂಜುಂಡ, ಕುಡುಕರಿಗೆ ನಂದಿ ಬೆಟ್ಟವೋ.. ಎಂಬ ಆಪಾದನೆಯೂ ಈ ಗಿರಿಧಾಮಕ್ಕಿದೆ. ಬೆಂಗಳೂರಿನಿಂದ 60 ಕಿ.ಮೀ. ದೂರದ ಈ ಬೆಟ್ಟದಲ್ಲಿ ಹೋಟೆಲ್‌ ಮಯೂರ ವಸತಿ ಸೌಕರ್ಯ ಕಲ್ಪಿಸಿದೆ. ಬೆಂಗಳೂರಿನಿಂದ ಬೆಟ್ಟಕ್ಕೆ ನೇರ ಬಸ್‌ ಸೌಲಭ್ಯವಿದೆ.

ಸಮುದ್ರಮಟ್ಟದಿಂದ 1468 ಅಡಿ ಎತ್ತರದಲ್ಲಿರುವ ನಂದಿಬೆಟ್ಟ ಗಿರಿಧಾಮಗಳ ರಾಜ. ಮೈಸೂರು ಹುಲಿ ಟಿಪ್ಪೂ ಸುಲ್ತಾನರು ಬೇಸಿಗೆಯ ಕಾಲದಲ್ಲಿ ಬೆಂಗಳೂರಿನ ಬೇಸಿಗೆ ಅರಮನೆ ಅಥವಾ ನಂದಿ ಗಿರಿಧಾಮದಲ್ಲಿ ಉಳಿದುಕೊಳ್ಳುತ್ತಿದ್ದರು. ಈಗ ನಂದಿಬೆಟ್ಟ ಒಂದು ಪ್ರವಾಸಿ ಕೇಂದ್ರ. ಬೆಂಗಳೂರಲ್ಲಿ ಸಾರ್ಕ್‌ ಸಮ್ಮೇಳನ ನಡೆದ ಸಂದರ್ಭದಲ್ಲಿ ಈ ಬೆಟ್ಟ ಸಮಗ್ರ ಅಭಿವೃದ್ಧಿಯನ್ನು ಕಂಡಿತು.

ಹಚ್ಚ ಹಸುರಿನ ಹುಲ್ಲುಹಾಸು, ಪುರಾತನ 2 ದೇವಾಲಯ, ನೀರ ಝರಿ, 2000 ಅಡಿ ಆಳದ ಟಿಪ್ಪೂ ಡ್ರಾಪ್‌ (ಪ್ರಪಾತ) ಇಲ್ಲಿನ ಪ್ರಮುಖ ಆಕರ್ಷಣೆ. ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸದಲ್ಲಿ ಇದು ಇತಿಹಾಸ ಅಧ್ಯಯನ ಕೇಂದ್ರವೂ ಆಗುತ್ತದೆ.

English summary
Hill stations which makes Karnataka proud!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X