ಅಟಲ್ ಬಿಹಾರಿ ವಾಜಪೇಯಿ ಅವರಿಂದ ಪ್ರತಿಪಕ್ಷಗಳ ತರಾಟೆ
ಬೆಂಗಳೂರು : ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಜನ ಕಿಕ್ಕಿರಿದು ಸೇರಿದ್ದರು. ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಭಾಷಣ ಕೇಳಲು ಕಾದು ಕುಳಿತಿದ್ದರು. ನಿಗದಿತ ಸಮಯಕ್ಕಿಂತ 90 ನಿಮಿಷಗಳ ಕಾಲ ತಡವಾಗಿ ವೇದಿಕೆಗೆ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಆಗಮಿಸಿದರು.
ರಾಜ್ಯ ಬಿ.ಜೆ.ಪಿ. ಅಧ್ಯಕ್ಷ ಬಸವರಾಜ ಪಾಟೀಲ್ ಸೇಡಂ ಅವರು, ಪ್ರಧಾನಿ ಅವರಿಗೆ ಮೈಸೂರು ಪೇಟ ತೊಡಿಸಿ, ಸ್ವಾಗತಿಸಿದರು. ತಮ್ಮ ಎಂದಿನ ನಿರರ್ಗಳ ವಾಗ್ಝರಿಯ ಭಾಷಣ ಆರಂಭಿಸಿದ ಪ್ರಧಾನಿ, ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ತಂತ್ರ ಹೂಡಿ ಸಲ್ಲದ ಪ್ರಚಾರ ಪಡೆಯಲು ಯತ್ನಿಸುತ್ತಿರುವ ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.
ಪ್ರಜಾಪ್ರಭುತ್ವದ ನೀತಿಯನ್ನೇ ಕಡೆಗಣಿಸಿ, ಉಭಯ ಸದನಗಳ ಕಲಾಪಕ್ಕೂ ಅಡ್ಡಿ ಪಡಿಸಿದ ಪ್ರತಿಪಕ್ಷಗಳ ಧೋರಣೆಯನ್ನು ಖಂಡಿಸಿದರು. ಈ ಸಂಬಂಧ ತನಿಖೆ ನಡೆಸುವ ನ್ಯಾಯಮೂರ್ತಿಗಳ ವರದಿ ಸತ್ಯವನ್ನು ಬಹಿರಂಗ ಪಡಿಸುತ್ತದೆ. ಎಲ್ಲ ತಂತ್ರವೂ ಬಯಲಾಗುತ್ತದೆ ಎಂದರು.
ಪ್ರತಿಪಕ್ಷಗಳ ಪ್ರಚಾರಕ್ಕೆ ಪ್ರತಿಯಾಗಿ ಗುರುವಾರ ಸಂಜೆ ನಡೆದ ಎನ್.ಡಿ.ಎ. ಸಮರ್ಥನಾ ಸಮಾವೇಶದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಜಾರ್ಜ್ ಫರ್ನಾಂಡಿಸ್ ಕೂಡ ಮಾತನಾಡಿದರು. ಪ್ರತಿಪಕ್ಷಗಳು ಈ ಸುಳ್ಳು ಹಗರಣವನ್ನೇ ದೊಡ್ಡದು ಮಾಡಿ ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಮುಕ್ತ ಚರ್ಚೆಗೇ ಅವಕಾಶ ನೀಡಲಿಲ್ಲ. ಸಮರ್ಥನೆಗೆ ವೇದಿಕೆಯಿಲ್ಲದಂತೆ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಜನರೆದುರು ನಾವು ಬರಲೇ ಬೇಕಾಯಿತು ಎಂದರು.
ಕಾರ್ಯಕ್ರಮದಲ್ಲಿ ಸಚಿವರಾದ ಧನಂಜಯ ಕುಮಾರ್, ಅನಂತಕುಮಾರ್, ಬಸವರಾಜ ಪಾಟೀಲ್ ಸೇಡಂ, ಶ್ರೀನಿವಾಸ ಪ್ರಸಾದ್ ಮಾತನಾಡಿದರು. ಇದಕ್ಕೂ ಮುನ್ನ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಅವರನ್ನು ಮುಖ್ಯಮಂತ್ರಿ ಕೃಷ್ಣ, ಮೇಯರ್ ಪ್ರೇಮಾ ಕಾರ್ಯಪ್ಪ, ರಾಜ್ಯಪಾಲರಾದ ವಿ.ಎಸ್. ರಮಾದೇವಿ, ಬಸವರಾಜ ಪಾಟೀಲ್ ಸೇಡಂ, ಅನಂತಕುಮಾರ್, ವೈಕೋ ಮೊದಲಾದವರು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ಈ ಕಾರ್ಯಕ್ರಮದ ನಂತರ ಗುರುವಾರವೇ ಪ್ರಧಾನಿ ನವದೆಹಲಿಗೆ ಮರಳಲಿದ್ದಾರೆ.
ವಾರ್ತಾಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...